ಸಾರಾಂಶ
ಮಳೆ ಮಾಪನ ಯಂತ್ರಗಳ ದುರಸ್ತಿಗೆ ರಾಜ್ಯ ಸರ್ಕಾರ ಈಗಾಗಲೇ ಟೆಂಡರ್ ನೀಡಿದ್ದು, ರಿಪೇರಿ ಕಾರ್ಯವೂ ನಡೆಯುತ್ತಿದೆ.
ಶಿರಸಿ: ಮಳೆ ಮಾಪನ ಯಂತ್ರಗಳ ದುರಸ್ತಿಗೆ ರಾಜ್ಯ ಸರ್ಕಾರ ಈಗಾಗಲೇ ಟೆಂಡರ್ ನೀಡಿದ್ದು, ರಿಪೇರಿ ಕಾರ್ಯವೂ ನಡೆಯುತ್ತಿದೆ. ಮಳೆ ಮಾಪನ ಕೇಂದ್ರ ಸರಿ ಆಗಬೇಕು. ಆದರೆ, ಮಳೆ ಮಾಪನ ಯಂತ್ರವೊಂದೇ ಬೆಳೆ ವಿಮೆಗೆ ಆಧಾರ ಎಂಬುದು ಸರಿಯಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ನಗರದಲ್ಲಿ ಶನಿವಾರ ಮಧ್ಯಮದೊಂದಿಗೆ ಮಾತನಾಡಿ, ಕಳೆದ ವರ್ಷ ಈ ಯಂತ್ರಗಳ ಸಮಸ್ಯೆ ಇದ್ದರೂ ಅಂತಿಮವಾಗಿ ಒತ್ತಡಕ್ಕೆ ಮಣಿದು ಪರಿಹಾರ ಬಿಡುಗಡೆಗೊಳಿಸಿದೆ. ಹೀಗಾಗಿ, ಈ ವರ್ಷ ಸಮಸ್ಯೆ ಆಗಲಾರದು ಎಂಬ ಆಶಾಭಾವವಿದೆ ಎಂದರು.ಬೇಡ್ತಿ ವರದಾ ನದಿ ಜೋಡಣೆ ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆಗೆ ಮಾರಕವಾಗಲಿದೆ. ಜನರನ್ನು ಕತ್ತಲೆಯಲ್ಲಿಟ್ಟು ಯೋಜನೆಯನ್ನು ಸರ್ಕಾರಗಳು ಕಾರ್ಯಗತಗೊಳಿಸುವುದು ಸೂಕ್ತವಲ್ಲ. ಬೇಡ್ತಿ ವರದಾ ನದಿ ಜೋಡಣೆ ವಿಷಯ ಅನೇಕ ವರ್ಷಗಳಿಂದಲೂ ಪ್ರಸ್ತಾಪವಾಗುತ್ತಲೇ ಇದೆ. ಆದರೆ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಇಲ್ಲಿಯವರೆಗೂ ಚರ್ಚೆಯಾಗುತ್ತಿದೆ ಹೊರತು ಮುಂದೆ ಹೋಗಿಲ್ಲ. ಈಗಾಗಲೇ ಹಾವೇರಿ ಭಾಗದ ಜನತೆ, ಜನಪ್ರತಿನಿಧಿಗಳು ಈ ಯೋಜನೆ ಕಾರ್ಯಗತಗೊಳಿಸಲು ಒತ್ತಡ ತರುತ್ತಿದ್ದಾರೆ. ಗ್ರಾಪಂ ಮಟ್ಟದಲ್ಲಿಯೂ ಅಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಇನ್ನು ಮುಂದೆ ಸಹ ಚರ್ಚೆಯಾಗಿಯೇ ಇರುತ್ತದೆಯೇ ಹೊರತು ಈ ಯೋಜನೆ ಕಾರ್ಯರೂಪಕ್ಕೆ ಬರಲಾರದು ಎಂದರು.