ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಪಟ್ಟಣದ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಉಪಟಳ ಹೆಚ್ಚಾಗಿದ್ದು, ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಪಟ್ಟಣದ ಬಸ್ ನಿಲ್ದಾಣದ ಒಳಗಡೆ ಇರುವ ಖಾಲಿ ಜಾಗದಲ್ಲಿ ಕಾರು, ಜೀಪ್, ಬೈಕ್ ಹಾಗೂ ಇತರೆ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಬಸ್ ನಿಲ್ದಾಣದೊಳಗೆ ಖಾಸಗಿ ವಾಹನಗಳ ನಿರ್ಬಂಧ ಹೆರಬೇಕಾದ ಸಾರಿಗೆಯ ಘಟಕದ ಅಧಿಕಾರಿಗಳು ಜಾಣ ಕುರುಡತನ ತೋರುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದ್ದರೂ ಸಹಿತ ಜನರು ಅಲ್ಲಿ ತಮ್ಮ ವಾಹನ ನಿಲ್ಲಿಸುತ್ತಿಲ್ಲ. ಪಾರ್ಕಿಂಗ್ ಗೆ ಈಗ ನಿಗದಿಪಡಿಸಿರುವ ಸ್ಥಳದಲ್ಲಿ ಸಾಕಷ್ಟು ಬೈಕುಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ, ಸ್ಥಳ ವಿಸ್ತರಣೆ ಮಾಡಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿದೆ.
ಬಸ್ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಖಾಸಗಿ ವಾಹನಗಳು ಬೇಕಾಬಿಟ್ಟಿಯಾಗಿ ನಿಲ್ಲಿಸಲಾಗುತ್ತಿದೆ. ಕೂಡಲೇ ಘಟಕವು ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಸಮಸ್ಯೆ ಬಗೆಹರಿಸಬೇಕಾಗಿದೆ.ಕುಷ್ಟಗಿಯ ಬಸ್ ನಿಲ್ದಾಣದಲ್ಲಿ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಇರುವ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬೈಕುಗಳಿಗೂ ಸಾಕಾಗುವುದಿಲ್ಲ. ಈ ಬಸ್ ನಿಲ್ದಾಣಕ್ಕೆ ಭದ್ರತಾ ಸಿಬ್ಬಂದಿ ಇಲ್ಲ. ಕೂಡಲೇ ಇಲಾಖೆಯವರು ಸಿಬ್ಬಂದಿ ನೇಮಕಾತಿ ಮಾಡಿಕೊಂಡು ಸಮಸ್ಯೆಯ ನಿವಾರಣೆಗೆ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಗಾಣಿಗೇರ ಒತ್ತಾಯಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ಉಪಟಳ ಹೆಚ್ಚಾಗಿದ್ದು, ಗಮನಕ್ಕೆ ಇದೆ. ಆದರೆ, ನಿಲ್ದಾಣಕ್ಕೆ ಸೂಕ್ತ ಭದ್ರತೆ ಸಿಬ್ಬಂದಿಯನ್ನು ಒದಗಿಸಿಕೊಡುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಭದ್ರತಾ ಸಿಬ್ಬಂದಿ ನೇಮಕಾತಿ ಮಾಡಿಕೊಂಡರೆ ಈ ಸಮಸ್ಯೆ ಬಗೆ ಹರಿಯಲಿದೆ ಎಂದು ಡಿಪೋ ಮ್ಯಾನೇಜರ್ ಸುಂದರಗೌಡ ಪಾಟೀಲ ತಿಳಿಸಿದ್ದಾರೆ.