ಖಾಸಗಿ ಕಂಪನಿಗಳಿಂದ ಕನ್ನಡಿಗರಿಗೆ ಅನ್ಯಾಯ: ಬೇಕ್ರಿ ರಮೇಶ್

| Published : Jul 17 2024, 12:49 AM IST

ಖಾಸಗಿ ಕಂಪನಿಗಳಿಂದ ಕನ್ನಡಿಗರಿಗೆ ಅನ್ಯಾಯ: ಬೇಕ್ರಿ ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೇ ಖಾಸಗಿ ಕಂಪನಿಗಳು ಅನ್ಯಾಯ, ದ್ರೋಹ

ಗದಗ: ಖಾಸಗಿ ಕಂಪನಿಗಳಿಂದ ಕನ್ನಡಿಗರಿಗೆ ತೀವ್ರ ಅನ್ಯಾಯವಾಗುತ್ತಿದೆ. ಇದನ್ನು ಖಂಡಿಸಿ ಆ.5 ರಿಂದ 22ರ ವರೆಗೆ ರಾಜ್ಯಾದ್ಯಂತ ಕದಂಬ ಸೈನ್ಯದಿಂದ ಹೋರಾಟ ಮಾಡಲಾಗುವುದು ಎಂದು ಕದಂಬ ಸೈನ್ಯಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೇ ಖಾಸಗಿ ಕಂಪನಿಗಳು ಅನ್ಯಾಯ, ದ್ರೋಹ ಮಾಡುತ್ತಿವೆ. ಈ ಕೂಗು ಕೇವಲ ಇಂದು ನಿನ್ನೆಯದಲ್ಲ. ಖಾಸಗಿ ಕಂಪನಿಗಳು ಕರ್ನಾಟಕದಲ್ಲಿ ಹುಟ್ಟಿದಾಗಿನಿಂದಲೂ ಇದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಬೇರೆ ರಾಜ್ಯಗಳಲ್ಲಿ ಸ್ಥಳೀಯ ಯುವಕರಿಗೆ ಶೇ 50-80% ರಷ್ಟು ಮೀಸಲಾತಿ ಇದೆ. ಆದರೆ, ರಾಜ್ಯದಲ್ಲಿ ಕಾನೂನು ಹಲ್ಲು ಕಿತ್ತ ಹಾವಿನಂತಾಗಿವೆ. ಹೋರಾಟ, ಧರಣಿ, ಸತ್ಯಾಗ್ರಹ ನಡೆಯುತ್ತಲೇ ಇವೆ. ಖಾಸಗಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡಿದರೆ ಕನ್ನಡದ ಯುವಕರು ಆರ್ಥಿಕವಾಗಿ ಸಬಲರಾಗುತ್ತಾರೆ. ಖಾಸಗಿ ಕಂಪನಿಗಳಿಗೆ ನಮ್ಮ ಸರ್ಕಾರ ನೆಲ, ಜಲ,ನೀರು, ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯ ನೀಡುತ್ತಿವೆ. ಆದರೆ, ಬೆರಳೆಣಿಕೆ ಕನ್ನಡಿಗರಿಗೆ ಉದ್ಯೋಗ ನೀಡುತ್ತಿದ್ದು, ಖಾಸಗಿ ಕಂಪನಿಗಳು ಈಷ್ಟ್ ಇಂಡಿಯಾ ಕಂಪನಿ ಗಳಿದ್ದಂತೆ. ಈ ಸರ್ಕಾರ ಕನ್ನಡಿಗರಿಗೆ ಉದ್ಯೋಗ ನೀಡಬೇಕಾದರೇ ಕನ್ನಡಿಗರಿಗೆ ಉದ್ಯೋಗದಾತೆ ಡಾ ಸರೋಜಿನಿ ಮಹಿಷಿ ಪರಿಷ್ಕ್ಫತ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕನ್ನಡಿಗರನ್ನು ಒಗ್ಗೂಡಿಸಲು ಹೋರಾಡಿದ ಕದಂಬ ಮಯೂರ ವರ್ಮ ಪ್ರತಿಮೆಯನ್ನು ಬನವಾಸಿ, ಶಿರಸಿಯಲ್ಲಿ ಸ್ಥಾಪಿಸುವಂತೆ, ಚಾಲುಕ್ಯ ಸಾಮ್ರಾಜ್ಯದ ಇಮ್ಮಡಿ ಪುಲಕೇಶಿಯ ಪುತ್ಥಳಿಯನ್ನು ಬಾದಾಮಿ, ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣ ಸೌಧದ ಮುಂದೆ ಸ್ಥಾಪಿಸುವಂತೆ ಹಲವಾರು ವರ್ಷಗಳಿಂದ ಕದಂಬ ಸೈನ್ಯದಿಂದ ಮಾಡಿಕೊಂಡು ಬಂದರೂ ಸರ್ಕಾರ ಕಣ್ಣು ತೆರೆಯುತ್ತಿಲ್ಲ. ಹೊರ ರಾಜ್ಯದ ಸಾಮ್ರಾಟರ ಪುತ್ಥಳಿಗಳು ಕರ್ನಾಟಕದ್ಯಂತ ಇವೆ. ಆದರೆ, ನಮ್ಮ ನಾಡಿನ ಶೂರರ ಪ್ರತಿಮೆ ಇಲ್ಲದಿರುವುದು ವಿಪರ್ಯಾಸ.

ಕರ್ನಾಟಕದಲ್ಲಿ ಹಿಂದಿ ಹೆರಿಕೆ ಇತ್ತೀಚೆಗಿನ ದಿನಗಳಲ್ಲಿ ವಿಪರಿತವಾಗಿದೆ. ನಮಗೆ ದ್ವಿಭಾಷೆ ನೀತಿ ಬೇಕು. ಆದರೆ, ಹಿಂದಿ ಹೆರಿಕೆ ಭಾಷಾ ಸಾಮ್ರಾಜ್ಯ ಶಾಹಿತ್ವದ ಒಂದು ರೂಪವಾಗಿದೆ. ತಮಿಳುನಾಡಿಗರು ಹಿಂದಿ ವಿರೋಧಿ ಆಂದೋಲನ ಮಾಡಿದ್ದಾರೆ. ನಮ್ಮಲ್ಲಿ ಅಂತಹ ಪ್ರಯತ್ನ ನಡೆಯುತ್ತಿಲ್ಲ. ಭಾಷೆಯ ಬಗ್ಗೆ ಪರಿಸ್ಥಿತಿ ಹೀಗೆ ಮುಂದುವರೆದರೇ ದೇಸಿ ಭಾಷೆಗಳ ಸಾವು ಖಚಿತವಾಗಲಿದೆ. ರಾಜ್ಯದ ಎಲ್ಲ ಕೇಂದ್ರ ಕಚೇರಿಗಳಲ್ಲಿ ಶೇ.80% ಹಿಂದಿ ಭಾಷೆಗರೇ ತುಂಬಿದ್ದಾರೆ. ಪರೀಕ್ಷೆಗಳಲ್ಲಿಯೂ ಹಿಂದಿ ಹೆರಿಕೆ ಕಡ್ಡಾಯವಾಗಿರುವುದು ಬೇಸರದ ಸಂಗತಿಯಾಗಿದ್ದು, ಪ್ರಾಧಿಕಾರ ಇದ್ದರೂ ಏನೂ ತಿಳಿಯದಂತೆ ಮೌನವಾಗಿರುವುದು ಸರಿಯಾದ ಕ್ರಮವಲ್ಲ ಅಂತ ಸರ್ಕಾರ ಹಾಗೂ ಕನ್ನಡ ಪ್ರಾಧಿಕಾರದ ವಿರುದ್ದ ಬೇಕ್ರಿ ರಮೇಶ್ ಅಸಮಾದಾನ ಹೊರ ಹಾಕಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಜರಿದ್ದರು.