ಸದೃಢ ಆರೋಗ್ಯಕರ ಸಮಾಜ ನಿರ್ಮಿಸಲು ವೈದ್ಯರ ಸೇವೆ ಅನನ್ಯವಾಗಿದೆ. ಹೀಗಾಗಿ ವೈದ್ಯರನ್ನು ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಇವರ ಸೇವೆ ಗುರುತಿಸಿ ವೈದ್ಯರಿಗೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಮದ್ದೂರು:

ವೈದ್ಯರು ಆಧುನಿಕ ಧನ್ವಂತ್ರಿಗಳು. ವೈದ್ಯರಿಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದು ಆಯುಷ್ ಆಸ್ಪತ್ರೆ ಮುಖ್ಯಾಧಿಕಾರಿ ಕವಿತ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಅರ್ಜುನಪುರಿ ಆಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಬಿ.ಸಿ.ರಾಯ್ ಜನ್ಮದಿನಾಚರಣೆ ಅಂಗವಾಗಿ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸ್ವಂತ ಬದುಕಿಗೆ ಸಮಯವನ್ನೂ ಮೀಸಲಿಡದೇ ಸಾರ್ವಜನಿಕ ಆರೋಗ್ಯಕ್ಕಾಗಿ ಸದಾ ಮಿಡಿಯುವ ವೈದ್ಯರ ಸೇವೆ ನಿಜಕ್ಕೂ ಅಭಿನಂದನೀಯ ಎಂದರು.

ಆಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಕೆ.ಪುಟ್ಟಲಿಂಗಯ್ಯ ಮಾತನಾಡಿ, ಸದೃಢ ಆರೋಗ್ಯಕರ ಸಮಾಜ ನಿರ್ಮಿಸಲು ವೈದ್ಯರ ಸೇವೆ ಅನನ್ಯವಾಗಿದೆ. ಹೀಗಾಗಿ ವೈದ್ಯರನ್ನು ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಇವರ ಸೇವೆ ಗುರುತಿಸಿ ವೈದ್ಯರಿಗೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಈ ವೇಳೆ ಆಸ್ಪತ್ರೆ ವೈದ್ಯರಾದ ಡಾ.ಪ್ರವೀಣ್ ಕುಮಾರ್ ಹಾಗೂ ಡಾ.ಸಿಂಧೂ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ 2ನೇ ಜಿಲ್ಲಾ ಉಪ ರಾಜ್ಯಪಾಲ ಎಂ.ಎನ್.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಅರ್ಜುನಪುರಿ ಆಲಯನ್ಸ್ ಕ್ಲಬ್ ಅಧ್ಯಕ್ಷ ಯು.ಎಸ್.ರವಿ, ಕಾರ್ಯದರ್ಶಿ ಎಚ್.ಸುನೀತಾ, ಜಿಲ್ಲಾ ಸಂಪುಟ ಖಜಾಂಚಿ ವಿ.ಎಸ್.ನಾಗರಾಜು, ಅಡ್ವೋಕೇಟ್ ಆಲಯನ್ಸ್ ಕ್ಲಬ್ ನ ಚಿಕ್ಕಣ್ಣಗೌಡ, ಕೃಷ್ಣ, ಆಲಯನ್ಸ್ ಕ್ಲಬ್ ಗಳ ಸದಸ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮದ್ದೂರು: 2026-27ನೇ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲು ಆಸಕ್ತ ರೈತರಿಂದ ಅರ್ಜಿ ಅಹ್ವಾನಿಸಿರುವುದಾಗಿ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ ತಿಳಿಸಿದ್ದಾರೆ.ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯುವ ಕೃಷಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ಹಸಿರು ಮನೆ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು ಕುರಿ ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡಿರುವ ರೈತರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಜಿಲ್ಲೆಯ 10 ರೈತರಿಗೆ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ತಲಾ 25,000 ರು., ತಾಲೂಕಿನ 5 ರೈತರಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ 10,000 ರು. ನಗದು ಬಹುಮಾನ ನೀಡಲಾಗುವುದು. ಆಸಕ್ತ ರೈತರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 10 ರಂದು ಸಂಜೆ 5 ಗಂಟೆಯೊಳಗೆ ತಲುಪಿಸಬೇಕು ಎಂದು ಹೇಳಿದ್ದಾರೆ.