ಪತ್ರಿಕೋದ್ಯಮದ ಆರಂಭ ಹಾಗೂ ಅದರ ಸವಿನೆನಪಿಗಾಗಿ ಕನ್ನಡ ಪತ್ರಿಕಾ ದಿನವನ್ನು ಆಚರಿಸಲಾಗುತ್ತಿದೆ. ಸಮಾಜಕ್ಕೆ ಪತ್ರಕರ್ತರ ಸೇವೆ ಅತ್ಯಗತ್ಯವಾಗಿದೆ. ಕನಕಪುರ ಹಾಗೂ ಹಾರೋಹಳ್ಳಿ ಪತ್ರಕರ್ತರು ನೈಜ ಸುದ್ದಿಗಳನ್ನು ನೀಡುತ್ತಿದ್ದಾರೆ. ಪತ್ರಕರ್ತರು ಮತ್ತು ಪೊಲೀಸರು ಉತ್ತಮ ಬಾಂಧವ್ಯ ಇಟ್ಟುಕೊಂಡು ಸಮಾಜದ ಉನ್ನತಿಗೆ ಕೆಲಸ ಮಾಡೋಣ.
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ಪತ್ರಕರ್ತರು ನಿರಂತರ ಜ್ಞಾನರ್ಜನೆ ಮತ್ತು ಅಧ್ಯಯನಶೀಲತೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲರು ಎಂದು ತಹಸೀಲ್ದಾರ್ ಹರ್ಷವರ್ಧನ್ ಹೇಳಿದರು.ಪಟ್ಟಣದ ಪುರಸಭೆ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ನಿಖರತೆ, ಆಳವಾದ ವಿಷಯ ಗ್ರಹಿಕೆ ಮತ್ತು ಸಮಚಿತ್ತದಿಂದ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಾಗಿದೆ ಎಂದರು. ಜವಾಬ್ದಾರಿಯುತ ಬರವಣಿಗೆ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ. ಇಲ್ಲಿನ ಪತ್ರಕರ್ತರು ಅಧಿಕಾರಿಗಳೊಂದಿಗೆ ಸಮಾಜದ ಚಿಂತನೆಗಳ ಬಗ್ಗೆ ಪರಸ್ಪರ ಚರ್ಚಿಸಿ ಸುದ್ದಿಗಳನ್ನು ಪ್ರಸಾರ ಮಾಡಬೇಕು ಎಂದು ಹೇಳಿದರು.
ವೃತ್ತ ನಿರೀಕ್ಷಕ ಕೆ.ಮಲ್ಲೇಶ್ ಮಾತನಾಡಿ, ಪತ್ರಿಕೋದ್ಯಮದ ಆರಂಭ ಹಾಗೂ ಅದರ ಸವಿನೆನಪಿಗಾಗಿ ಕನ್ನಡ ಪತ್ರಿಕಾ ದಿನವನ್ನು ಆಚರಿಸಲಾಗುತ್ತಿದೆ. ಸಮಾಜಕ್ಕೆ ಪತ್ರಕರ್ತರ ಸೇವೆ ಅತ್ಯಗತ್ಯವಾಗಿದೆ. ಕನಕಪುರ ಹಾಗೂ ಹಾರೋಹಳ್ಳಿ ಪತ್ರಕರ್ತರು ನೈಜ ಸುದ್ದಿಗಳನ್ನು ನೀಡುತ್ತಿದ್ದಾರೆ. ಪತ್ರಕರ್ತರು ಮತ್ತು ಪೊಲೀಸರು ಉತ್ತಮ ಬಾಂಧವ್ಯ ಇಟ್ಟುಕೊಂಡು ಸಮಾಜದ ಉನ್ನತಿಗೆ ಕೆಲಸ ಮಾಡೋಣ ಎಂದರು.ಮುಖಂಡರಾದ ಡಾ.ಜಿ.ಗೊವಿಂದಯ್ಯ, ಕೋಟೆ ಕುಮಾರ್, ಚಂದ್ರು, ನೀಲಿ ರಮೇಶ್ ಸೇರಿ ಹಲವರು ಮಾತನಾಡಿ, ಕರ್ನಾಟಕದ ಮೊದಲ ಪತ್ರಿಕೆ ಮಂಗಳೂರು ಸಮಾಚಾರದ ಮೂಲಕ ಪತ್ರಿಕೋದ್ಯಮವನ್ನು ಪ್ರಾರಂಭಿಸಲಾಯಿತು. ಮಾಧ್ಯಮ ಬಂಧುಗಳು ಸಮಾಜದ ನರನಾಡಿಗಳಿಗೆ ಆಮ್ಲಜನಕವಿದ್ದಂತೆ. ಸಮಾಜದ ನಾಲ್ಕನೇ ಅಂಗವಾದ ಪತ್ರಿಕಾ ರಂಗ ಸಮಾಜಕ್ಕೆ ಆಧಾರ ಸ್ಥಂಭವಾಗಿದೆ. ಪತ್ರಕರ್ತರು ನೇರ, ನಿಷ್ಠುರ ವರದಿಗಳನ್ನು ಪ್ರಕಟಿಸುವುದರಿಂದ ಸಮಾಜದಲ್ಲಿ ನೊಂದವರಿಗೆ ನ್ಯಾಯ ದೊರೆಯಲು ಸಹಾಯವಾಗುತ್ತದೆ. ಅಂತಹ ಕೆಲಸವನ್ನು ಪತ್ರಕರ್ತರು ನಿರ್ವಹಿಸುತ್ತಿರುವವರಿಗೆ ಗೌರವಿಸುವ ಮತ್ತು ಸ್ಮರಣೆ ಮಾಡುವ ಈ ದಿನವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಪುರಸಭೆ ಮುಖ್ಯಾಧಿಕಾರಿ ಶ್ವೇತಾ ಬಾಯಿ, ಸಿಡಿಪಿಒ ವೇಣುಗೋಪಾಲ್, ಹಿರಿಯ ಪತ್ರಕರ್ತ ಎಂ.ಎನ್.ಸುರೇಶ್, ಎಚ್.ಸಿ.ಪ್ರಕಾಶ್, ಶ್ರೀನಿವಾಸ್, ದೇವರಾಜು, ನಟರಾಜು, ಮುತ್ತರಾಜು, ಅಯೂಬ್ ಪಾಷ, ಮುತ್ತುರಾಜು, ಸುರೇಶ್, ಕೋಟೆ ರಾಜು, ಗಂಗಣ್ಣ, ಗೊವಿಂದ ಮತ್ತಿತರರು ಉಪಸ್ಥಿತರಿದ್ದರು.