ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಂವಹನ ಕೌಶಲ್ಯ ಬೆಳೆಸಿಕೊಂಡರೆ ಯಾವುದೇ ಭಾಷೆಯನ್ನು ಸುಲಭವಾಗಿ ಅರ್ಥೈಸಿಕೊಂಡು ವ್ಯವಹರಿಸಲು ಸಾಧ್ಯ. ಅದು ಇಂಗ್ಲಿಷ್ ಭಾಷೆಗೂ ಹೊರತಾಗಿಲ್ಲ ಎಂದು ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ಬಿರಾದಾರ ಹೇಳಿದರು.ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿಚಾರ ಸಂಕಿರಣ ಕೊಠಡಿಯಲ್ಲಿ ಇಂಗ್ಲಿಷ್ ವಿಭಾಗದಿಂದ ರಾಜ್ಯಮಟ್ಟದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಮಾತನಾಡುವ, ಬರೆಯುವ ಹಾಗೂ ನಿಯೋಜಿತ ಕಾರ್ಯದ ಬರವಣಿಗೆಯ ಕುರಿತಾದ ಒಂದು ದಿನದ ಕಾರ್ಯಾಗಾರಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಾತನಾಡುವ ಕಲೆಯನ್ನು ಬೆಳೆಸಿಕೊಂಡರೆ ಬರೆಯುವ ಶೈಲಿಯೂ ಗೊತ್ತಾಗುತ್ತದೆ. ಕನ್ನಡವೂ ಮಾತೃ ಭಾಷೆಯಾಗಿದ್ದರಿಂದ ಕಲಿಕೆಗೆ ಸರಳವಾಗಿದೆ. ಅದರಂತೆ ಇಂಗ್ಲಿಷ್ ಅರಿಯಲು ಸುತ್ತಲಿನ ಪರಿಸರವು ಅಗತ್ಯ ಎಂದರು.
ಉತ್ತಮ ಸಂವಹನಕಾರರಾದರೆ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ. ಮಾತನಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳುವ ಬದ್ಧತೆಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಇಂಗ್ಲಿಷ್ ಕಲಿಯಲು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವುದರ ಜೊತೆಗೆ ಹಲವು ದಾರಿಗಳಿದ್ದು ನಮಗೆ ನಾವೇ ಗುರುಗಳಾಗಬೇಕು. ಜತೆಗೆ ಬರೆಯುವ ಸಂದರ್ಭದಲ್ಲಿ ಸಂಕೇತ ಮತ್ತು ಪದಗಳ ಬಳಕೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯ ಎಸ್.ಆರ್.ಮುಗನೂರಮಠ ಮಾತನಾಡಿ, ಮನುಷ್ಯನಲ್ಲಿ ಕನಸು ಕಾಣುವ, ಚಿಂತನೆ ಮಾಡುವ ಗುಣವಿರಬೇಕು. ಮೆದುಳಿನಲ್ಲಿನ ವರ್ಣಿಕೆ ಮತ್ತು ಬ್ರೋಕಾ ಮಾತುಗಳನ್ನು ಹೇಳುವ ಅಂಶಗಳಾಗಿವೆ. ಮಾತನಾಡುವ ಮತ್ತು ಬರವಣಿಗೆ ಕೌಶಲಗಳಿಗೆ ನಾವೇ ಜವಾಬ್ದಾರರು. ಬರಹವಾಗಬೇಕಾದರೆ ಯೋಚನೆ ಮತ್ತು ಭಾಷಾ ಬಳಕೆ ಅವಶ್ಯಕ. ಓದುವ ಹವ್ಯಾಸ ಇದ್ದಾಗ ಮಾತ್ರ ಬರೆಯುವ ಸಾಮರ್ಥ್ಯ ಹೆಚ್ಚುತ್ತದೆ. ಬರಹಕ್ಕೆ ವೈಶಿಷ್ಟತೆ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆಯ ಮಹಾವಿದ್ಯಾಲದ ಪ್ರಾಧ್ಯಾಪಕ ಡಾ.ಬಿ.ಎಂ.ಬಡಿಗೇರ, ಐಕ್ಯೂಎಸಿ ಸಂಯೋಜಕ ಡಾ.ಎ.ಯು.ರಾಠೋಡ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ.ಸುರೇಶ ಆರ್. ಕಾರ್ಯಕ್ರಮದ ಸಂಯೋಜಕರಾದ ಎಸ್.ವಿ. ಕಟ್ಟಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳಿದ್ದರು.