ಜಕಣಾಚಾರಿ ಸ್ಪೂರ್ತಿ ಎಲ್ಲರಲ್ಲಿ ಮನೆಮಾಡಲಿ

| Published : Jan 02 2024, 02:15 AM IST

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ವಿಜಯಪುರಕಲೆ ಎಂದೆಂದಿಗೂ ಶಾಶ್ವತ. ಅಮರಶಿಲ್ಪಿ ಜಕಣಾಚಾರಿಯಂತಹ ಮಹನೀಯರ ಕುರಿತು ತಿಳಿದುಕೊಂಡು ಅವರ ಕಲೆಯ ಕುರಿತು ಸ್ಫೂರ್ತಿ ಪಡೆದು, ಶಿಲ್ಪಕಲೆಯಲ್ಲಿ ಸಾಧನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ಮರೆಯದ ಅಮರ ಶಿಲ್ಪಕಲೆಗಳನ್ನು ಕೊಟ್ಟ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಇವರ ಸಾಧನೆಯು ನಮಗೆ ಪ್ರೇರಣೆಯಾಗಬೇಕು. ಜಕಣಾಚಾರಿ ಅವರು ತಮ್ಮ ಶಿಲ್ಪಕಲೆಗಳನ್ನು ಕೆತ್ತಲು ಕೆಲಸದ ಮೂಲಕ ತಪಸ್ಸು ಮಾಡಿದಂತೆ ಇಂದಿನ ಜನರು ತಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯಲು ತಮ್ಮ ವೃತ್ತಿಯ ಗೌರವ ಹೊಂದಿ, ಆ ದಿಸೆಯಲ್ಲಿ ಸಾಧನೆ ಮಾಡಬೇಕು ಎಂದರು.

ನಂತರ ಉಪನ್ಯಾಸ ನೀಡಿದ ಡಾ. ಮಾಧವ ಎಚ್. ಗುಡಿ ಮಾತನಾಡಿ, ಕಲ್ಲಿನಲ್ಲಿ ಹೂ ಅರಳಿಸಿದವರು ಜಕಣಾಚಾರಿ. ಸತತ 26 ವರ್ಷಗಳ ಕಾಲ ಕೆತ್ತನೆಯ ಕಾಯಕ ಎಂದು ಬದುಕಿದ ಮಹನೀಯರು. ವಿಶ್ವ ಪ್ರಸಿದ್ಧ ಬೇಲೂರು ಹಾಗೂ ಹಳೇಬೀಡು ದೇವಾಲಯಗಳನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಿ ಮರೆಯಲಾಗದ ಕಾಣಿಕೆ ನೀಡಿದ್ದಾರೆ. ಅವರ ಶಿಲ್ಪ ಕಲೆಯ ಗಮನಿಸಿದ ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ ಅವರಿಗೆ ಬೇಲೂರಿನ ಚನ್ನಕೇಶವ ದೇವಸ್ಥಾನ ಕಟ್ಟಲು ಅನುಮತಿ ಕೊಟ್ಟರು. ಅದನ್ನು ಜಕಣಾಚಾರಿ ಅವರು ನಿರ್ಮಿಸಿ ಜಗತ್ತಿಗೆ ಮಹತ್ತರ ಕೊಡುಗೆ ನೀಡಿದರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಥಗಳನ್ನು ನಿರ್ಮಿಸುವಲ್ಲಿ ಪರಿಣಿತರಾದ ಪಾಂಡುರಂಗ ಬಡಿಗೇರ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಪೂಜ್ಯ ಮೂರುಜಾವ ಮಠದ ಮಹೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಉಪಸ್ಥಿತರಿದ್ದರು. ಸಂಗೀತ ಕಾರ್ಯಕ್ರಮವನ್ನು ಪ್ರಜ್ಞಾ ಮೇತ್ರಿ ಪಾಟೀಲ ಪ್ರಸ್ತುತ ಪಡಿಸಿದರು.

ಅದ್ಧೂರಿ ಮೆರವಣಿಗೆ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಾಹಾದೇವ ಮುರಗಿ ಚಾಲನೆ ನೀಡಿದರು. ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತದಿಂದ ನಗರದ ಶ್ರೀ ಕಂದಗಲ ಹನುಮಂತರಾಯ ರಂಗಮಂದಿರವರೆಗೆ ನಡೆಯಿತು.