ಸಾರಾಂಶ
ಹುಬ್ಬಳ್ಳಿ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಹಾದಿ, ರೌಡಿಗಳು ಪಂಜರದಿಂದ ಹೊರಬಂದ ಹಕ್ಕಿಗಳಂತಾಗಿದ್ದಾರೆ. ಅಂಥವರಿಗೆ ಕಾನೂನು, ಸರ್ಕಾರದ ಭಯವಿಲ್ಲದಂತಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಲವ್ ಜಿಹಾದ್ನಂತಹ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೇ ಕೊಲೆ, ಸುಲಿಗೆಯಂತಹ ದುಷ್ಟ ಶಕ್ತಿಗಳು ಯಾರ ಭಯವಿಲ್ಲದೇ ರಾಜಾರೋಷವಾಗಿ ಹಾರಾಡುತ್ತಿವೆ. ಇದರ ನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣ ಖಂಡನೀಯ. ಇಂತಹ ಪ್ರಕರಣಗಳಿಗೆ ಸರ್ಕಾರವೇ ಉತ್ತರ ನೀಡಬೇಕು. ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಆಡಳಿತಯಂತ್ರ ಸರಿಯಾಗಿ ಇಲ್ಲದೆ ಇರುವುದರಿಂದ ಇಂತಹ ಪ್ರಕರಣಗಳು ಸರ್ವೇ ಸಾಮಾನ್ಯವಾಗುತ್ತವೆ. ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಎಂದರು.ರಾಜ್ಯ ಸರ್ಕಾರ ಸಂಪೂರ್ಣ ಹಗರಣಗಳಲ್ಲಿ ಮುಳುಗಿದೆ. ಮುಡಾ ಹಗರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಜಾಯಿಸಿ ಹೇಳಿಕೆ ನೀಡಿದ್ದಾರೆ. ಮುಡಾ ಹಗರಣದಲ್ಲಿ ದಲಿತರ ಜಾಗ ಅಕ್ರಮ ಮಾಡಿರುವ ಕುರಿತು ಎಲ್ಲ ದಾಖಲೆಗಳಿವೆ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಲಿಲ್ಲ. ಯಾವುದೇ ತಪ್ಪು ಇಲ್ಲದಿದ್ದಲ್ಲಿ ಸಿಎಂ ಅವರು ಚರ್ಚೆಗೆ ಏಕೆ ಅವಕಾಶ ಮಾಡಿಕೊಡಲಿಲ್ಲ? ಚರ್ಚೆಗೆ ಅವಕಾಶ ಮಾಡಿದ್ದಲ್ಲಿ ಎಲ್ಲ ಸತ್ಯಾಸತ್ಯತೆ ಗೊತ್ತಾಗುತ್ತಿತ್ತು. ಮೇಲ್ನೋಟದಲ್ಲಿ ಸಿಎಂ ಅವರ ಪತ್ನಿ ಹೆಸರಲ್ಲಿ ನಡೆದಿರುವ ಅಕ್ರಮ ಸ್ಪಷ್ಟವಾಗಿದೆ. ಸರ್ಕಾರ ಎರಡು ಹಗರಣಗಳ ವಿಚಾರದಲ್ಲಿ ಬೆಲೆ ತೆರಬೇಕಾಗುತ್ತದೆ. ಈ ಹಗರಣಗಳು ಬೆಳಕಿಗೆ ಬರುವಂತೆ ಸರ್ಕಾರ ವಿಷಯಾಂತರ ಮಾಡುತ್ತಿದೆ. ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಶಾಮೀಲು ಸ್ಪಷ್ಟವಾಗಿದೆ. ಈ ಹಗರಣ ತಮ್ಮ ಬುಡಕ್ಕೆ ಬರುತ್ತದೆ ಎನ್ನುವುದು ಸಿಎಂಗೆ ಮನವರಿಕೆಯಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.