ಜೋಯಿಡಾ ದೇಶದ ಮೊದಲ ಸಾವಯವ ತಾಲೂಕು : ಚಲುವರಾಯಸ್ವಾಮಿ

| N/A | Published : Jun 18 2025, 02:33 AM IST / Updated: Jun 18 2025, 11:22 AM IST

ಸಾರಾಂಶ

ಜೋಯಿಡಾ ತಾಲೂಕಿನ ಭೂಮಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಸಾವಯವ ರೀತಿಯಲ್ಲಿ ಬಳಕೆ ಮಾಡುವ ಮೂಲಕ ದೇಶದ ಮೊದಲ‌ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

 ಕಾರವಾರ/ ಜೋಯಿಡಾ :  ಜೋಯಿಡಾ ತಾಲೂಕಿನ ಭೂಮಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಸಾವಯವ ರೀತಿಯಲ್ಲಿ ಬಳಕೆ ಮಾಡುವ ಮೂಲಕ ದೇಶದ ಮೊದಲ‌ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ ಶಿರಸಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜೋಯಿಡಾ ತಾಲೂಕನ್ನು ಸಾವಯವ ತಾಲೂಕನ್ನಾಗಿ ಪರಿವರ್ತಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜೋಯಿಡಾ ತಾಲೂಕು ಶೇಕಡ 70ರಷ್ಟು ಅರಣ್ಯದಿಂದ ಕೂಡಿದ್ದು, ಇಲ್ಲಿನ ವಾತಾವರಣ ಬೇರೆ ಕಡೆ ಎಲ್ಲೂ ನೋಡಲು ಸಾಧ್ಯವಿಲ್ಲ. ನೈಸರ್ಗಿಕವಾದ ಭೂಮಿ, ಅರಣ್ಯ ಪ್ರದೇಶ, ಪರಿಸರ ನೈಸರ್ಗಿಕ ಸಂಪತ್ತಿನಿಂದ ಕೂಡಿದ್ದು, ಇಲ್ಲಿನ ಭೂಮಿಯಲ್ಲಿ ರಾಸಾಯನಿಕವಲ್ಲದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಂಪೂರ್ಣ ಸಾವಯವ ಕೃಷಿ ತಾಲೂಕಾಗಿ ಪರಿವರ್ತಿಸಲು ರೈತರ ಸಹಕಾರವು ಅಗತ್ಯವಾಗಿದೆ ಎಂದರು.

ಹಿಂದೆ ಸಾವಯವ ಗೊಬ್ಬರಗಳನ್ನು ಬಳಸಿಕೊಂಡು ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಬಳಿಕ ರಾಸಾಯನಿಕ ಗೊಬ್ಬರಗಳಿಗೆ ಮಾರು ಹೋಗಲಾಗಿದೆ. ಇದರ ದುಷ್ಪರಿಣಾಮಗಳ ಬಗ್ಗೆ ಕೃಷಿ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ರೈತರು ರಾಸಾಯನಿಕ ಗೊಬ್ಬರ ಬಳಸುವುದನ್ನು ನಿಲ್ಲಿಸಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಸಿರಿಧ್ಯಾನದ ಬೆಳೆಗಳನ್ನು ಬೆಳೆಯುವ ಮೂಲಕ ರಾಸಾಯನಿಕದಿಂದ ಹೊರಬರಬೇಕು ಎಂದರು.

ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ, ಕಡಿಮೆ ಇಳುವರಿ, ಬೆಳೆ ನಾಶ ಮತ್ತು ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ತಪ್ಪಿಸಲು ಕೃಷಿ ಪದ್ಧತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಾವಯವ ಬದಲಾವಣೆ ಮಾಡಿಕೊಳ್ಳುವ ಅಗತ್ಯವಾಗಿದೆ ಎಂದರು.

ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರದಲ್ಲೂ ಕೃಷಿ ಹೊಂಡ ನಿರ್ಮಿಸಲು ತೀರ್ಮಾನಿಸಲಾಗಿದೆ. ಈಗಾಗಲೇ 24000 ಕೃಷಿ ಹೊಂಡ ಮಾಡಲಾಗಿದೆ. ಇನ್ನೂ ಮುಂದೆ ಹೆಚ್ಚಿನ ಕೃಷಿ ಹೊಂಡ ನಿರ್ಮಿಸಲಾಗುವುದು. ಕಬ್ಬು ಬೆಳೆಗಾರರಿಗೆ ಕಬ್ಬು ಕಟಾವು ಮಾಡಲು, ಯoತ್ರೋಪಕರಣ ಖರೀದಿಸಲು ₹50 ಲಕ್ಷ ವರೆಗೂ ಸಬ್ಸಿಡಿ ನೀಡಲಾಗುತ್ತಿದೆ ಎಂದರು.

3 ವರ್ಷದಲ್ಲಿ ಸಂಪೂರ್ಣ ಸಾವಯವ ತಾಲೂಕು

ಮುಂದಿನ 3 ವರ್ಷಗಳಲ್ಲಿ ಜೋಯಿಡಾ ತಾಲೂಕನ್ನು ಸಾವಯವ ತಾಲೂಕಾಗಿ ಪರಿವರ್ತಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಜೋಯಿಡಾದ ಶೇ.70ರಷ್ಟು ಅರಣ್ಯ ಭೂಮಿಯ ನಡುವೆ ಕೃಷಿ ಭೂಮಿ ಇದೆ. ಒಟ್ಟು 4059 ಎಕರೆ ಭತ್ತ, 121 ಎಕರೆ ಅಡಕೆ, 286 ಎಕರೆಯಷ್ಟು ಬಾಳೆ ಹಾಗೂ 81 ಎಕರೆ ಕಬ್ಬು ಬೆಳೆಯಲಾಗುತ್ತದೆ. ಉಪ ಬೆಳೆಯಾಗಿ ಕಾಳು ಮೆಣಸು, ಗೋಡಂಬಿ ಮತ್ತಿತರ ಬೆಳೆಗಳಿವೆ. ತಾಲೂಕಿನ ರೈತರು ಶೇ.80ರಷ್ಟು ರಾಸಾಯನಿಕ ಗೊಬ್ಬರ ಬದಲು ಹಸುವಿನ ಸೆಗಣಿ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಗಂಧಸಾಲೆ, ರತ್ನಚೂಡಿ, ಸುರಡಾ ಮುಂತಾದ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಇಲ್ಲಿ ವಿಶೇಷವಾಗಿ ಬೆಳೆಯಲಾಗುತ್ತದೆ.

ಬಹುತೇಕ ಸಾವಯವ ಗೊಬ್ಬರ ಬಳಕೆಯೇ ಇರುವುದರಿಂದ ಜೋಯಿಡಾವನ್ನು ಸುಲಭವಾಗಿ ಸಾವಯವ ತಾಲೂಕನ್ನಾಗಿ ಪರಿವರ್ತನೆ ಮಾಡಬಹುದು ಎಂಬ ಕಾರಣಕ್ಕೆ ಈ ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಕಾಶ ಗಾಂವಕರ್ ಹೇಳುತ್ತಾರೆ.

ಇಲ್ಲಿ ಬುಡಕಟ್ಟು ಜನಾಂಗವಾದ ಕುಣಬಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ಸಾವಯವ ಕೃಷಿಯ ಮೂಲಕ 43 ವಿವಿಧ ಪ್ರಭೇದದ ಗಡ್ಡೆ ಗೆಣಸುಗಳನ್ನು ಬೆಳೆಯುತ್ತಾರೆ. ಅದಕ್ಕೆ ಕೇಂದ್ರ ಸರ್ಕಾರದ ಪ್ರಮಾಣೀಕರಣ ಕೂಡ ಸಿಕ್ಕಿದೆ. ಜೋಯಿಡಾ ತಾಲೂಕಿನಲ್ಲಿ ಪ್ರತಿ ವರ್ಷ ಶೇ.50 ಟನ್‌ಗೂ ಹೆಚ್ಚು ಶುದ್ಧ ಜೇನುತುಪ್ಪ ಉತ್ಪಾದನೆ ಆಗುತ್ತದೆ.

Read more Articles on