ಸಾರಾಂಶ
ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳನ್ನು ಸೇವಾ ಹಿರಿತನ, ಪ್ರಾದೇಶಿಕ ಸಮತೋಲನ ಮತ್ತು ಅರ್ಹತೆ ಆಧಾರದಲ್ಲಿ ನೇಮಕ ಮಾಡಬೇಕು ಎಂದು ಕೋರಿ ಎ.ಪಿ.ರಂಗನಾಥ್ ಪತ್ರ ಬರೆದಿದ್ದಾರೆ.
ಬೆಂಗಳೂರು : ದೇಶದಲ್ಲಿ ಖಾಲಿಯಿರುವ ವಿವಿಧ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳನ್ನು ಸೇವಾ ಹಿರಿತನ, ಪ್ರಾದೇಶಿಕ ಸಮತೋಲನ ಮತ್ತು ಅರ್ಹತೆ ಆಧಾರದಲ್ಲಿ ನೇಮಕ ಮಾಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಪತ್ರ ಬರೆದಿದ್ದಾರೆ.
ಕರ್ನಾಟಕ ಹೈಕೋರ್ಟ್ ಹಲವು ವರ್ಷಗಳಿಂದ ಸಮರ್ಥ ಮತ್ತು ಅನುಭವಿ ನ್ಯಾಯಮೂರ್ತಿಗಳನ್ನು ಸೃಷ್ಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಇತರೆ ರಾಜ್ಯಗಳ ಹೈಕೋರ್ಟ್ಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇಮಕ ಮಾಡುವಾಗ ಕರ್ನಾಟಕದ ನ್ಯಾಯಾಧೀಶರನ್ನು ಸತತವಾಗಿ ಕಡೆಗಣಿಸಲಾಗುತ್ತಿದೆ, ಕರ್ನಾಟಕದ ನ್ಯಾಯಮೂರ್ತಿಗಳು ಸೇವಾ ಹಿರಿತನ ಹಾಗೂ ಅತ್ಯುತ್ತಮ ಅರ್ಹತೆ ಹೊಂದಿದ್ದರೂ ಸೂಕ್ತ ಸ್ಥಾನಮಾನ ಹಾಗೂ ಅವಕಾಶ ನೀಡಲಾಗುತ್ತಿಲ್ಲ. ಇದು ನ್ಯಾಯಾಂಗದ ಉನ್ನತ ಶ್ರೇಣಿ ಹುದ್ದೆಗಳ ನೇಮಕಾತಿಯಲ್ಲಿ ವೈವಿಧ್ಯತೆ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಕೊರತೆ ಇರುವುದನ್ನು ಸೂಚಿಸುತ್ತದೆ ಎಂದು ಪತ್ರದಲ್ಲಿ ರಂಗನಾಥ್ ತಿಳಿಸಿದ್ದಾರೆ.
ಸೇವಾ ಹಿರಿತನ, ಅರ್ಹತೆ ಮತ್ತು ಪ್ರಾದೇಶಿಕ ಸಮತೋಲನವನ್ನು ಪರಿಗಣಿಸಿ ಖಾಲಿಯಿರುವ ದೇಶದ ಇತರೆ ರಾಜ್ಯಗಳ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಬೇಕು ಎಂದು ಅವರು ಕೋರಿದ್ದಾರೆ.