ಸಾರಾಂಶ
ಕೆ.ಆರ್.ಪೇಟೆ : ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜುಲೈ 1ರಂದು ಪಟ್ಟಣಕ್ಕೆ ಆಗಮಿಸಲಿದ್ದು, ಯುವ ನಾಯಕನನ್ನು ಅದ್ಧೂರಿಯಾಗಿ ಸ್ವಾಗತಿಸಲು ತಾಲೂಕು ಜೆಡಿಎಸ್ ಕಾರ್ಯಕರ್ತರು ನಿರ್ಧರಿಸಿದರು.
ಪಟ್ಟಣದ ಬಸವೇಶ್ವರ ನಗರದ ಶಾಸಕ ಎಚ್.ಟಿ.ಮಂಜು ಗೃಹ ಕಚೇರಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ತಾಲೂಕಿಗೆ ನಿಖಿಲ್ ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಖಂಡರು, ಕಾರ್ಯಕರ್ತರಿಗೆ ಸೂಚಿಸಲಾಯಿತು.
ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಜೆಡಿಎಸ್ ರೈತರ ಪಕ್ಷ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಟಿ.ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಎಲ್ಲರೂ ಸದಾ ದೇಶದ ಅನ್ನಧಾತರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಪಕ್ಷವನ್ನು ನಂಬಿರುವ ನಾಡಿನ ರೈತರು ಮತ್ತು ಯುವ ಸಮುದಾಯವನ್ನು ಉಳಿಸಬೇಕಾದರೆ ಪಕ್ಷ ತಳಮಟ್ಟದಲ್ಲಿ ಮತ್ತಷ್ಟು ಶಕ್ತಿಯುತವಾಗಬೇಕು. ಪಕ್ಷದ ಸಂಘಟನೆಗಾಗಿ ನಿಖಿಲ್ ಸುದೀರ್ಘ 58 ದಿನಗಳ ಕಾಲ ನಿರಂತರವಾಗಿ ರಾಜ್ಯ ಸುತ್ತುತ್ತಿದ್ದಾರೆ. ಇವರಿಗೆ ಬಲ ತುಂಬಲು ಮುಂದಾಗಬೇಕು ಎಂದರು.
ನಿಖಿಲ್ ಪ್ರಬುದ್ಧ ರಾಜಕಾರಣಿಯಾಗಿ ಹೊರಹೊಮ್ಮುತ್ತಿದ್ದಾರೆ. ರಾಜ್ಯದ ಜನ ಅವರ ಮೇಲೆ ಭರವಸೆ ಹೊಂದಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗಟ್ಟಿಯಾಗಿದೆ. ನಿಖಿಲ್ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಕಾರ್ಯಕರ್ತನೂ ಸಂಪೂರ್ಣ ಜವಾಬ್ದಾರಿ ಹೊತ್ತು ತಮ್ಮ ತಮ್ಮ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲೆಡೆ ಕಾಂಗ್ರೆಸ್ ಜಯಭೇರಿ ಭಾರಿಸಿದರೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿದೆ. ಇದಕ್ಕೆ ಇಲ್ಲಿನ ಕಾರ್ಯಕರ್ತರು ಪ್ರಮುಖ ಕಾರಣ. ನಾನು ಕ್ಷೇತ್ರದ ಶಾಸಕನಾಗಿದ್ದರೂ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ ಎಂದರು.
ನಾನು ಹೋರಾಟದ ನೆಲೆಗಟ್ಟಿನಿಂದ ಬಂದವನು. ವಿದ್ಯಾರ್ಥಿ ದೆಸೆಯಲ್ಲಿ ಡೈರಿ ನಿರ್ದೇಶಕನಾಗಿ ಆಯ್ಕೆಯಾದ ನಂತರ ರೈತ ಸಂಘದ ಮೂಲಕ ಹೋರಾಟಗಾರನಾಗಿ ರಾಜಕೀಯಕ್ಕೆ ಬಂದು ಇಂದು ಶಾಸಕನಾಗಿದ್ದೇನೆ. ಮನ್ಮುಲ್ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ಕ್ಷೇತ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಸೋತಿಲ್ಲ ಎಂದರು.
ತಾಲೂಕಿನ ಕೆಲವರು ಕ್ಷೇತ್ರದಲ್ಲಿ ಜೆಡಿಎಸ್ ಮುಗಿದ ಕಥೆ ಎಂದು ಹೇಳಿಕೊಂಡು ತಿರುಗುತ್ತಿದ್ದರೂ ನಮ್ಮ ಪಕ್ಷ ಡೈರಿ ಮತ್ತು ಸಹಕಾರ ಸಂಘಗಳ ಚುನಾವಣೆಯಲ್ಲಿ ಗೆದ್ದು ತನ್ನ ಪ್ರಾಬಲ್ಯವನ್ನು ನಿರೂಪಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ವಿಪಕ್ಷದ ಶಾಸಕನಾಗಿದ್ದರೂ ನಾನು ಧೃತಿಗೆಡದೆ ಜನರ ಕೆಲಸ ಮಾಡುತ್ತಿದ್ದೇನೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿಯೂ ಕೆಡಿಪಿ ಸಭೆಗಳನ್ನು ನಡೆಸಿ ಜನರ ಸಮಸ್ಯೆಗಳ ಪರಿಹಾರಕ್ಕೆ ದಿನನಿತ್ಯ ಶ್ರಮಿಸುತ್ತಿದ್ದೇನೆ ಎಂದರು.
ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆಯಿಲ್ಲ. 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ನಾವೆಲ್ಲರೂ ಅದಕ್ಕಾಗಿ ಶ್ರಮಿಸೋಣ ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.
ಪಕ್ಷದ ಮುಖಂಡರಾದ ವಕೀಲ ಧನಂಜಯ, ತಾಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೇಗೌಡ ಸೇರಿದಂತೆ ಹಲವರು ಮಾತನಾಡಿ, ಪಕ್ಷ ಸಂಘಟನೆಯ ದೃಷ್ಟಿಯಿಂದ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಅವರನ್ನು ಬದಲಿಸಿ ಮತ್ತೊಬ್ಬ ಸಕ್ರಿಯ ಅಧ್ಯಕ್ಷರನ್ನು ನೇಮಕ ಮಾಡುವಂತೆ ಆಗ್ರಹಿಸಿದರು.
ಕ್ಷೇತ್ರದಲ್ಲಿ ಜೆಡಿಎಸ್ ವರ್ಚಸ್ಸು ಕುಂದಿಲ್ಲ. ಮಾಜಿ ಶಾಸಕ ಬಿ.ಪ್ರಕಾಶ್, ಮಾಜಿ ಸ್ಟೀಕರ್ ಕೃಷ್ಣ, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಸೇರಿದಂತೆ ಹಲವು ನಾಯಕರು ಸಂಕಷ್ಟದ ಸನ್ನಿವೇಶದಲ್ಲಿ ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿ ಪಕ್ಷ ತೊರೆದರೂ ಕ್ಷೇತ್ರದಲ್ಲಿ ಜೆಡಿಎಸ್ ಸಧೃಡವಾಗಿ ಬೆಳೆದಿದೆ ಅಂದರೆ ಅದಕ್ಕೆ ಕಾರ್ಯಕರ್ತರೇ ಕಾರಣ ಎಂದರು.
ಜೆಡಿಎಸ್ ಕಾರ್ಯಕರ್ತರ ಪಕ್ಷವೇ ಹೊರತು ನಾಯಕರ ಹಿಂಬಾಲಕರ ಪಕ್ಷವಲ್ಲ. ಪಕ್ಷದೊಳಗಿದ್ದು ಕೆಲವರು ಪಕ್ಷ ದ್ರೋಹ ಮಾಡುತ್ತಿದ್ದಾರೆ. ಒಬ್ಬ ಪಕ್ಷ ದ್ರೋಹಿಗಳು ಪಕ್ಷ ತೊರೆದರೆ ನೂರಾರು ನಿಷ್ಟಾವಂತ ಕಾರ್ಯರ್ತರು ಪಕ್ಷದಲ್ಲಿ ಹೊಸದಾಗಿ ಹುಟ್ಟಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರು ಕ್ಷೇತ್ರದ ಶಾಸಕರ ಬೆನ್ನಿಗೆ ನಿಂತು ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡೋಣ ಎಂದರು.
ಶಾಸಕರು ಎಲ್ಲರೊಂದಿಗೆ ಚರ್ಚಿಸಿ ತಾಲೂಕು ಜೆಡಿಎಸ್ ಘಟಕಕ್ಕೆ ಹೊಸ ಅಧ್ಯಕ್ಷರನ್ನು ತರಬೇಕು. ನೂತನ ಅಧ್ಯಕ್ಷರಾದವರು ಶಾಸಕರು ಮತ್ತು ಪಕ್ಷದ ಕಾರ್ಯಕರ್ತರ ನಡುವಿನ ಕೊಂಡಿಯಾಗಿ ಕೆಲಸ ಮಾಡುವಂತಿರಬೇಕೆಂದರು.
ಸಭೆಯಲ್ಲಿ ಮುಖಂಡರಾದ ರಾಜ್ಯ ಸಹಕಾರ ಮಾರಾಟ ಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್, ಅಕ್ಕಿಹೆಬ್ಬಾಳು ರಘು, ತಾಪಂ ಮಾಜಿ ಸದಸ್ಯರಾದ ಮಲ್ಲೇನಹಳ್ಳಿ ಮೋಹನ್, ವಿ.ಎಂ.ಮಹದೇವೇಗೌಡ, ತೋಂಟಪ್ಪಶೆಟ್ಟಿ, ಬಿ.ಎಂ.ಕಿರಣ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಸೇರಿದಂತೆ ಹಲವರು ಮಾತನಾಡಿದರು.
ಇದೇ ವೇಳೆ ತಾಲೂಕು ಜೆಡಿಎಸ್ ರೈತಮೋರ್ಚಾ ಘಟಕದ ಅಧ್ಯಕ್ಷರಾಗಿ ತಾಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೇಗೌಡ ಮತ್ತು ಕಾರ್ಯಾದ್ಯಕ್ಷರಾಗಿ ಬ್ಯಾಲದಕೆರೆ ನಂಜಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.