ಉಡುಗೆರೆಯಲ್ಲಿ ಶಾಸಕ ಕೆ.ಎಸ್. ಆನಂದ್ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಖಾಸಗಿ ಪ್ರದೇಶದಲ್ಲಿರುವ ಮನೆಗಳನ್ನು ಗ್ರಾಮಠಾಣಾ ವ್ಯಾಪ್ತಿಗೆ ಸೇರಿಸಲು ಪಿಡಿಒ ಮತ್ತು ವಿಎಗಳು ಜಂಟಿ ಸರ್ವೆ ನಡೆಸಿ ಶೀಘ್ರ ಸೇರ್ಪಡೆಗೊಳಿಸಲು ಮುಂದಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ತಾಲೂಕಿನ ಉಡುಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ದ ಸರ್ವೆ182,188,190 ಹೀಗೇ ಪ್ರಮುಖ ಸರ್ವೆ ನಂಬರ್ ಪ್ರದೇಶಗಳಲ್ಲಿ ವಾಸಿಸುವ 160ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಸಾಧ್ಯವಾಗಬಹುದಾದ ಪ್ರದೇಶ ಕೈ ಬಿಟ್ಟಿರುವ ಪಿಡಿಒ ಮತ್ತು ಗ್ರಾಮ ಲೆಕ್ಕಿಗರ ವಿರುದ್ಧ ಶಾಸಕರು ಗರಂ ಆದರು.ರಾಜ್ಯ ಸರ್ಕಾರ ಕಲ್ಪಿಸಿರುವ ಅವಕಾಧವನ್ನು ಅಧಿಕಾರಿಗಳು ಮುತುವರ್ಜಿಯಿಂದ ಗ್ರಾಮ ಠಾಣಾ ಪ್ರದೇಶಕ್ಕೆ ಒಳಪಡಿಸುವ ಮನೆಗಳ ಪ್ರಸ್ತಾವನೆಯನ್ನು 1-2 ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈ ಬಿಟ್ಟಿರುವ ಖಾಸಗಿ ಪ್ರದೇಶಗಳ ಸರ್ವೆ ನಂಬರ್ಗಳ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.ಗ್ರಾಮದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸಾಕಷ್ಟು ಸಮಸ್ಯೆ ಉಂಟಾಗಿದೆ.ಗ್ರಾಮಸ್ಥರ ಮನವಿಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗುಡ್ಡೇಹಳ್ಳಿ ಗ್ರಾಮದ ಮಹಿಳೆಯರು ಅಕ್ರೋಶ ಹೊರ ಹಾಕಿದರು. ಪಂಚಾಯಿತಿ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ಕೇಳಿದರೆ ಹಣವಿಲ್ಲ ಎಂದು ಸಬೂಬು ನೀಡುತ್ತಾರೆ. ಗ್ರಾಮಕ್ಕೆ 100 ಮೀ.ನಷ್ಟು ಪೈಪ್ ಲೈನ್ ಅಳವಡಿಸಿ ಕೊಟ್ಟು ಘಟಕ ಸರಿಯಾಗಿ ನಿರ್ವಹಿಸಿದರೆ ನೀರಿನ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಶಾಸಕರು ಗಮನಹರಿಸುವಂತೆ ಮನವಿ ಮಾಡಿದರು. ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಕೆ.ಪ್ರಕಾಶ್ ಮಾತನಾಡಿ, ಗುಡ್ಡೇಹಳ್ಳಿ ಗ್ರಾಮದ ನೀರಿನ ಘಟಕ ನಿರ್ವಹಣೆ ಮಾಡುವ ಏಜೆನ್ಸಿಯವರ ಅವಧಿ ಮುಗಿದಿದೆ. ಆದರೂ ಇಲಾಖೆಗೆ ಹಸ್ತಾಂತರಿಸುವಂತೆ ಮತ್ತು ನಿರ್ವಹಣೆ ಲೋಪದ ಬಗ್ಗೆ ನೋಟಿಸ್ ನೀಡಲಾಗಿದೆ. 1-2 ದಿನಗಳಲ್ಲಿ ಟಾಸ್ಕ್ಪೋರ್ಸ್ ಸಮಿತಿಯಲ್ಲಿ ಪೈಪ್ಲೈನ್ ಕಾಮಗಾರಿ ನಿರ್ವಹಿಸಿ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಉಡುಗೆರೆ ಗ್ರಾಮದ ಪ್ರದೀಪ್ ಮಾತನಾಡಿ, ಗ್ರಾಮದಲ್ಲಿ ವೊಲ್ಟೇಜ್ ಸಮಸ್ಯೆ ಕಾಡುತ್ತಿದೆ. ವಿದ್ಯುತ್ ಕಂಬಗಳು ಶಿಥಿಲ ಗೊಂಡಿವೆ. ಹೊಸದಾಗಿ ಕಂಬಗಳ ಅಳವಡಿಕೆ ಮತ್ತು ಹೆಚ್ಚುವರಿ ಟಿ.ಸಿ.ಗಳನ್ನು ದೊರಕಿಸುವಂತೆ ಒತ್ತಾಯಿಸಿದರು. ಗ್ರಾಮದ ಹಿರಿಯ ಮುಖಂಡ ಜಿ.ರೇವಣ್ಣ ಮಾತನಾಡಿ, ಗ್ರಾಮದ ದೇವಾಲಯ ಅಭಿವೃದ್ಧಿಗೆ ಅನುದಾನ, ಪಶು ಆಸ್ಪತ್ರೆ ನಿರ್ಮಾಣ, ದೊಡ್ಡಪ್ಪನಹಳ್ಳಿ ಗೇಟಿನ ಮಾರ್ಗದ ಬಸ್ಸು ಸಂಚಾರಕ್ಕೆ ಅನುವು ಮಾಡಬೇಕು. ಅನೇಕ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಚೀಟಿ ಕಲ್ಪಿಸಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ 23 ಜನ ಫಲಾನುಭವಿಗಳಿಗೆ ಹೆಚ್ಚುವರಿ ಪರಿಹಾರದ ಮೊತ್ತ ದೊರಕಿಸಲು ಮನವಿ ಮಾಡಿದರು. ಉಡುಗೆರೆ ಗ್ರಾಮದ ಸರಕಾರಿ ಶಾಲೆಯಲ್ಲಿ ಅರ್ಧಕ್ಕೆ ನಿಂತ ದಾಸೋಹ ಕೊಠಡಿ ಕಾಮಗಾರಿ ಪೂರ್ಣಗೊಳಿಸಿ ಹಾಗೂ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸುವಂತೆ ಶಾಲೆ ಎಸ್.ಡಿ.ಎಂಸಿ ಅಧ್ಯಕ್ಷೆ ಸೀಮಾ ಕೋರಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾ.ಪಂ. ಇಒ ಸಿ.ಆರ್. ಪ್ರವೀಣ್, ಗ್ರಾ.ಪಂ. ಆಡಳಿತಾಧಿಕಾರಿ ಎಂ.ಎನ್. ಜಗದೀಶ್, ಕಂದಾಯ ನಿರೀಕ್ಷಕ ತಿಪ್ಪೇಶ್, ಪಿಡಿಒ ಚಂದ್ರಶೇಖರ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ದೇವರಾಜ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸುತ್ತಲಿನ ಗ್ರಾಮಸ್ಥರು ಇದ್ದರು.
26ಕೆಕೆಡಿಯು2.. ಕಡೂರು ತಾಲೂಕಿನ ಉಡುಗೆರೆ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಎಂ.ಎನ್. ಜಗದೀಶ್ ಇದ್ದರು.