ಗಾಜಾ ಪಟ್ಟಿ ಮೇಲಿನ ಇಸ್ರೇಲ್ ದಾಳಿ ಖಂಡನೀಯ

| Published : Jun 18 2025, 02:35 AM IST / Updated: Jun 18 2025, 02:36 AM IST

ಸಾರಾಂಶ

ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಿರಂತರ ವಾಯುದಾಳಿ ಖಂಡಿಸಿ ಸಿಪಿಐ, ಸಿಪಿಐ(ಎಂ), ಎಸ್‌ಯುಸಿಐ, ಕರ್ನಾಟಕ ಜನಶಕ್ತಿ, ಕಟ್ಟಡ ಕಾರ್ಮಿಕರು ಸೇರಿದಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು. ಶ್ರೀ ಜಯದೇವ ವೃತ್ತದಲ್ಲಿ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾನಿರತರು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಶ್ರೀ ಜಯದೇವ ವೃತ್ತದಲ್ಲಿ ಸಿಪಿಐ, ಸಿಪಿಐ(ಎಂ) ಇನ್ನಿತರ ಸಂಘಟನೆಗಳ ಪ್ರತಿಭಟನೆಯಲ್ಲಿ ಮುಖಂಡರ ಆಕ್ರೋಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಿರಂತರ ವಾಯುದಾಳಿ ಖಂಡಿಸಿ ಸಿಪಿಐ, ಸಿಪಿಐ(ಎಂ), ಎಸ್‌ಯುಸಿಐ, ಕರ್ನಾಟಕ ಜನಶಕ್ತಿ, ಕಟ್ಟಡ ಕಾರ್ಮಿಕರು ಸೇರಿದಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು. ಶ್ರೀ ಜಯದೇವ ವೃತ್ತದಲ್ಲಿ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾನಿರತರು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರು ಮಾತನಾಡಿ, ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಿರಂತರ ವಾಯು ದಾಳಿ ನಡೆಸಿದ್ದರಿಂದ ಸುಮಾರು 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ದಾಳಿಗೆ 500ಕ್ಕೂ ಹೆಚ್ಚು ಜನ ಬಲಿಯಾದ ಬಗ್ಗೆ ಪ್ಯಾಲೆಸ್ತೀನಿಯನ್‌ ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಇದು ಇಸ್ರೇಲ್‌ನ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಅಂತಾರಾಷ್ಟ್ರೀಯ ಗಡಿಯಲ್ಲಿ ಗಾಜಾಕ್ಕೆ ಆಹಾರ ಸಹಾಯ ಮಾಡಲು ಹೊರಟಿದ್ದ ಮೆಕ್ಲೀನ್ ಆಫ್ ದಿ ಫ್ರೀಡಂ ಫ್ಲಾಟಿಲ್ಲಾ ಗಾಜಾ ಹಡಗಿನ ಮೇಲೂ ಇಸ್ರೇಲ್ ದಾಳಿ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಮೇರಿಕಾ ಮತ್ತದರ ಮಿತ್ರ ದೇಶಗಳ ಬೆಂಬಲದಿಂದ ವಿಶ್ವ ಸಂಸ್ಥೆ, ಜಾಗತಿಕ ಸಮುದಾಯದ ಯಾವುದೇ ಎಚ್ಚರಿಕೆಗಳನ್ನೂ ಗೌರವಿಸದೇ, ಮಾನವ ಹತ್ಯೆ ಚಟುವಟಿಕೆಗಳಲ್ಲಿ ಇಸ್ರೇಲ್ ತೊಡಗಿದೆ ಎಂದು ಆರೋಪಿಸಿದರು.

ಭಾರತ ಸರ್ಕಾರ ತನ್ನ ಚಾರಿತ್ರಿಕ, ಪ್ಯಾಲೆಸ್ತೀನ್ ಪರವಾದ ಧೋರಣೆಯನ್ನು ಕೈಬಿಟ್ಟು, ಇಸ್ರೇಲನ್ನು ಓಲೈಸುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ನಿಲುವಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಭಾರತ ಸರ್ಕಾರದ ನಿಲುವು ಬದಲಾಗಿರುವುದು ಅತ್ಯಂತ ಅವಮಾನಕರ ಸಂಗತಿಯಾಗಿದೆ ಎಂದರು.

ಸಂಘಟನೆಗಳ ಮುಖಂಡರಾದ ಆವರಗೆರೆ ಎಚ್.ಜಿ. ಉಮೇಶ, ಆವರಗೆರೆ ಚಂದ್ರು, ಕೆ.ಎಚ್.ಆನಂದರಾಜ, ಮಂಜುನಾಥ ಕೈದಾಳೆ, ಕುಕ್ಕವಾಡ ಮಂಜುನಾಥ, ಅಣಬೇರು ತಿಪ್ಪೇಸ್ವಾಮಿ, ಟಿ.ವಿ.ಎಸ್.ರಾಜು, ಕೆಜೆಎಸ್‌ನ ಪವಿತ್ರ, ಮಹಮ್ಮದ್ ರಫೀಕ್‌, ಜೆ.ಯಲ್ಲಪ್ಪ, ಈ.ಶ್ರೀನಿವಾಸ, ನರೇಗಾ ರಂಗನಾಥ, ಶ್ರೀನಿವಾಸಮೂರ್ತಿ, ಸರೋಜಾ, ರುದ್ರಮ್ಮ, ಕೆ.ಭಾರತಿ, ಅನಿಲ ಕುಮಾರ, ಷಣ್ಮುಖಸ್ವಾಮಿ, ಸೋಮಶೇಖರ, ರಾಜು, ಪರಶುರಾಮ, ಸತೀಶ ಅರವಿಂದ, ವಿ.ಲಕ್ಷ್ಮಣ, ಎ.ತಿಪ್ಪೇಶ, ಎಚ್.ಎಸ್. ಚಂದ್ರು, ಇ.ಎಸ್.ಉಮೇಶ, ಶೇಖರ ನಾಯ್ಕ, ಶಿವಾಜಿ ರಾವ್‌, ಸುಷ್ಮಾ, ಚಿನ್ನಪ್ಪ, ಯರಗುಂಟೆ ಸುರೇಶ, ಗಜೇಂದ್ರ ಇತರರು ಇದ್ದರು.

- - -

(ಬಾಕ್ಸ್‌) * ಮಾನವ ಕುಲ ನಾಶಗೈಯ್ಯುವ ಯುದ್ಧ ಇಸ್ರೇಲ್‌ ದಾಳಿ ಹಿನ್ನೆಲೆ ಜೂ.17ರಂದು ಪಾಲೆಸ್ತೀನ್ ಜನರ ಪರವಾಗಿ ರಾಷ್ಟ್ರೀಯ ಸೌಹಾರ್ದ ದಿನವನ್ನು ದೇಶಾದ್ಯಂತ ಆಚರಿಸಲು ಎಡ ಪಕ್ಷ, ಸಂಘಟನೆಗಳು ಕರೆ ನೀಡಿವೆ. ಶಾಂತಿಪ್ರಿಯ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಶಕ್ತಿಗಳು ಇಂತಹ ಕರೆಯನ್ನು ಯಶಸ್ವಿಗೊಳಿಸಬೇಕು. ಬೆಂಗಳೂರಿನಲ್ಲೂ ಸಿಪಿಐ ರಾಜ್ಯ ಕಚೇರಿಯಲ್ಲಿ ಸೌಹಾರ್ದತಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ದೇಶ, ದೇಶಗಳ ಮಧ್ಯೆ ನಡೆಯುವ ಯುದ್ಧಗಳ ಹಿಂದೆ ಲಾಭದ ಕುತಂತ್ರ ಅಡಗಿದ್ದು, ಬಲಾಢ್ಯ ದೇಶಗಳ ಲಾಭಕೋರತನ, ಕುತಂತ್ರಗಳಿಂದ ಇಂತಹ ಯುದ್ಧಗಳು ನಡೆಯುತ್ತಿವೆ. ಯುದ್ಧಗಳು ಮಾನವ ಕುಲವನ್ನೇ ನಾಶ ಮಾಡುವತ್ತ ಹೊರಟಿವೆ. ಮಾನವೀಯತೆಯನ್ನೇ ಮರೆತು, ಯುದ್ಧಗಳು ರಾಕ್ಷಸೀ ವರ್ತನೆಗೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಡ ಪಕ್ಷ, ಸಂಘಟನೆಗಳು ಇಸ್ರೇಲ್ ಕೃತ್ಯವನ್ನು ಖಂಡಿಸಿ ಹೋರಾಟ ನಡೆಸುತ್ತಿವೆ ಎಂದರು.

- - -

-17ಕೆಡಿವಿಜಿ:

ಗಾಜಾ ಮೇಲೆ ಇಸ್ರೇಲ್‌ ನಿರಂತರ ವಾಯುದಾಳಿ, ಅಮಾಯಕರ ಹತ್ಯೆ ಖಂಡಿಸಿ ದಾವಣಗೆರೆಯಲ್ಲಿ ಮಂಗಳವಾರ ಎಡ ಪಕ್ಷ, ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

- - -

(ಸಾಂದರ್ಭಿಕ ಚಿತ್ರ: ಪ್ರೊಟೆಸ್ಟ್‌)