ಬ್ಯಾಕ್‌ಲಾಗ್ ಹುದ್ದೆ ತುಂಬಿಸುವಲ್ಲಿ ಬುದ್ದಿ ಜೀವಿಗಳ ಪಾತ್ರ ಮಹತ್ವರ

| Published : Apr 06 2025, 01:46 AM IST

ಬ್ಯಾಕ್‌ಲಾಗ್ ಹುದ್ದೆ ತುಂಬಿಸುವಲ್ಲಿ ಬುದ್ದಿ ಜೀವಿಗಳ ಪಾತ್ರ ಮಹತ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಬು ಜಗಜೀವನರಾಂ 118ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಸಕ ಕೃಷ್ಣಮೂರ್ತಿ, ನಗರಸಭಾಧ್ಯಕ್ಷೆ ರೇಖಾ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಬಸವರಾಜು ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಾಜಿ ಪ್ರಧಾನಿ ಬಾಬು ಜಗಜೀವನರಾಂ ಮತ್ತು ಮಹಾನಾಯಕ ಡಾ.ಅಂಬೇಡ್ಕರ್ ಶೋಷಿತ ಸಮಾಜದ ರತ್ನಗಳಿದ್ದಂತೆ. ಅವರ ಜಯಂತಿ ಆಚರಿಸುವ ಸಂದರ್ಭದಲ್ಲಿ ಬ್ಯಾಕ್‌ಲಾಗ್ ಹುದ್ದೆ ತುಂಬಿಸಿ ಹಿಂದುಳಿದ ಸಮಾಜದ ನ್ಯಾಯ ಸಲ್ಲಿಸುವ ನಿಟ್ಟಿನಲ್ಲಿ ಬುದ್ದಿ ಜೀವಗಳ ಪಾತ್ರ ಮಹತ್ವದ್ದು ಎಂದು ಶಾಸಕ ಕೃಷ್ಣಮೂರ್ತಿ ಹೇಳಿದರು.

ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಪ್ರಧಾನಿ ಡಾ.ಬಾಬು ಜಗಜೀವನರಾಂ 118ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್, ಬಾಬು ಜಗಜೀವನರಾಂ ಹಿಂದುಳಿದ ಸಮಾಜದ ಮಹಾನ್ ಚೇತನಗಳಾಗಿದ್ದು ಅವರ ಹೋರಾಟದ ಫಲದಿಂದಾಗಿ ನಾವು ಅನೇಕ ರೀತಿಯಲ್ಲಿ ಸವಲತ್ತು ಪಡೆಯುವಂತಾಗಿದೆ, ಇಂದಿಗೂ ಹಿಂದುಳಿದ ಸಮಾಜ ಹೋರಾಟ ಇನ್ನು ನಿಂತಿಲ್ಲ ಎಂದು ವಿಷಾದಿಸಿದರು. ಇಂದು ಜಾತಿಗೆ ಅನುಗುಣವಾಗಿ ಮೀಸಲಾತಿ ಬೆಳೆಯುತ್ತಲೆ ಇದೆ, ಆದರೆ ಯಾವುದೆ ಸರ್ಕಾರಗಳು ಪರಿಪೂರ್ಣ ರೀತಿಯಲ್ಲಿ ಬ್ಯಾಕ್ ಲಾಗ್‌ ಹುದ್ದೆ ತುಂಬುವಲ್ಲಿ ಮುಂದಾಗಿಲ್ಲ, ಈ ವಿಚಾರದಲ್ಲಿ ಒಂದಲ್ಲ ಒಂದು ಕಾನೂನು ತೊಡಕು ಬರುತ್ತಿದೆ. ಮೀಸಲಾತಿ ವಿಚಾರದಲ್ಲಿ ವ್ಯಾಜ್ಯಗಳು ಇತ್ಯರ್ಥವಾಗುವ ತನಕ ಈ ಉದ್ಯೋಗ ತುಂಬಲ್ಲ ಎಂದು ಸರ್ಕಾರಗಳೆ ನಿರ್ಧರಿಸಿದಂತಿದ್ದು ಈ ವಿಚಾರದಲ್ಲಿ ಬುದ್ದಿ ಜೀವಿಗಳು ಎಚ್ಚೆತ್ತುಕೊಳ್ಳಬೇಕಿದೆ. ಬ್ಯಾಕ್ ಲಾಗ್ ಹುದ್ದೆ ತುಂಬಿಸುವ ನಿಟ್ಟಿನಲ್ಲಿ ಬುದ್ದಿ ಜೀವಿಗಳು ಹೋರಾಟ ನಡೆಸುವ ಅಗತ್ಯತೆ ಇದೆ. ಪ್ರತಿ ತಾಲೂಕು, ಜಿಲ್ಲೆ, ರಾಜ್ಯದಲ್ಲೂ ಸಹಾ ಈ ಬಗ್ಗೆ ಹಿಂದುಳಿದ, ದಲಿತ ಸಮಾಜ ಧ್ವನಿ ತೆಗೆಯಬೇಕಿದೆ, ಆಗ ಮಾತ್ರ ಇಂತಹ ಜಯಂತಿಗಳ ಆಚರಣೆಗೆ ನೈಜ ಅರ್ಥ ಬರಲು ಸಾಧ್ಯ ಎಂದರು.

ಈ ವೇಳೆ ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಈ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಕುಂತೂರು ಮೋಳೆ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಬಸವರಾಜು, ಡಿವೈಎಸ್ಪಿ ಧರ್ಮೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಬಾಬು ಜಗಜೀವನರಾಂ ಒಕ್ಕೂಟದ ಅಧ್ಯಕ್ಷ ಬಾಲರಾಜು, ಸಿಪಿಐ ಶಿವಮಾದಯ್ಯ, ನಗರಸಭೆ ಸದಸ್ಯ ಭಾಗ್ಯಮ್ಮ, ಶಾಂತರಾಜು, ಮಂಜುನಾಥ್, ಸುಶೀಲಾ, ಸುಮಾಸುಬ್ಬಣ್ಣ, ರಾಘವೇಂದ್ರ, ಪ್ರಭಾರ ಪೌರಯುಕ್ತ ಪರಶಿವ, ಯಜಮಾನ ಪುಟ್ನಂಜ ಇನ್ನಿತರರಿದ್ದರು.