ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪರಿಸರ ಮತ್ತು ಕೃಷಿ ಕ್ಷೇತ್ರಗಳ ನಡುವೆ ಅವಿನಾಭಾವ ಸಂಬಂಧವಿದೆ,ನಾವೆಲ್ಲರೂ ಪ್ರಕೃತಿಯ ಭಾಗಗಳಾಗಿರುವ ಈ ಎರಡನ್ನೂ ಉಳಿಸಿ ಬೆಳೆಸಬೇಕಾಗಿದೆ, ಪರಿಸರ ವಿನಾಶದ ದುಷ್ಪರಿಣಾಮ ಕೃಷಿ ಕ್ಷೇತ್ರದ.ಮೇಲೆ ಕೂಡ ಬೀರಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ, ಅವಳಿ ತಾಲೂಕಿನ ನೆಲ, ಜಲ, ಪರಿಸರ, ಭಾಷೆ ಸಂರಕ್ಷಣೆಗಾಗಿ ಸ್ವಾಭಿಮಾನಿ ಹೋರಾಟ ಒಕ್ಕೂಟದ ಸಂಚಾಲಕ ಕರಿಸಬಸಪ್ಪ ಗೌಡ ಎಂ.ಪಿ ಹೇಳಿದರು.

ವಿಶ್ವ ಪರಿಸರ ದಿನವಾದ ಶುಕ್ರವಾರ ತಾಲೂಕಿನ ಸುಂಕದಕಟ್ಟೆ ಗ್ರಾಮದ ಸಮೀಪದ ಮಲ್ಲದೇವರ ಕಟ್ಟೆ ಸರ್ವೆ ನಂ,4ರ ಸಸ್ಯಕಾಶಿ ಪ್ರದೇಶದಲ್ಲಿ ರೈತರು, ಮುಖಂಡರು,ಸ್ಥಳೀಯ ಗ್ರಾಮಗಳ ಗ್ರಾಮಸ್ಥರೊಂದಿಗೆ ಸೇರಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡಿದರು.

ನಾವೆಲ್ಲ ರೈತರು ಪ್ರಕೃತಿಯ ಮಕ್ಕಳಿದ್ದಂತೆ ನಾವಿಂದು ನೆಟ್ಟ ಸಸಿ ಮುಂದೆ ಮರವಾಗಿ ಪರಿಸರದ ಆಸ್ತಿಯಾಗಬೇಕು ಈ ನಿಟ್ಟಿನಲ್ಲಿ ಪ್ರತಿಯೋಬ್ಬರು ಗಿಡಗಳನ್ನು ಮಕ್ಕಳಂತೆ ಜೋಪಾನ ಮಾಡಬೇಕು ಎಂದು ಕರೆ ನೀಡಿದರು.

ಸುಂಕದಕಟ್ಟೆ ಸಮೀಪದ ಮಲ್ಲದೇವರ ಕಟ್ಟೆ ಪ್ರದೇಶದಲ್ಲಿರುವ ಆಪಾರ ಸಸ್ಯ ಸಂಪತ್ತು, ವನ್ಯಜೀವಿ ಸಂಪತ್ತನ್ನು ಉಳಿಸಿಕೊಂಡು ಹೋಗುವುದು ಇಲ್ಲಿನ ಜನರ,ತಾಲೂಕು ಅಡಳಿತ ವ್ಯವಸ್ಥೆಯ ಆದ್ಯ ಕರ್ತವ್ಯವಾಗಿದ್ದು, ಈ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಅಪರೂಪದ ಮರಗಳಿರುವ ಅರಣ್ಯ ಸಂಪತ್ತು, ಪ್ರಾಣಿ,ಪಕ್ಷಿಗಳು, ಕೆರೆಗಳು ಇದ್ದು, ಇತ್ತೀಚೆಗೆ ನಿವೇಶನರಹಿತರಿಗೆ ಈ ಭಾಗದಲ್ಲಿನ ಈ ಎಲ್ಲಾ ನೈಸರ್ಗಿಕ ಸಂಪತ್ತನ್ನು ತೆರವುಗೊಳಿಸಿ, ಮರಗಳನ್ನು ಕಡಿದು ಸ್ವಚ್ಛಮಾಡಿ ನಿವೇಶನ ಮಾಡಲು ಅಡಳಿತ ವ್ಯವಸ್ಥೆಯ ಅಧಿಕಾರಿಗಳು ಮುಂದಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ರೈತ ಸಂಘ, ಗ್ರಾಮಸ್ಥರು ಸಹಿಸುವುದಿಲ್ಲ ಇವುಗಳ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ದರಿದ್ದೇವೆ ಎಂದು ಅಡಳಿತ ಯಂತ್ರಕ್ಕೆ ಎಚ್ಚರಿಕೆ ನೀಡಿದರು.


ಇದೇ ಸಂದರ್ಭದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ವತಿಯಿಂದ ನೆಲ, ಜಲ, ಪರಿಸರ ಮತ್ತು ಭಾಷೆ ಸಂರಕ್ಷಣೆಗಾಗಿಯೇ ನೂತನವಾಗಿ ಸ್ವಾಭಿಮಾನಿ ಹೋರಾಟ ಒಕ್ಕೂಟವನ್ನು ರಚಿಸಿಕೊಂಡಿದ್ದು, ವಿಶ್ವ ಪರಿಸರ ದಿನಾಚರಣೆಯ ಪವಿತ್ರ ದಿನದಂತೆ ಇದಕ್ಕೆ ಚಾಲನೆ ನೀಡಿಲಾಗಿದೆ. ಈ ಒಕ್ಕೂಟದ ಮೂಲ ಉದ್ದೇಶವೇ ನೆಲ, ಜಲ, ಪರಿಸರ,ಭಾಷೆಯ ಉಳಿವಿಗಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿದೆ. ಸರ್ಕಾರ, ಅಡಳಿತ ವ್ಯವಸ್ಥೆಗಳು ಪರಸರಕ್ಕೆ ಹಾನಿಯಾಗುವ ಯಾವುದೇ ಕ್ರಮಕ್ಕೆ ಕೈ ಹಾಕಿದರೆ. ಒಕ್ಕೂಟದ ವತಿಯಿಂದ ಉಗ್ರವಾಗಿ ಖಂಡಿಸಿ ಇದರ ವಿರುದ್ಧ ಆಹೋರಾತ್ರಿ ಹೋರಾಟ ನಡೆಸಲಾಗುತ್ತದೆ ಎಂದರು.

ಅರಬಗಟ್ಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ಆರ್.ಮಂಜುನಾಥ, ಸುಂಕದಕಟ್ಟೆ ನರಸಿಂಹ ಸ್ವಾಮಿ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ರೈತ ಮುಖಂಡ ಕರಿಬಸಪ್ಪ ಸುಂಕದಟ್ಟೆ, ನಿವೃತ್ತ ಉಪನ್ಯಾಸಕ ಎಸ್.ಆರ್. ಹನುಮಂತಪ್ಪ ಮುಖಂಡ ಎಸ್.ಜಿ.ಮಂಜಪ್ಪ,ಎಸ್.ಕೆ. ಕರಿಬಸಪ್ಪ, ಗ್ರಾಮದ ಮುಖಂಡರು ಇದ್ದರು.