ಕೈಕೊಟ್ಟ ಬಿಎಸ್‌ಎನ್‌ಎಲ್ ಸರ್ವರ್; ಗ್ರಾಹಕರ ಪರದಾಟ

| Published : Sep 25 2024, 12:47 AM IST

ಸಾರಾಂಶ

ಸ್ಥಳೀಯ ಸಿಬ್ಬಂದಿ ಹಾಗೂ ಶಾಖಾ ವ್ಯವಸ್ಥಾಪಕರು ಸರಿಯಾಗಿ ಸ್ಪಂದಿಸುತ್ತಿಲ್ಲ, ಬಿಲ್ ಸರಿಯಾಗಿ ತುಂಬಿದ್ದೀರಾ ಎಂದು ಗ್ರಾಹಕರನ್ನು ಪ್ರಶ್ನಿಸುವುದಲ್ಲದೆ, ಹುಬ್ಬಳ್ಳಿಯಿಂದ ಅಧಿಕಾರಿಗಳು ಬರಬೇಕು ಅವರು ಬಂದು ಸರಿ ಮಾಡುತ್ತಾರೆ ಎಂದು ಹಾರಿಕೈ ಉತ್ತರ

ಗಜೇಂದ್ರಗಡ: ಪಟ್ಟಣದಲ್ಲಿ ಸೋಮವಾರ ಸಂಜೆ ೫.೩೦ ರಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕಡಿತಗೊಂಡ ಪರಿಣಾಮ ಗ್ರಾಹಕರು ಪರದಾಡಿ, ಸ್ಥಳೀಯ ಶಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆಯಿತು.

ಜಿಲ್ಲೆಯ ವಾಣಿಜ್ಯ ಕೇಂದ್ರವಾಗಿರುವ ಪಟ್ಟಣದಲ್ಲಿ ಸೋಮವಾರ ಸಂಜೆಯಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕಡಿತಗೊಂಡ ಪರಿಣಾಮ ಗ್ರಾಹಕರು ಕರೆ ಹಾಗೂ ಎಸ್‌ಎಂಎಸ್ ಹಾಗೂ ಇಂಟರ್‌ನೆಟ್ ಸೇವೆಯಿಂದ ವಂಚಿತವಾಗಿದ್ದಾರೆ. ಏಕಾಏಕಿ ನೆಟ್‌ವರ್ಕ್ ಕಡಿತದಿಂದ ಗಲಿಬಲಿಗೊಂಡ ಗ್ರಾಹಕರು ಮಂಗಳವಾರ ಬೆಳಗ್ಗೆಯಿಂದಲೇ ಪಟ್ಟಣದ ಜೋಡು ರಸ್ತೆಯಲ್ಲಿನ ಬಿಎಸ್‌ಎನ್‌ಎಲ್ ಕಚೇರಿಗೆ ಆಗಮಿಸಿ ಸಮಸ್ಯೆ ಕುರಿತು ವಿಚಾರಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯ ಸಿಬ್ಬಂದಿ ಹಾಗೂ ಶಾಖಾ ವ್ಯವಸ್ಥಾಪಕರು ಸರಿಯಾಗಿ ಸ್ಪಂದಿಸುತ್ತಿಲ್ಲ, ಬಿಲ್ ಸರಿಯಾಗಿ ತುಂಬಿದ್ದೀರಾ ಎಂದು ಗ್ರಾಹಕರನ್ನು ಪ್ರಶ್ನಿಸುವುದಲ್ಲದೆ, ಹುಬ್ಬಳ್ಳಿಯಿಂದ ಅಧಿಕಾರಿಗಳು ಬರಬೇಕು ಅವರು ಬಂದು ಸರಿ ಮಾಡುತ್ತಾರೆ ಎಂದು ಹಾರಿಕೈ ಉತ್ತರ ಆರೋಪಿಸಿದರು.

ಪಟ್ಟಣದಲ್ಲಿ ನೂರಾರು ಗ್ರಾಹಕರು ಅದರಲ್ಲೂ ಗಣ್ಯ ವರ್ತಕರು, ಇಂಟರ್‌ನೆಟ್ ಸೆಂಟರ್ ಸೇರಿ ನೂರಾರು ಗ್ರಾಹಕರು ಬಿಎಸ್‌ಎನ್‌ಎಲ್ ಸಂಖ್ಯೆಯನ್ನೇ ಬಳಸುತ್ತಿದ್ದಾರೆ.ಆದರೆ ಕಳೆದ ೧೨ ಗಂಟೆಗಳು ನೆಟ್‌ವರ್ಕ್ ಸಮಸ್ಯೆಯಾದರೂ ಸಹ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಮುಖ್ಯ ಸಂಖ್ಯೆಯಾಗಿ ಕಚೇರಿಯಲ್ಲಿನ ಮೇಲಾಧಿಕಾರಿಗಳ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿದರೆ ಒಬ್ಬರು ೨೦೧೭ರಲ್ಲೆ ನಿವೃತ್ತಿ ಆಗಿದ್ದಾರೆ ಎಂದರೆ, ಮತ್ತೊಂದು ದೂರವಾಣಿ ಸಂಖ್ಯೆ ತೆಲಗು ಭಾಷೆಯಲ್ಲಿ ಗ್ರಾಹಕರು ನೆಟ್‌ವರ್ಕ್ ಸ್ಥಳದಿಂದ ದೂರವಿದ್ದಾರೆ ಎನ್ನುತ್ತಿದೆ. ಮತ್ತೊಂದು ದೂರವಾಣಿ ಸಂಖ್ಯೆ ಬಳಸುತ್ತಿದ್ದವರು ಕರೆ ಸ್ವೀಕರಿಸಲಿಲ್ಲ ಎಂದು ಹೇಳುತ್ತಿದೆ. ಅಲ್ಲದೆ ಪಟ್ಟಣದಲ್ಲಿ ಬಿಎಸ್‌ಎನ್‌ಎಲ್ ಕಚೇರಿಗೆ ದೂರು ನೀಡಲು ಒಂದು ಸಂಖ್ಯೆಯೂ ಸಹ ಇಲ್ಲ.ಪರಿಣಾಮ ಖಾಸಗಿ ನೆಟವರ್ಕಗಳ ಸೇವೆಗೆ ಪೈಪೋಟಿ ನೀಡಬೇಕಾದ ದಿನಗಳಲ್ಲಿ ಬಿಎಸ್‌ಎನ್‌ಎಲ್ ಈ ರೀತಿಯಾಗಿ ಸೇವೆ ನೀಡುತ್ತಿರುವುದು ವಿಪರ್ಯಾಸ. ನಮ್ಮ ನೆಟವರ್ಕ್ ಎಂದು ನಾವು ಬಿಎಸ್‌ಎನ್‌ಎಲ್ ಬಳಸುತ್ತಿದ್ದೇವೆ. ಆದರೆ ಸೇವೆ ನೀಡುತ್ತಿರುವ ಸ್ಥಳೀಯ ಶಾಖೆಯವರು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಡಿಸಿದರು.

ಪಟ್ಟಣದಲ್ಲಿ ಬಿಎಸ್‌ಎನ್‌ಎಲ್ ಸರ್ವರ್ ಸಮಸ್ಯೆ ಕುರಿತು ಕಚೇರಿಗೆ ಬಂದ ಗದಗ ಡಿವಿಜನಲ್ ಅಭಿಯಂತರ ಎಚ್.ಎಫ್. ಶಿರಹಟ್ಟಿ ಮಾತನಾಡಿ, ನಿನ್ನೆ ರಾತ್ರಿ ೧೨ ಗಂಟೆವರೆಗೆ ನೆಟವರ್ಕ್ ಸಮಸ್ಯೆ ಕುರಿತು ಪರಿಶೀಲಿಸಲಾಗಿದೆ, ಬೆಳಗ್ಗೆ ೬ ಗಂಟೆಗೆ ನಮ್ಮ ಸಿಬ್ಬಂದಿ ಕಳುಹಿಸಿದ್ದು ಮೇಜರ್ ಇಶ್ಯೂ ಇದ್ದರಿಂದ ಹುಬ್ಬಳ್ಳಿ, ಗದಗದಿಂದ ಟಿಮ್ ಬರುತ್ತಿದ್ದಾರೆ. ಇನ್ನೆರಡೂ ತಾಸುಗಳಲ್ಲಿ ಸಮಸ್ಯೆ ಪರಿಹಾರ ಕಂಡುಕೊಳ್ಳಲಾಗುವುದು ಎಂದ ಬಳಿಕ ಗ್ರಾಹಕರು ಬಿಎಸ್‌ಎನ್‌ಎಲ್ ಕಚೇರಿಯಿಂದ ಹೊರ ನಡೆದರು.

ಸರ್ಕಾರಿ ಆಸ್ಪತ್ರೆಯ ಸುರಕ್ಷಾ ಸಮಿತಿ ಸದಸ್ಯ ಶರಣಪ್ಪ ಚಳಗೇರಿ, ಪುರಸಭೆ ಮಾಜಿ ಸದಸ್ಯ ವಿಜಯ ರಾಯಬಾಗಿ, ಹನಮಂತಸಾ ಮೇಘರಾಜ, ಶಾಮೀದ್ ದಿಂಡವಾಡ, ನಿಂಗಪ್ಪ ಮಾಸ್ತಿ, ಅರಿಹಂತ ವಂದಕುದರಿ, ಅರುಣ ನೆಲ್ಲರು ಸೇರಿ ಇತರರು ಇದ್ದರು.