ಸಾರಾಂಶ
ಜನಜೀವನ ಅಸ್ತವ್ಯಸ್ತ, ಸಮುದಾಯ ಭವನದಲ್ಲಿ ಕಾಲ ಕಳೆದ ಕುಟಂಬಗಳು
ಕನ್ನಡಪ್ರಭ ವಾರ್ತೆ ಗಂಗಾವತಿನಗರ ಸೇರಿದಂತೆ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಕೆಲ ವಾರ್ಡುಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಭಗತ್ ಸಿಂಗ್ ನಗರ, ಮುಜಾರವ ಕ್ಯಾಂಪ್, ಗುಂಡಮ್ಮ ಕ್ಯಾಂಪ್ , ಹಿರೇಜಂತಗಲ್ ಸೇರಿದಂತೆ ಕೆಲ ವಾರ್ಡುಗಳಲ್ಲಿ ನೀರು ನುಗ್ಗಿದ್ದರಿಂದ 100ಕ್ಕೂ ಹೆಚ್ಚಿನ ಗುಡಿಸಲುಗಳು ಜಲಾವೃತಗೊಂಡಿವೆ.
ಹಳ್ಳ ಅಕ್ರಮ:ನಗರದ ಮದ್ಯ ಭಾಗದಲ್ಲಿರುವ ದುರಗಮ್ಮ ಹಳ್ಳವನ್ನು ಕೆಲವರು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದರಿಂದ ಮಳೆ ನೀರು ಸುಗುಮವಾಗಿ ಹೋಗದೆ ಗುಡಿಸಲುಗಳಿಗೆ ನುಗ್ಗಿದೆ. ಇತ್ತೀಚೆಗೆ ಹಳ್ಳ ನವೀಕರಿಸಿದ್ದರೂರು ಸಹ ಕೆಲವರು ಹಳ್ಳದ ಜಾಗೆಯನ್ನು ಆಕ್ರಮಿಸಿಕೊಂಡಿದ್ದರು. ಕೊಪ್ಪಳ ಬೈ ಪಾಸ್ ರಸ್ತೆ, ಎಸ್ ಬಿಎಚ್ ಮುಂಭಾಗದ ದುರಗಮ್ಮ ಹಳ್ಳ ಮತ್ತು ದುರಗಮ್ಮ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ಹಳ್ಳ ಭರ್ತಿಯಾಗಿ ಸೇತುವೆ ಮೇಲೆ ನೀರು ಹರಿಯಿತು.
ಅವೈಜ್ಞಾನಿಕ ಚರಂಡಿ ನಿರ್ಮಾಣ:ನಗರದ ಪ್ರಮುಖ ರಸ್ತೆಯ ಪಕ್ಕದಲ್ಲಿ ಚರಂಡಿಗಳು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿವೆ. ಮಳೆ ನೀರು ಚರಂಡಿ ಮೇಲೆ ಹೋಗದೆ ರಸ್ತೆ ಮೇಲೆ ಹರಿಯುತ್ತಿದ್ದು, ಇದರಿಂದಲೇ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಅಮೃತ ಸಿಟಿ ಯೋಜನೆಯಲ್ಲಿ ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಿಸಿದ್ದರೂ ಸಹ ಕೆಲ ಅಂಗಡಿಗಳ ಮಾಲೀಕರು ಸ್ಥಳ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದಾಗಿ ರಸ್ತೆಗಳು ಹಳ್ಳದಂತಾಗಿದ್ದವು.
ಸಮುದಾಯ ಭವನದಲ್ಲಿ ಜಾಗರಣಿ ಮಾಡಿದ ಕುಟಂಬಗಳು:ಧಾರಾಕಾರ ಮಳೆಯಿಂದಾಗಿ ಭಗತ್ ಸಿಂಗ್ ನಗರದ ಗುಡಿಸಲುಗಳಲ್ಲಿ ನೀರು ನುಗ್ಗಿದ ಪರಿಣಾಮವಾಗಿ ಜನ ಜೀವನ ಅಸ್ತವ್ಯಸ್ತೊಗಂಡಿತ್ತು. ಇದರಿಂದ ಮಕ್ಕಳ ಸಮೇತ ಕುಟಂಬಗಳು ಇಡೀ ರಾತ್ರಿ ಕಾಲ ಕಳೆದಿದ್ದಾರೆ. ಬೆಳಗ್ಗೆ ನೀರು ಇಳಿಮುಖವಾದ ನಂತರ ತಮ್ಮ ಗುಡಿಸಲುಗಳಿಗೆ ತೆರಳಿದ್ದಾರೆ.ಹಾನಿ ಪ್ರದೇಶಕ್ಕೆ ಮಾಜಿ ಶಾಸಕ ಮುನವಳ್ಳಿ ಭೇಟಿ:
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೆಲ ಬತ್ತದ ಗದ್ದೆಗಳು ಕೊಚ್ಚಿಕೊಂಡು ಹೋಗಿವೆ. ಸ್ಥಳಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ನೀಲಕಂಠ ಕಟ್ಟಿಮನಿ, ವಾಸುದೇವ ನವಲಿ, ರಮೇಶ್ ಚೌಡ್ಕಿ, ರಾಚಪ್ಪ ಸಿದ್ದಾಪುರ ಸೇರಿದಂತೆ ಅನೇಕರು ಇದ್ದರು.