ಧಾರವಾಡ:

ಭಾರತದ ಐತಿಹಾಸಿಕ ಪರಂಪರೆ ವಿಶ್ವಕ್ಕೆ ಶ್ರೇಷ್ಠವಾಗಿದೆ ಎಂದು ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್‌.ಸಿ. ಪಾಟೀಲ ಹೇಳಿದರು.

ಇಲ್ಲಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ತಾವೇ ರಚಿಸಿದ ಜನಪದ ದೃಶ್ಯಕಲಾ ಚಿತ್ತಾರಗಳು ಎಂಬ ಗ್ರಂಥ ಲೋರ್ಕಾಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಉತ್ತಮ ಸಂಸ್ಕೃತಿ ಹಾಗೂ ಹಿರಿಮೆಯನ್ನು ಹೊಂದಿದೆ ಎಂದರು.

ಈ ಗ್ರಂಥವು ಭಾರತದ ಸಂಸ್ಕೃತಿಯ ಗ್ರಾಮೀಣ ಸೊಗಡಿನ ಜನರ ಜೀವನದ ಭಾಗವಾದ ವಿವಿಧ ವೃತ್ತಿ ಕೌಶಲ್ಯ, ಆಚರಣೆ, ಚಿತ್ರಕಲೆ, ವಸ್ತ್ರವಿನ್ಯಾಸ, ಆಟದ ವಿವಿಧ ಕಲೆಗಳನ್ನು ಒಳಗೊಂಡಿದೆ ಎಂದರು.

ರೋಟರಿ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಪಾಟೀಲರು ಪ್ರತಿ ವರ್ಷವು ತಮ್ಮ ಜನ್ಮದಿನಕ್ಕೆ ಒಂದು ಪುಸ್ತಕ ಬರೆದು ಪ್ರಕಟಿಸುತ್ತಿರುವುದು ಮಾದರಿ ಸಂಪ್ರದಾಯವಾಗಿದೆ ಎಂದು ಹೇಳಿದರು.


ಐತಿಹಾಸಿಕ ಪರಂಪರೆ ಉಳಿಸಿ ವಿಶೇಷ ಉಪನ್ಯಾಸ ನೀಡಿದ ಕವಿವಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಸ್‌.ಕೆ. ಮೇಲಕರ, ವಿಶ್ವದಲ್ಲಿ ಭಾರತದ ಐತಿಹಾಸಿಕ ಪರಂಪರೆ ಹಳ್ಳಿಯ ಜನರ ದಿನನಿತ್ಯದ ಜೀವನದಲ್ಲಿ ಬೆರೆತು ಹೋಗಿ ಇಲ್ಲಿನ ಸಂಸ್ಕೃತಿ ಪರಂಪರೆಯನ್ನು ಉತ್ಕೃಷ್ಟಗೊಳಿಸಿದೆ. ಅದನ್ನು ಇಂದಿಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ರೋಟರಿ ಅಧ್ಯಕ್ಷ ಅಶೋಕ ನಾಗಸಮುದ್ರ ಅಧ್ಯಕ್ಷತೆ ವಹಿಸಿದ್ದರು.

ಗ್ರಂಥವಲೋಕನ ಮಾಡಿದ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ, ಪ್ರೊ. ಎಸ್‌.ಸಿ. ಪಾಟೀಲರು 125ಕ್ಕಿಂತಲೂ ಹೆಚ್ಚು ಗ್ರಂಥ ರಚಿಸಿದ್ದು ಈ ಗ್ರಂಥ ಎಲ್ಲ ವಿಸ್ತಾರವಾದ ಜನ-ಜೀವನದ, ಜನಪದ ಕಲೆಗಳ ಪ್ರಕಾರ, ಬದುಕನ್ನು ತಿಳಿಸುವ ಅತ್ಯುತ್ತಮ ಗ್ರಂಥವಾಗಿ ಪ್ರಕಟಗೊಂಡಿರುವುದು ಹೆಮ್ಮೆಯ ವಿಷಯ ಎಂದರು.

ಇದೇ ವೇಳೆ ಕವಿವಿ ನಿಕಾಯದ ಡೀನ್ ಆದ ಡಾ. ವಿ.ಎಲ್. ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕಲಾವಿದರಾದ ಸುರೇಶ ಹಾಲಭಾವಿ, ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥ ಎಸ್‌.ಕೆ. ಪತ್ತಾರ, ರಾಷ್ಟ್ರೀಯ ದೃಶ್ಯಕಲಾ ಕಾರ್ಯದರ್ಶಿ ಡಾ. ಬಿ.ಎಂ. ಪಾಟೀಲ, ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ, ಚಿತ್ರಕಲಾ ಮಹಾವಿದ್ಯಾಲಯದ ನಿಕಟ ಪೂರ್ವ ಮುಖ್ಯಸ್ಥ ಬಸವರಾಜ ಕುರಿಯವರ, ರೋಟರಿ ಕ್ಲಬ್ ಕಾರ್ಯದರ್ಶಿ ವಿಷ್ಣಪ್ಪ ಯಲಿಗಾರ, ಕೋಶಾಧ್ಯಕ್ಷರಾದ ರಾಜು ಜಿಗಳೂರು ಉಪಸ್ಥಿತರಿದ್ದರು.