ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮೇ ಮಧ್ಯಂತರ ತಿಂಗಳಲ್ಲಿ ಬಿಸಿಲಿನ ತಾಪಮಾನ ೪೦ ಡಿಗ್ರಿ ದಾಟಿದ್ದರೂ ಈ ಬಾರಿ ಕೃಷ್ಣೆಯ ಒಡಲು ನೀರಿನಿಂದ ತುಂಬಿದ್ದು, ಜನತೆಯಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ರಬಕವಿ-ಬನಹಟ್ಟಿ, ತೇರದಾಳ, ಅಥಣಿ ಸೇರಿದಂತೆ ಹಲವಾರು ಪಟ್ಟಣ ಹಾಗೂ ಗ್ರಾಮಗಳ ಜನ ಹಾಗೂ ಜಾನುವಾರುಗಳಿಗೆ ಜೀವಜಲವಾಗಿರುವ ನದಿ ನೀರನ್ನು ಮಿತವಾಗಿ ಬಳಸಿದರೆ ಈ ಬಾರಿಯ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದೆ ಜನರು ನೆಮ್ಮದಿಯಿಂದ ಇರಲಿದ್ದಾರೆ.ಹಿಪ್ಪರಗಿ ಜಲಾಶಯದಲ್ಲಿ ಶನಿವಾರದ ವೇಳೆಗೆ ೧.೧೩ ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಡೆಡ್ ಸ್ಟೋರೇಜ್ನ ೦.೮ ಟಿಎಂಸಿಯಲ್ಲಿ ೦.೩೫ ಟಿಎಂಸಿಯಷ್ಟು ನೀರು ಬ್ಯಾರೇಜ್ನಲ್ಲಿದೆ. ಇದರಿಂದ ಸಂಪೂರ್ಣ ಬೇಸಿಗೆ ದಿನಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುವ ಲೆಕ್ಕಾಚಾರ ಅಧಿಕಾರಿಗಳದ್ದು. ಆದರೆ ಬಾಷ್ಪೀಕರಣ ಹಾಗೂ ಬೆಳೆಗಳಿಗೆ ನೀರುಣಿಸುವಲ್ಲಿ ರೈತರು ತೋರಬೇಕಾದ ಜವಾಬ್ದಾರಿ ತೋರದಿದ್ದಲ್ಲಿ ಈ ಎಲ್ಲ ಲೆಕ್ಕಾಚಾರ ತಲೆಕೆಳಗಾಗುವುದು ಖಚಿತ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಜನತೆಗೆ ನೀರಿನ ಸಮಸ್ಯೆ ನಿವಾರಿಸಲು ಹಿಪ್ಪರಗಿ ಬ್ಯಾರೇಜ್ ಸಹಕಾರಿಯಾಗಿದ್ದು, ಜೂನ್ ಮೊದಲ ವಾರದವರದ ಅವಧಿಗೆ ಯಾವುದೇ ರೀತಿ ನೀರಿನ ಕೊರತೆಯಾಗದು ಎನ್ನುವುದು ಅಧಿಕಾರಿಗಳ ಹೇಳಿಕೆ.ಸದ್ಯ ಸಂಗ್ರಹಗೊಂಡಿರುವ ನೀರು ಹಿಪ್ಪರಗಿ ಹಿಂಭಾಗದಲ್ಲಿನ ಅಥಣಿ, ರಬಕವಿ-ಬನಹಟ್ಟಿ, ತೇರದಾಳ ಸೇರಿದಂತೆ ಅನೇಕ ಪಟ್ಟಣ ಹಾಗೂ ಗ್ರಾಮಗಳಿಗೆ ನೀರಿನ ಬವಣೆಯಿಂದ ನಿರಾಳಗೊಳ್ಳಲು ಜಲಾಶಯ ನೆಮ್ಮದಿ ಮೂಡಿಸಿದೆ.