‘ಬಿಡದಿ ಟೌನ್ಶಿಪ್ ಯೋಜನೆ ಅನುಷ್ಠಾನದ ಬಗ್ಗೆ ರೈತರ ಅಭಿಪ್ರಾಯ ಹಾಗೂ ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಲು ಸಮಿತಿ ರಚನೆ ಮಾಡುತ್ತೇವೆ. ಸಮಿತಿಯಿಂದ 2-3 ತಿಂಗಳಲ್ಲಿ ವರದಿ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
‘ಬಿಡದಿ ಟೌನ್ಶಿಪ್ ಯೋಜನೆ ಅನುಷ್ಠಾನದ ಬಗ್ಗೆ ರೈತರ ಅಭಿಪ್ರಾಯ ಹಾಗೂ ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಲು ಸಮಿತಿ ರಚನೆ ಮಾಡುತ್ತೇವೆ. ಸಮಿತಿಯಿಂದ 2-3 ತಿಂಗಳಲ್ಲಿ ವರದಿ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಕಷ್ಟ ಸುಖ, ಅಭಿಪ್ರಾಯ ಕೇಳುತ್ತೇವೆ. ಯೋಜನೆ ಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನ ಮಾಡುವ ತಿಳುವಳಿಕೆ ನನಗೆ ಇಲ್ಲ. ಹೀಗಾಗಿ ತಜ್ಞರ ಸಮಿತಿ ರಚನೆ ಮಾಡಿ ಅವರಿಂದ ಪಡೆದು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಬಿಡದಿ ಟೌನ್ಶಿಪ್ ಅನುಷ್ಠಾನ ಬಗ್ಗೆ ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸುವ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ನಿವೃತ್ತ ನ್ಯಾಯಾಧೀಶರು, ತಜ್ಞರು, ಐಎಎಸ್ ಅಧಿಕಾರಿಗಳು ಯಾರ ನೇತೃತ್ವದಲ್ಲಿ ಸಮಿತಿ ಮಾಡಬೇಕು ಎಂಬ ಬಗ್ಗೆ ಅಂದು ತೀರ್ಮಾನಿಸುತ್ತೇವೆ. ಈ ಸಮಿತಿಯ ವರದಿಯ ಆಧಾರದಲ್ಲಿ ಯೋಜನೆಯ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ನನ್ನ ಪೆನ್ನು ಪೇಪರ್ ಜನರ ಒಳತಿಗಾಗಿ ಮಾತ್ರ ಕೆಲಸ ಮಾಡಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಸರ್ಕಾರದ ಯೋಜನೆ ಮುಂದುವರೆಯಲಿದೆ. ಡಿನೋಟಿಫೈ ಮಾಡಲು ನನಗೆ ಅಧಿಕಾರವಿಲ್ಲ. ನಾನೇಕೆ ಡಿನೋಟಿಫಿಕೇಷನ್ ಮಾಡಲಿ? ಈಗಾಗಲೇ ಒಂದು ಹಳ್ಳಿಯಲ್ಲಿ ಶೇ.60 -75 ರಷ್ಟು ಜನ ಹಣ ಪಡೆದಿದ್ದಾರೆ. ಅವರು ಹಣ ಪಡೆದು ವ್ಯವಸಾಯ ಮಾಡಲು ಬಿಡಲಾಗುತ್ತದೆಯೇ? ಇನ್ನು ರೆಡ್ ಜೋನ್ ಸಹ ಹಾಗೆಯೇ ಮುಂದುವರೆಯಲಿದೆ. ಅದನ್ನು ಮುಟ್ಟಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಟೌನ್ಶಿಪ್ ವಿರೋಧಿಸಿ ರೈತರಿಂದ ಪಿಂಡ ಪ್ರದಾನ!
ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಬುಧವಾರ ರಾಜ್ಯ ಸರ್ಕಾರದಿಂಧ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಬಿಡದಿ-ಹಾರೋಹಳ್ಳಿ ಮಾರ್ಗದ ರಸ್ತೆಯಲ್ಲಿ ಪಿಂಡ ಪ್ರದಾನದ ಅಣಕು ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ-ಹಾರೋಹಳ್ಳಿ ರಸ್ತೆಯಲ್ಲಿ ಬುಧವಾರ ತಟ್ಟೆಯಲ್ಲಿ ಮಣ್ಣು ಹಿಡಿದುಕೊಂಡು ವಾಹನಗಳನ್ನು ತಡೆದು ಪ್ರತಿಭಟಿಸಿದ ರೈತರು, ರಾಜ್ಯ ಸರ್ಕಾರಕ್ಕೆ ಪಿಂಡ ಪ್ರದಾನ ಮಾಡಿ ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ ಎಂದು ಘೋಷಣೆ ಕೂಗಿದರು.ರೈತರ ಪ್ರತಿಭಟನೆಯನ್ನು ಜೆಡಿಎಸ್ ಕೃಪಾಪೋಷಿತ ನಾಟಕ ಎಂದು ಹೇಳುವ ಮೂಲಕ ಶಾಸಕ ಬಾಲಕೃಷ್ಣ ರೈತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಸ್ವಾಭಿಮಾನದಿಂದ ಜೀವನ ಮಾಡುತ್ತಿರುವ ಮಹಿಳೆಯರನ್ನು ನಾಟಕ ಮಾಡುವವರು ಅಂದಿದ್ದಾರೆ. ಕೂಡಲೇ ಬಾಲಕೃಷ್ಣ ರೈತ ಮಹಿಳೆಯರ ಕ್ಷಮೆ ಕೇಳಬೇಕು. ಇಲ್ಲವಾದರೆ ಬಾಲಕೃಷ್ಣ ಮನೆ ಮುಂದೆ ಧರಣಿ ನಡೆಸುವುದಾಗಿ ರೈತ ಮಹಿಳೆಯರು ಎಚ್ಚರಿಕೆ ನೀಡಿದರು.ಕಳೆದ 495 ದಿನಗಳಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಯೋಜನೆಯನ್ನು ವಿರೋಧ ಮಾಡುತ್ತಿದ್ದೇವೆ. ಆದರೂ ಸಹ ನಮ್ಮ ಮಾತಿಗೆ ಮನ್ನಣೆ ನೀಡದೆ ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ನಾವು ಯಾವುದೇ ಕಾರಣಕ್ಕೂ ಭೂಮಿಯನ್ನು ನೀಡುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದರು.ರೈತರು ರಸ್ತೆ ಮಧ್ಯದಲ್ಲಿ ಕುರ್ಚಿಗಳ ಮೇಲೆ ಕುಳಿತು ಒನಕೆ ಹಿಡಿದು ಪ್ರತಿಭಟಿಸಿದ್ದರಿಂದ ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಪೊಲೀಸರು ರೈತರ ಮನವೊಲೀಸಿ ರಸ್ತೆ ತಡೆ ತೆರವುಗೊಳಿಸಿದರು.
ಫೋಟೋ....ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ರೈತ ಮಹಿಳೆಯರು ರಾಜ್ಯಸರ್ಕಾರಕ್ಕೆ ಪಿಂಡ ಪ್ರದಾನದ ಅಣಕು ಪ್ರದರ್ಶನ ಮಾಡಿ ಪ್ರತಿಭಟಿಸಿದರು.