ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕು ಚಿಕ್ಕಾಂಶಿಹೊಸೂರು ಗ್ರಾಮದಲ್ಲಿ ನಡೆದ ಜ್ಯುವೆಲರಿ ಅಂಗಡಿ ಕಳ್ಳತನ ಪ್ರಕರಣ ಭೇದಿಸಿರುವ ಹಾವೇರಿ ಹಾಗೂ ಧಾರವಾಡ ಜಿಲ್ಲಾ ಪೊಲೀಸರ ಜಂಟಿ ತಂಡ, ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದು, ಆರೋಪಿಗಳಿಂದ ಸುಮಾರು ₹ 1.15 ಕೋಟಿ ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಎಸ್ಪಿ ಯಶೋದಾ ವಂಟಗೋಡಿ ಅವರು ಸುದ್ದಿಗೋಷ್ಠಿಯಲ್ಲಿ ನಡೆಸಿ ಪ್ರಕರಣದ ಮಾಹಿತಿ ನೀಡಿದರು. ಹಾನಗಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಾಂಶಿಹೊಸೂರ ಗ್ರಾಮದಲ್ಲಿ ಮೇ 16ರಂದು ಜ್ಯುವೆಲರಿ ವರ್ಕ್ಸ ಅಂಗಡಿಯಲ್ಲಿ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲು ಮತ್ತು ಆರೋಪಿತರ ಪತ್ತೆ ಕಾರ್ಯಾಚರಣೆಗಾಗಿ ಹಾನಗಲ್, ಶಿಗ್ಗಾಂವಿ ಉಪ ವಿಭಾಗದ 4 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಹಾಗೆ ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ಕಳೆದ ತಿಂಗಳು ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದ ಆರೋಪಿ ಹಾಗೂ ಮಾಲು ಪತ್ತೆಗಾಗಿ ಹುಬ್ಬಳ್ಳಿ ಗ್ರಾಮೀಣ, ನವಲಗುಂದ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪತ್ತೆ ಕಾರ್ಯದಲ್ಲಿದ್ದಾಗ ಅವರೊಂದಿಗೆ ಜಂಟಿಯಾಗಿ ಹಾವೇರಿ ಜಿಲ್ಲೆಯ ವಿಶೇಷ ಕಾರ್ಯಾಚರಣೆ ಅಪರಾಧ ತಂಡಗಳು ಕೈಜೋಡಿಸಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ತಾಲೂಕು ಬಾಲೆಹೊಸೂರಿನ ಶಿವರಾಜ ಹನುಮಂತಪ್ಪ ಮೋಡಕೇರ, ಸಿಂಧನೂರು ತಾಲೂಕು ಅಂಬಾಮಠದ ಅಶೋಕ ಅಲಿಯಾಸ್ ರಮೇಶ ಶಿವಪ್ಪ ಕೊಂಚಿಕೊರವರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿ ಇದ್ದ 310 ಗ್ರಾಂ ಬಂಗಾರದ ಆಭರಣ, 26 ಕೆ.ಜಿ ಬೆಳ್ಳಿ ಆಭರಣ ಹಾಗೂ ಒಂದು ಬುಲೆರೋ ವಾಹನ ಸೇರಿದಂತೆ ಒಟ್ಟು 1.15 ಕೋಟಿ ರು.ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 6 ಜನ ಆರೋಪಿಗಳಲ್ಲಿ ಇಬ್ಬರು ಸಿಕ್ಕಿದ್ದು, ಉಳಿದ 4 ಜನ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಮೊದಲನೇ ಆರೋಪಿ ಮೇಲೆ ಧಾರವಾಡ, ಗದಗ, ಕೊಪ್ಪಳ, ಹಾವೇರಿ ಜಿಲ್ಲೆ ಸೇರಿದಂತೆ 6 ಕಳ್ಳತನದ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಜ್ಯುವೆಲರಿ ಶಾಪ್ ಕಳ್ಳತನ ಮಾಡಿದ ಆರೋಪಿಗಳು ಮೇ 14ರಂದು ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆ ಬೀಚುಪಲ್ಲಿ ಎಂಬಲ್ಲಿ ಬೊಲೆರೋ ವಾಹನ ಕದ್ದಿದ್ದರು. ಈ ವಾಹನವನ್ನು ತೆಗೆದುಕೊಂಡು ಬಂದು ಜ್ಯುವೆಲರಿ ಶಾಪ್ ಕಳ್ಳತನ ಮಾಡಿದ್ದಾರೆ ಎಂದು ವಿವರಿಸಿದರು.ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡ ತನಿಖಾ ಕಾರ್ಯಾಚರಣೆಯಲ್ಲಿ ಶಿಗ್ಗಾಂವಿ ಡಿಎಸ್ಪಿ ಗುರುಶಾಂತಪ್ಪ ಕೆ.ವಿ., ಹಾನಗಲ್ ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್ಐ ಸಂಪತಕುಮಾರ ಆನಿಕಿವಿ, ಆಡೂರ ಪಿಎಸೈ ಶರಣಪ್ಪ ಹಂಡ್ರಗಲ್, ಬಂಕಾಪುರ ಪಿಎಸ್ಐ ಮಂಜುನಾಥ ಕುರಿ, ಶಿಗ್ಗಾಂವಿ ಯಲ್ಲಪ್ಪ ಹಿರಗಣ್ಣನವರ, ಸಿಬ್ಬಂದಿಗಳಾದ ಇಲಿಯಾಜ್ ಶೇತಸನದಿ, ಎಲ್. ಎಲ್. ಪಾಟೀಲ, ಚಿಕ್ಕಪ್ಪ ಕಡಕೋಳ, ಬಾಹುಬಲಿ ಉಪಾದ್ಯ, ಉದಯಕುಮಾರ ವಿರೋಜಿ, ಎಸ್.ಬಿ. ಕೂಸನೂರ, ನಾರಾಯಣ ಗುರ್ಕಿ, ಅನೀಲ ಮಡಿವಾಳರ, ಜಾವೇದ ಸಂಶಿ, ಮಂಜುನಾಥ ಶೀರನಹಳ್ಳಿ, ವೆಂಕಟೇಶ ಲಮಾಣಿ, ಶೇಖಪ್ಪ ಕುರುಬರ, ಪರಶುರಾಮ ಯತ್ನಳ್ಳಿ, ಬಂಗಾರಪ್ಪ ಹುರಕಡ್ಲಿ, ಮಾರುತಿ ಹಾಲಬಾವಿ, ಸತೀಶ ಮಾರಕಟ್ಟೆ, ಮಾರುತಿ ಕಲಾಲ್ ಸೇರಿದಂತೆ ಹುಬ್ಬಳ್ಳಿ ಗ್ರಾಮೀಣ ಹಾಗೂ ನವಲಗುಂದ ಪೊಲೀಸ್ ಠಾಣೆಗಳ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದರು.