ಸಾರಾಂಶ
ನಾಯಿ ಕಚ್ಚಿ ತೀವ್ರ ಗಾಯಗಳನ್ನು ಅನುಭವಿಸಿ ಚಿಕಿತ್ಸೆಗೆಂದು ಸೇಡಂನಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಧಾವಿಸಿ ಬಂದಿರುವ 15 ಮಕ್ಕಳು, ವಯೋವೃದ್ಧರು ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ಸಿಗದೆ ಪರದಾಡಿದ ಪ್ರಸಂಗ ಶನಿವಾರ ನಡೆದಿದೆ.
ಕಲಬುರಗಿ : ನಾಯಿ ಕಚ್ಚಿ ತೀವ್ರ ಗಾಯಗಳನ್ನು ಅನುಭವಿಸಿ ಚಿಕಿತ್ಸೆಗೆಂದು ಸೇಡಂನಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಧಾವಿಸಿ ಬಂದಿರುವ 15 ಮಕ್ಕಳು, ವಯೋವೃದ್ಧರು ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ಸಿಗದೆ ಪರದಾಡಿದ ಪ್ರಸಂಗ ಶನಿವಾರ ನಡೆದಿದೆ.
ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ನಾಯಿಯೊಂದು ಸೇಡಂನಲ್ಲಿ 15ಕ್ಕೂ ಹೆಚ್ಚು ಮಕ್ಕಳು, ವಯೋವೃದ್ಧರ ಮೇಲೆ ದಾಳಿ ಮಾಡಿ ರಕ್ತಗಾಯ ಮಾಡಿತ್ತು. ಇದರಿಂದ ಹೈರಾಣಾಗಿದ್ದ ಜನತೆ ತಕ್ಷಣ ಸೇಡಂ ಆಸ್ಪತ್ರೆಗೆ ಧಾವಿಸಿದಾಗ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಹಾಗೂ ರೇಬೀಸ್ ಇಂಜೆಕ್ಷನ್ಗಾಗಿ ಜಿಲ್ಲಾಸ್ಪತ್ರೆ ಜಿಮ್ಸ್ಗೆ ಬಂದಿದ್ದರು.
ನಾಯಿ ಕಡಿತಕ್ಕಿರುವ ರೇಬೀಸ್ ಇಂಜೆಕ್ಷನ್ ಮಧ್ಯಾಹ್ನ 1 ಗಂಟೆಯ ನಂತರ ಇಲ್ಲಿ ಸಿಗೋದಿಲ್ಲ. ಸಮಯ ಮೀರಿದೆ. ನಾಳೆವರೆಗೆ ಕಾಯಿರಿ ಎಂದು ಜಿಮ್ಸ್ ಸಿಬ್ಬಂದಿ ತಿಳಿಸಿದರು.
ಇದರಿಂದ ಬೇಸತ್ತ ಸೇಡಂನ ನಾಯಿ ಕಡಿತಕ್ಕೊಳಗಾದ ಮಕ್ಕಳ ಪೋಷಕರಲ್ಲಿ ಕೆಲವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಕರೆ ಮಾಡಿದರು. ಸಚಿವರು ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ, ತಕ್ಷಣವೇ ಇಂಜೆಕ್ಷನ್ ಕೊಟ್ಟು ಚಿಕಿತ್ಸೆ ನೀಡುವಂತೆ ಸೂಚಿಸಿದರು. ಸಚಿವರಿಂದ ಸೂಚನೆ ಬಂದ ನಂತರ ಜಿಮ್ಸ್ ಆಸ್ಪತ್ರೆ ವೈದ್ಯರು ಮಕ್ಕಳಿಗೆ ಇಂಜೆಕ್ಷನ್ ನೀಡಿದ್ದಾರೆ.