ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ವಾಹನ ಮಾಲೀಕರು ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸಿ, ವಾಹನದಿಂದ ವಾಯುಮಾಲಿನ್ಯ ಆಗುತ್ತಿಲ್ಲ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ-2023 ಮತ್ತು ಭಿತ್ತಿ ಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿ 6 ತಿಂಗಳಿಗೊಮ್ಮೆ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ತಮ್ಮ ವಾಹನ ತಪಾಸಣೆಗೊಳಪಡಿಸಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಪ್ರಮಾಣಪತ್ರ ಪಡೆಯಬೇಕು. ಕಲಬೆರಕೆ ಇಂಧನ ಉಪಯೋಗಿಸಬಾರದು. ಕಪ್ಪು ಮತ್ತು ದಟ್ಟವಾದ ಹೊಗೆ ಬರುತ್ತಿದ್ದರೆ ತಕ್ಷಣ ಅಧಿಕೃತ ಮಾರಾಟಗಾರರು ಅಥವಾ ಸರ್ವೀಸಿಂಗ್ ಸೆಂಟರ್ಗಳಲ್ಲಿ ದುರಸ್ತಿ ಮಾಡಿಸಬೇಕು ಎಂದರು.ಸೈಲೆನ್ಸರ್ಗಳಲ್ಲಿ ಟ್ಯಾಂಪರ್ ಮಾಡಬೇಡಿ ಹಾಗೂ ಕರ್ಕಶ ಶಬ್ದಗಳು ಬರದಂತೆ ನೋಡಿಕೊಳ್ಳಬೇಕು. ಕಡಿಮೆ ದರ್ಜೆಯ ಕಳಪೆ ಇಂಜಿನ್ ಆಯಿಲ್ ಬಳಸಬಾರದು. ಏರ್ ಫಿಲ್ಟರ್ ಮತ್ತು ಸ್ಪಾರ್ಕ್ ಪ್ಲಗ್ಗಳನ್ನು ಸ್ವಚ್ಛವಾಗಿಡಬೇಕು. ಟ್ರಾಫಿಕ್ ಸಿಗ್ನಲ್ಗಳಲ್ಲಿ ಇಂಜಿನ್ ಬಂದ್ ಮಾಡಿ, ವಾಹನಗಳಿಂದ ಹೊಗೆ ಸೂಸುವ ಪ್ರಮಾಣ ನಿಯಂತ್ರಣದಲ್ಲಿಡಲು ತಮ್ಮ ವಾಹನಗಳನ್ನು ಸದಾ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಅವರು ಸಾರ್ವಜನಿಕರಿಗೆ ತಿಳಿಸಿದರು.ಎಸ್ಪಿ ಯಶೋದಾ ವಂಟಿಗೋಡಿ ಮಾತನಾಡಿ, ವಾಹನಗಳ ಕಾರ್ಬೋರೇಟರ್ಗಳನ್ನು ಆಗಾಗ ಸ್ವಚ್ಛಗೊಳಿಸಿ, ಒಳ್ಳೆಯ ಗುಣಮಟ್ಟದ ಇಂಧನ ಮತ್ತು ತೈಲ ಬಳಸಿರಿ. ಹೆಚ್ಚಿನ ಸಂಖ್ಯೆಯ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ತಡೆಗಟ್ಟಲು ಸಮೂಹ ಸಾರಿಗೆ ಬಳಸಬಹುದು ಎಂದರು.ಸಮೀಪದ ಪ್ರದೇಶಗಳಲ್ಲಿ ಹೋಗಿ ಬರಲು ಬೈಸಿಕಲ್ ಬಳಸಿ. ಎಲೆಕ್ಟಿಕ್ ವಾಹನಗಳನ್ನು ಖರೀದಿಸಿ ಬಳಕೆ ಮಾಡಬಹುದು. ವಾಹನಗಳ ಸಂಚಾರ ದಿನೇದಿನೇ ಹೆಚ್ಚಾಗುತ್ತಿರುವುದರಿಂದ, ವಾಹನಗಳು ಹೊರಸೂಸುವ ಅನಿಲವು ಶುದ್ಧಗಾಳಿಯನ್ನು ವಿಷಕಾರಿಯನ್ನಾಗಿ ಮಾಡುತ್ತಿದೆ. ವಾಹನಗಳು ಹೊರಸೂಸುವ ವಿಷಕಾರಿ ಅನಿಲಗಳಾದ ಕಾರ್ಬನ್ ಮಾನಾಕ್ಸೆಡ್, ಕಾರ್ಬನ್ ಡೈ ಆಕ್ಸೈಡ್, ಹೈಡ್ರೋಕಾರ್ಬನ್, ಆಕ್ಸೈಡ್ ಆಫ್ ನೈಟ್ರೋಜನ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಸ್ಪೆಂಡೆಡ್ ಪಾರ್ಟಿಕುಲೇಟ್ ಮ್ಯಾರ್ಗಳಿಂದ ಮಾನವನ ಆರೋಗ್ಯದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮಗಳು ಆಗುತ್ತವೆ ಎಂದರು.ಕಣ್ಣು ಮತ್ತು ದೃಷ್ಟಿ ಮಂಜಾಗುವಿಕೆ, ಮೆದುಳಿನ ಕಾರ್ಯಾಚರಣೆಯಲ್ಲಿ ಕುಂಠಿತ, ಗರ್ಭಿಣಿ ಮತ್ತು ಶಿಶುಗಳಲ್ಲಿ ಮಾನಸಿಕ ದುರ್ಬಲತೆ ಮತ್ತು ಬುದ್ಧಿಮಾಂದ್ಯತೆ, ಅಸ್ತಮಾ ಮತ್ತು ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್, ಯಕೃತ್, ಮೂತ್ರಕೋಶದ ಕರುಳಿಗೆ ಘಾಸಿ, ಸಂತಾನೋತ್ಪತ್ತಿ ಕೊರತೆ ಮುಂತಾದ ಹಾನಿಗಳು ಸಂಭವಿಸುತ್ತವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿಕಾಂತ್ ಬಿ. ನಾಲವಾಡ, ಹಿರಿಯ ಮೋಟಾರ್ ವಾಹನ ನಿರೀಕ್ಷಕ ಬಿ.ಪಿ. ಕೃಷ್ಣೇಗೌಡರ್, ರವಿರಾಜ್ ಪವಾರ್ ಮತ್ತು ಮೃತ್ಯುಂಜಯ್ ಹೊನ್ನಿಕೋರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.