ಸಾರಾಂಶ
ಭಟ್ಕಳ ತಾಲೂಕಿನಾದ್ಯಂತ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಶ್ರೀರಾಮ ಲಲ್ಲಾನ ಪ್ರತಿಷ್ಠಾಪನೆಯ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಭಟ್ಕಳ:
ತಾಲೂಕಿನಾದ್ಯಂತ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಶ್ರೀರಾಮ ಲಲ್ಲಾನ ಪ್ರತಿಷ್ಠಾಪನೆಯ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಭಟ್ಕಳ ಪಟ್ಟಣ ಮತ್ತು ಗ್ರಾಮಂತರ ಪ್ರದೇಶದ ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ಕೇಸರಿಮಯವಾಗಿತ್ತು.
ವಿವಿಧೆಡೆ ಶೋಭಾಯಾತ್ರೆ ನಡೆಸಿ ರಾಮಮಂದಿರದ ಉದ್ಘಾಟನೆ ಸಂಭ್ರಮಿಸಲಾಯಿತು. ಪಟ್ಟಣದಲ್ಲಿ ಹಿಂದೂ ಬಾಂಧವರು ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಶ್ರೀರಾಮ ಮಂದಿರ ಉದ್ಘಾಟನೆಗೆ ಸಂಭ್ರಮ ವ್ಯಕ್ತಪಡಿಸಿದರು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ದೀಪೋತ್ಸವ, ಅನ್ನದಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಕುದ್ರೆಬೀರಪ್ಪ ಹಾಗೂ ಶ್ರೀ ಹನುಮಂತ ದೇವಸ್ಥಾನದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ಸೋಮವಾರ ಅನ್ನಸಂತರ್ಪಣೆ ಮತ್ತು ಲಕ್ಷತ್ಪೋತ್ಸವ ನಡೆಯಿತು. ಮುರ್ಡೇಶ್ವರ ದೇವಸ್ಥಾನದಲ್ಲಿ ರಾಮ ತಾರಕ ಹೋಮ, ರಾತ್ರಿ ರಾಮೋತ್ಸವ, ಸುಂದರ ರಾಮೇಶ್ವರ ದೇವಸ್ಥಾನದಿಂದ ಓಲಗ ಮಂಟಪದ ವರೆಗೆ ಬೃಹತ್ ಮೆರವಣಿಗೆ, ದೀಪೋತ್ಸವ, ರಾಮ ಪೂಜೆ ನಡೆಯಿತು.ಮಾರುಕೇರಿ ಹೂತ್ಕಳದ ಶ್ರೀ ಧನ್ವಂತರಿ ದೇವಸ್ಥಾನದಲ್ಲಿ ರಾಮತಾರಕ ಯಜ್ಞ, ವಿಶೇಷ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾಸ್ಮುಡಿ ಹನುಮಂತ ದೇವಸ್ಥಾನದಲ್ಲಿ ರಾಮ ರಕ್ಷಾ ಸ್ತೋತ್ರದ ಕಂಠಪಾಠ ಸ್ಪರ್ಧೆ, ಧಾರ್ಮಿಕ ಸಭೆ, ಮಹಾಪೂಜೆ, ಸಂಜೆ ದೀಪಾರಾಧನೆ, ಭಜನೆ ನಡೆಯಿತು. ಕರಿಕಲ್ ಶ್ರೀರಾಮ ಮಂದಿರದಲ್ಲಿ ಭಜನೆ, ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಭಜನೆ. ದೀಪಾರಾಧನೆ ನಡೆಯಿತು. ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಳೇಕೋಟೆ ಹನುಮಂತ ದೇವಸ್ಥಾನದಲ್ಲೂ ಸಹ ಬೆಳಗ್ಗೆ ವಿಶೇಷ ಪೂಜೆ, ಮಧ್ಯಾಹ್ನ ರಂಗೋಲಿ ಸ್ಪರ್ಧೆ, ದೀಪೋತ್ಸವ ಮುಂತಾದ ಕಾರ್ಯಕ್ರಮಗಳು ಜರುಗಿದವು. ಪಟ್ಟಣ, ಗ್ರಾಮಾಂತರ ಭಾಗದಲ್ಲಿ ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಕೆಲವೆಡೆ ಬೆಳಗ್ಗೆ ಪಾನಕ, ಸಿಹಿ ತಿಂಡಿ ವಿತರಿಸಲಾಯಿತು. ತಾಲೂಕಿನಲ್ಲಿ ಎಲ್ಲಿ ನೋಡಿದರೂ ಶ್ರೀರಾಮ ಮಂದಿರ ಉದ್ಘಾಟನೆಯ ಕಟೌಟ್, ಕೇಸರಿ ಪತಾಕೆ, ವಾಹನ, ಅಂಗಡಿಗಳಲ್ಲಿ ಕೇಸರಿ ಬಾವುಟವೇ ಕಾಣುತ್ತಿತ್ತು. ಕರಿಕಲ್ ರಾಮಮಂದಿರ ಸೇರಿದಂತೆ ವಿವಿಧೆಡೆ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ವೀಕ್ಷಿಸಲು ಸ್ಕ್ರೀನ್ ಹಾಕಲಾಗಿತ್ತು.