ತುಂಗಭದ್ರಾ ಜಲಾಶಯಕ್ಕೆ ಮುರಿದ 19ನೇ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ 6ನೇ ದಿನ ಸಕ್ಸಸ್‌

| Published : Aug 17 2024, 12:52 AM IST / Updated: Aug 17 2024, 01:09 PM IST

ತುಂಗಭದ್ರಾ ಜಲಾಶಯಕ್ಕೆ ಮುರಿದ 19ನೇ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ 6ನೇ ದಿನ ಸಕ್ಸಸ್‌
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ಮುರಿದ 19ನೇ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯಾಚರಣೆ 6ನೇ ದಿನವಾದ ಶುಕ್ರವಾರ ರಾತ್ರಿಯ ವೇಳೆಗೆ ಯಶಸ್ವಿಯತ್ತ ಸಾಗುತ್ತಿದ್ದು, ಒಂದು ಎಲಿಮೆಂಟ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ.  

 ಕೊಪ್ಪಳ/ ಹೊಸಪೇಟೆ :  ತುಂಗಭದ್ರಾ ಜಲಾಶಯಕ್ಕೆ ಮುರಿದ 19ನೇ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯಾಚರಣೆ 6ನೇ ದಿನವಾದ ಶುಕ್ರವಾರ ರಾತ್ರಿಯ ವೇಳೆಗೆ ಯಶಸ್ವಿಯತ್ತ ಸಾಗುತ್ತಿದ್ದು, ಒಂದು ಎಲಿಮೆಂಟ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗೆ ವರಮಹಾಲಕ್ಷ್ಮೀ ಹಬ್ಬದ ಶುಭ ಶುಕ್ರವಾರದಂದು ಶುಭಾರಂಭ ದೊರೆತಿದೆ. ಈ ಮಧ್ಯೆ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪೋನ್‌ ಮಾಡಿ, ಮೊದಲ ಎಲಿಮೆಂಟ್‌ ಕೂರಿಸಲಾಯಿತು. ಶನಿವಾರದ ವೇಳೆಗೆ ಸ್ಟಾಪ್ ಲಾಗ್‌ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಗೇಟ್ ಇಲ್ಲದೆ ಹರಿದು ಹೋಗುತ್ತಿದ್ದ ನೀರಿನ ಪ್ರಮಾಣದಲ್ಲಿ 4 ಅಡಿಯಷ್ಟು ನೀರನ್ನು ಹಿಡಿದಿಡಲು ಸಾಧ್ಯವಾಗುತ್ತದೆ. ಉಳಿದ ನಾಲ್ಕು ಗೇಟ್‌ ಅಳವಡಿಸಿದರೆ ಸಂಪೂರ್ಣ ನೀರಿನ ಹರಿವನ್ನು ತಡೆಯಬಹುದಾಗಿದೆ. ಗರಿಷ್ಠ 1633 ಅಡಿ ಎತ್ತರದ ಡ್ಯಾಂಗೆ 1613 ಅಡಿ ಎತ್ತರದಲ್ಲಿ ಮೊದಲ ಗೇಟ್ ಅಳವಡಿಸಲಾಗಿದೆ. ಉಳಿದ 4 ಎಲಿಮೆಂಟ್ ಗೇಟ್‌ಗಳನ್ನು ಕೂಡಿಸಿದರೆ ಸಂಪೂರ್ಣ ನೀರನ್ನು ಹಿಡಿದಿಡಲು ಸಾಧ್ಯವಾಗುತ್ತದೆ. 

ಕಾರ್ಯಾಚರಣೆ ನಡೆದದ್ದು ಹೇಗೆ?: ಒಂದು ಎಲಿಮೆಂಟನ್ನು ಎರಡು ತುಂಡು ಮಾಡಿ, ಅಳವಡಿಸುವ ಎರಡನೇ ಪ್ರಯತ್ನವನ್ನು ಶುಕ್ರವಾರ ಬೆಳಗ್ಗೆ ಕೈಬಿಡಲಾಯಿತು. ಅದು, ತುಂಬಾ ರಿಸ್ಕ್ ಕಾರ್ಯವಾಗಿರುವುದರಿಂದ ಎಲಿಮೆಂಟ್ ಇಳಿಸಿ, ಕ್ರಸ್ಟ್ ಗೇಟ್ಸ್‌ನಲ್ಲಿಯೇ ಎರಡು ತುಂಡು ಜೋಡಿಸಿಕೊಳ್ಳುವುದು ಬಹುದೊಡ್ಡ ಅಪಾಯದ ಕಾರ್ಯವಾಗಿದೆ ಎನ್ನುವ ಎಚ್ಚರಿಕೆಯನ್ನು ಕೇಂದ್ರ ಜಲ ಆಯೋಗದವರು ನೀಡಿದ್ದರಿಂದ ಅದನ್ನು ಕೈಬಿಡಲಾಯಿತು.

ಬಳಿಕ, ಗೇಟ್‌ ನಂಬರ್‌ 19ಕ್ಕೆ ಸ್ಟಾಪ್ ಲಾಗ್ ಗೇಟ್‌ ಅಳವಡಿಕೆಗೆ ತೊಡಕಾಗಿದ್ದ ಸ್ಕೈ ವಾಕರ್‌ನ್ನು ತೆರವುಗೊಳಿಸಿ, ಬೀಮ್‌ ಹಾಗೂ ಕೇಬಲ್‌ಗಳನ್ನು ತೆರವು ಮಾಡಲಾಯಿತು. ನಂತರ 4 ಅಡಿ ಎತ್ತರ, 60 ಅಡಿ ಅಗಲದ 1ನೇ ಎಲಿಮೆಂಟನ್ನು 19ನೇ ಕ್ರಸ್ಟ್ ಗೇಟ್‌ನ ಗ್ರೂಗೆ ಸೇರಿಸಿ ಇಳಿಸುವಾಗ ಅತ್ಯಂತ ಜಾಗರೂಕತೆ ಅನುಸರಿಸಿ, ನಿಧಾನಕ್ಕೆ ಇಳಿಸುವ ಕಾರ್ಯ ನಡೆಯಿತು. ಹೀಗಾಗಿ, ಕೇವಲ 4 ಅಡಿ ಎತ್ತರದ ಗೇಟ್‌ ಅನ್ನು ನೀರು ಹೋಗುವ ಸ್ಥಳಕ್ಕೆ (1613ನೇ ಅಡಿಗೆ) ತಲುಪಿಸಲು ಬರೋಬ್ಬರಿ 2 ಗಂಟೆ ಸಮಯ ಹಿಡಿಯಿತು. ನೀರು ಹೋಗುವ ಸ್ಥಳಕ್ಕೆ ಗೇಟ್‌ ತಲುಪುತ್ತಿದ್ದಂತೆ ಕಾರ್ಯಾಚರಣೆಯನ್ನು ಕೆಲಕಾಲ ನಿಲ್ಲಿಸಲಾಯಿತು.

ಜಲಾಶಯದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಮಾಡುವುದಕ್ಕಾಗಿ ಕಳೆದ ಐದು ದಿನಗಳಿಂದ ಗೇಟ್‌ಗಳನ್ನು ಮೂರು ಕಡೆ ತಯಾರಿಸಲಾಗಿತ್ತು. 100 ಕಾರ್ಮಿಕರು ಕಾರ್ಯಾಚರಣೆಯಲ್ಲಿ ತೊಡಗಿದ್ದು, 36 ಗಂಟೆಗಳಿಂದ ಕಾರ್ಯಾಚರಣೆ ನಡೆಸಿ, ಮೊದಲ ಗೇಟ್‌ ಅಳವಡಿಕೆ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ.

ಕನ್ಹಯ್ಯರನ್ನು ಭೋಜನಕ್ಕೆ ಆಹ್ವಾನಿಸಿದ ಸಿಎಂ:  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ಹಯ್ಯ ನಾಯ್ಡು ಅವರನ್ನು ತಮ್ಮ ನಿವಾಸಕ್ಕೆ ಭೋಜನಕ್ಕೆ ಆಹ್ವಾನಿಸಿದ್ದಾರೆ. ‘ಗೇಟ್‌ ಅಳವಡಿಸಿಯೇ ಬರುವೆ. ಆ.16ರಂದು ಶುಭ ಸುದ್ದಿ ಕೊಡುವೆ. ಸ್ಟಾಪ್‌ ಲಾಗ್ ಗೇಟ್‌ ಅಳವಡಿಸಿ ಸಂಭ್ರಮಿಸೋಣ’ ಎಂದು ಕನ್ಹಯ್ಯ ನಾಯ್ಡು ಹೇಳಿದ್ದರು. ಈಗ ನುಡಿದಂತೇ ಆ.16ಕ್ಕೆ ಗೇಟ್‌ ಅಳವಡಿಸಿದ್ದಾರೆ.