ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮುದಾಯದ ಯುವ ಪೀಳಿಗೆಗಳಿಗೆ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳ ವಿಷಯವನ್ನು ಮನದಟ್ಟು ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಮ್ಮಿಲನ ಕೂಟಗಳು ಹಾಗೂ ವಿಚಾರ ವಿನಿಮಯ ಅತ್ಯಂತ ಸಹಕಾರಿಯಾಗಲಿದೆ ಎಂದು ವಿರಾಜಪೇಟೆ ವಿಧಾನಸಭೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.ಬೆಂಗಳೂರು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ಆಯೋಜಿಸಿದ ಆರನೇ ವರ್ಷದ ಕ್ಗ್ಗಟ್ನಾಡ್ ಕೊಡವ ಸಂಘ ಬೆಂಗಳೂರು ಇವರ (ಒತ್ತೋರ್ಮೆ ಕೂಟ) ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕ್ಗ್ಗಟ್ನಾಡ್ ಕೊಡವ ಸಂಘದ ಏಳಿಗೆಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕು ಕ್ಗ್ಗಟ್ನಾಡ್ ಕೊಡವ ಸಂಘ ಹಾಗೂ ಅದರ ಸಂಘಟನೆ ಮತ್ತು ಆಚಾರ ವಿಚಾರ ಮತ್ತಷ್ಟು ಬೆಳೆಯಬೇಕೆಂದರೆ ಸಂಘಟನೆ ಹಾಗೂ ಸಮಾಜದ ಪ್ರತಿಯೊಬ್ಬರು ತಮ್ಮ ಕೊಡುಗೆಯನ್ನು ನೀಡಲೇಬೇಕು. ಆ ಮೂಲಕ ಕೊಡವ ಸಾಹಿತ್ಯ ಸಂಸ್ಕೃತಿ ಮತ್ತು ಆಚರಣೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.ಐಆರ್ಎಸ್ ಉಪ ನಿರ್ದೇಶಕರು ಹಾಗೂ ಇಡಿ ಅಧಿಕಾರಿಗಳಾದ ಕೊಟ್ಟಂಗಡ ಡಾ. ಪೆಮ್ಮಯ್ಯ, ಕಸ್ಟಮ್ ಹಾಗೂ ಜಿಎಸ್ ಟಿ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಚೊಟ್ಟೆಯಂಡಮಾಡ ಸತೀಶ್, ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಕ್ಗ್ಗಟ್ನಾಡ್ ಕೊಡವ ಸಂಘದ ಅಧ್ಯಕ್ಷ ಮಂಡಚಂಡ ಸುರೇಶ್ ಪೂಣಚ್ಚ, ಉಪಾಧ್ಯಕ್ಷ ತಿತೀರ ರೋಷನ್ ಅಪ್ಪಚ್ಚು, ಗೌರವ ಕಾರ್ಯದರ್ಶಿ ಮಲ್ಲೆಂಗಡ ಮಧು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಗುಡ್ಡಮಾಡ ಸದಾ ತಮ್ಮಯ್ಯ, ಖಜಾಂಚಿ ಮಾಚಿಮಾಡ ಕುಶಾಲಪ್ಪ, ಜಂಟಿ ಖಜಾಂಚಿ ಶರತ್ ಕುಶಾಲಪ್ಪ, ಸಂಘದ ಸದಸ್ಯರು, ಬೆಂಗಳೂರಿನಲ್ಲಿ ನೆಲೆಸಿರುವ ಕೊಡವ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.