ಕನ್ನಡಪ್ರಭ ವಾರ್ತೆ ಕಾರವಾರ

ನಗರದ ಮಾಲಾದೇವಿ ಮೈದಾನದಲ್ಲಿ ಎಲ್ ಆ್ಯಂಡ್ ಟಿ ಪ್ರಾಜೆಕ್ಟ್ ಸೀಬರ್ಡ್ ಎಂಡಬ್ಲೂ‌ಸಿ-04 ವತಿಯಿಂದ ಆಯೋಜಿಸಲಾಗಿದ್ದ ಅಂತರ ವಿಭಾಗೀಯ ಕ್ರಿಕೆಟ್ ಟೂರ್ನಿ–2026 ಭಾನುವಾರ ಯಶಸ್ವಿಯಾಗಿ ಜರುಗಿತು. ಸಿಬ್ಬಂದಿ, ಕಾರ್ಮಿಕರು ಮತ್ತು ಕ್ಲೈಂಟ್ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಹಾಗೂ ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕ್ರೀಡಾಕೂಟವು ರೋಚಕವಾಗಿ ಮುಕ್ತಾಯಗೊಂಡಿತು.

ಈ ಟೂರ್ನಿಯಲ್ಲಿ ಸಂಸ್ಥೆಯ ವಿವಿಧ ವಿಭಾಗಗಳನ್ನು ಪ್ರತಿನಿಧಿಸುವ ಒಟ್ಟು 6 ತಂಡ ಪಾಲ್ಗೊಂಡಿದ್ದವು. ಮೈದಾನದಲ್ಲಿ ಸಿಬ್ಬಂದಿ ಕ್ರೀಡಾ ಸ್ಫೂರ್ತಿಯೊಂದಿಗೆ ಬ್ಯಾಟ್ ಮತ್ತು ಬಾಲ್ ಮೂಲಕ ಮಿಂಚಿದರು. ಕೇವಲ ಕ್ರೀಡಾಪಟುಗಳಷ್ಟೇ ಅಲ್ಲದೆ, ಎಲ್ ಆ್ಯಂಡ್ ಟಿ ಸಂಸ್ಥೆಯ ಕಾರ್ಮಿಕರು ಹಾಗೂ ಕ್ಲೈಂಟ್ ಪ್ರತಿನಿಧಿಗಳು ತಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಕೂಟಕ್ಕೆ ಉತ್ಸಾಹ ತಂದರು.

ಟೂರ್ನಿಯ ಅತ್ಯಂತ ಕುತೂಹಲಕಾರಿ ಫೈನಲ್ ಪಂದ್ಯದಲ್ಲಿ ಎಲ್ ಆ್ಯಂಡ್ ಟಿ ಆರ್‌ಎಸ್‌ಡಬ್ಲೂ ತಂಡ ಮತ್ತು ಎಲ್ ಆ್ಯಂಡ್ ಟಿ ಸರ್ವಿಸ್ ವಿಭಾಗದ ತಂಡಗಳು ಮುಖಾಮುಖಿಯಾಗಿದ್ದವು. ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತಾದರೂ, ಅತ್ಯುತ್ತಮ ಪ್ರದರ್ಶನ ತೋರಿದ ಎಲ್ ಆ್ಯಂಡ್ ಟಿ ಆರ್‌ಎಸ್‌ಡಬ್ಲೂ ತಂಡವು ಎದುರಾಳಿಯನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಎಲ್ ಆ್ಯಂಡ್ ಟಿ ಸರ್ವಿಸ್ ವಿಭಾಗವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ಜನಶಕ್ತಿ ವೇದಿಕೆ ಉತ್ತರ ಕನ್ನಡದ ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಬಹುಮಾನ ವಿತರಿಸಿ ಸನ್ಮಾನಿಸಿದರು.


ಕಾರ್ಯಕ್ರಮದಲ್ಲಿ ಎಲ್ ಆ್ಯಂಡ್ ಟಿ ಪ್ರಾಜೆಕ್ಟ್ ಡೈರೆಕ್ಟರ್ ಪಿ. ವಿಜಯ್, ಎಇಕಾಮ್ ಸಂಸ್ಥೆಯ ರೆಸಿಡೆಂಟ್ ಎಂಜಿನಿಯರ್ ಜೆ.ರಾಜದುರೈ, ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಹಿರೇಮಠ ಭದ್ರಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಹಳಿಯಾಳ: ಡ್ರೋನ್ ಕ್ಯಾಮೆರಾ ಮರಳಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಸ್ಥರು

ಆತ್ಯಾಧುನಿಕ ತಂತ್ರಜ್ಞಾನದ ಹೈಟೆಕ್ ಮಾದರಿಯ ಸುಮಾರು ₹ 4 ಲಕ್ಷ ಮೌಲ್ಯದ ಡ್ರೋನ್ ಕ್ಯಾಮೆರಾವನ್ನು ಕಳೆದುಕೊಂಡ ಮಾಲಿಕರಿಗೆ ಇಬ್ಬರು ವ್ಯಾಪಾರಸ್ಥರು ವಾಪಸ್‌ ನೀಡುವ ಮೂಲಕ ಪ್ರಾಮಾಣಿಕತೆ ತೋರಿಸಿದ್ದಾರೆ.ಪಟ್ಟಣದ ಪರಿಸರ ಪ್ರವಾಸೋದ್ಯಮಿ ಅಲ್ತಾಫ್ ಆರ್. ಬಸರಿಕಟ್ಟಿಯವರು ಭಾನುವಾರ ದಾಂಡೇಲಿ ತೆರಳುವಾಗ ಕಾರಿನಿಂದ ಆಕಸ್ಮಿಕವಾಗಿ ಈ ಕ್ಯಾಮೆರಾ ರಸ್ತೆಯಲ್ಲಿ ಬಿದ್ದಿತ್ತು. ಭಾನುವಾರ ಸಂತೆ ದಿನವಾಗಿದ್ದು,ಪಟ್ಟಣದ ಫಿಶ್ ಮಾರ್ಕೆಟಿನ ರಫೀಕ್ ಧಾರವಾಡಕರ ಹಾಗೂ ಸೈಪುಲ್ ಧಾರವಾಡಕರ ಇವರಿಗೆ ಹಳಿಯಾಳ-ದಾಂಡೇಲಿ ರಸ್ತೆಯಲ್ಲಿ ಡ್ರೋನ್ ಕ್ಯಾಮೆರಾ ಸಿಕ್ಕಿತ್ತು. ಆದರೆ ಅವರು ತಮಗೆ ದೊರೆತ ಬೆಲೆಬಾಳುವ ಕ್ಯಾಮೆರಾವನ್ನು ಹಳಿಯಾಳ ಪೋಲಿಸರಿಗೆ ಒಪ್ಪಿಸಿದರು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದರು.

ಸೋಮವಾರ ಹಳಿಯಾಳ ಠಾಣೆಯಲ್ಲಿ ಹಳಿಯಾಳ ಪಿಎಸ್‌ಐ ಬಸವರಾಜ ಮಬನೂರ ಕ್ಯಾಮೆರಾವನ್ನು ಬಸರಿಕಟ್ಟಿಯವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭ ಪ್ರಾಮಾಣಿಕತೆ ತೋರಿದವರಿಗೂ ಸನ್ಮಾನಿಸಿ ಗೌರವಿಸಿದರು.