ಸಾರಾಂಶ
ನಗರದ ಕ.ರಾ.ಶಿ ಸಂಸ್ಥೆಯ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ವಿಭಾಗದಿಂದ ಬೋಧಕ, ಬೋಧಕೇತರ ಸಿಬ್ಬಂದಿ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು.
ಕನ್ನಡಪ್ರಭವಾರ್ತೆ ಬೀದರ್
ದೈನಂದಿನ ಕಾರ್ಯಗಳ ಮಧ್ಯೆ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಕ್ರೀಡೆಯಲ್ಲಿ ಭಾಗಿಯಾಗುತ್ತಿದ್ದರೆ ದೈಹಿಕವಾಗಿಯೂ ಚುರುಕಾಗಿರಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ (ಕರಾಶಿ) ಸಂಸ್ಥೆ ಕಾರ್ಯದರ್ಶಿ ಸಿದ್ರಾಮ ಪಾರಾ ಅಭಿಪ್ರಾಯಪಟ್ಟರು.ನಗರದ ಕ.ರಾ.ಶಿ ಸಂಸ್ಥೆಯ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ವಿಭಾಗದಿಂದ ಆಯೋಜಿಸಲಾಗಿದ್ದ ಬೋಧಕ, ಬೋಧಕೇತರ ಸಿಬ್ಬಂದಿ ಒಳಗೊಂಡ ಸನ್ರೈಸ್ ಮತ್ತು ಬ್ಲೂಮೂನ್ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯ ಉದ್ಘಾಟಿಸಿ ಅವರು ಮಾತನಾಡಿದರು.
ಅಶ್ವಿನ ಚೌಹಾಣ ನೇತೃತ್ವದ ಬ್ಲೂಮೂನ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿ ಎಲ್ಲ ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತ್ತು. ಇವರ ಪರವಾಗಿ ಆನಂದ ಅತ್ಯಧಿಕ ರನ್ (48) ಗಳಿಸಿದರು. ಸಿದ್ದು 3, ರವಿಚಂದ್ರ ಮತ್ತು ವಿಜಯ ತಲಾ 2 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಡಾ. ಬಿ.ವಿ. ರವಿಚಂದ್ರ ನೇತೃತ್ವದ ಸನ್ರೈಸ್ ತಂಡ 3 ವಿಕೆಟ್ ಕಳೆದುಕೊಂಡು 9 ಓವರ್ಗಳಲ್ಲಿ ಗುರಿ ಮುಟ್ಟಿ 7 ವಿಕೆಟ್ಗಳಿಂದ ಪಂದ್ಯ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.ಮಹಾವಿದ್ಯಾಲಯದ ಪ್ರಾಚಾರ್ಯ ಡಾ, ಮಲ್ಲಿಕಾರ್ಜುನ ಹಂಗರಗೆ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದರು. ತೀರ್ಪುಗಾರರಾಗಿ ಮಹಮ್ಮದ ರಫಿ ತಾಳಿಕೋಟಿ, ಶ್ರೀಕಾಂತ ದೊಡ್ಡಮನಿ, ಡಾ. ಶಶಿಧರ ಪಾಟೀಲ, ಸೋಮನಾಥ ಬಿರಾದಾರ ಕಾರ್ಯನಿರ್ವಹಿಸಿದರು.
ಉಪಪ್ರಾಚಾರ್ಯ ಅನಿಲಕುಮಾರ ಚಿಕ್ಕಮನೂರ, ದೈಹಿಕ ನಿರ್ದೇಶಕರಾದ ಡಾ. ಮದಯ್ಯಾ ಸ್ವಾಮಿ, ಡಾ ರಾಜೇಂದ್ರ ಬಿರಾದಾರ, ಅಶೋಕ ಹುಡೆದ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.