ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಟಿ.ಎಂ.ಹೊಸೂರು ಬಳಿಯ ಕಾಳೇನಹಳ್ಳಿ ಎಲ್ಲೆಯಲ್ಲಿ ಕೆರೆ ಒತ್ತುವರಿಯನ್ನು ತೆರವು ಮಾಡುವಂತೆ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದರು.ಎಪಿಎಂಸಿ ಮಾಜಿ ನಿರ್ದೇಶಕ ಜಕ್ಕನಹಳ್ಳಿ ಬಾಲಕೃಷ್ಣ ಹಾಗೂ ರೈತ ಮುಖಂಡ ಕಾಳೇನಹಳ್ಳಿ ಬಿ.ರಮೇಶ್ ನೇತೃತ್ವದಲ್ಲಿ ಟಿ.ಎಂ.ಹೊಸೂರು ಗ್ರಾಪಂ ಪಿಡಿಒ ಅವರಿಗೆ ದೂರು ಸಲ್ಲಿಸಿದರು.
ಗ್ರಾಮಸ್ಥರ ದೂರಿನ ಮೇರೆಗೆ ಗ್ರಾಪಂ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಹಿತ ಸಿಬ್ಬಂದಿ ಆಗಮಿಸಿ ಕೆರೆ ಒತ್ತುವರಿ ಆಗಿರುವ ಬಗ್ಗೆ ಪರಿಶೀಲಿಸಿದರು.ಪರಿಶೀಲನೆ ವೇಳೆ ಗ್ರಾಮಸ್ಥರು ಕಾಳೇನಹಳ್ಳಿ ಎಲ್ಲೆಯ ಮೂಲ ಸರ್ವೇ ನಂ.21ರಲ್ಲಿ ಹಳೆ ಕೆರೆ 7 ಎಕರೆ 20 ಗುಂಟೆ ಹಾಗೂ ಹೊಸಕೆರೆ 7.20 ಗುಂಟೆ ವಿಸ್ತಾರವನ್ನು ಹೊಂದಿದ್ದು, ಈ ಕೆರೆಯ ಸುತ್ತಲೂ ಅಕ್ರಮ ಗಣಿ ಮಾಡುವರು ಒತ್ತುವರಿ ಮಾಡಿಕೊಂಡಿದ್ದು, ಉಳಿದ ಕೆರೆ ಜಾಗವನ್ನು ಗೋಮಾಳ ಎಂದು ನಮೂದು ಮಾಡಿ, ಇದೀಗ ಕೆರೆ ಇಲ್ಲದಂತಾಗಿದೆ ಎಂದು ದೂರಿದರು.
ಗ್ರಾಮದ ಬಳಿ ಇದ್ದ ಕೆರೆಯಿಂದ ಈ ಹಿಂದೆ ನೂರಾರು ಎಕರೆ ಜಮೀನುಗಳಿಗೆ ಈ ನೀರು ಬಳಕೆಯಾಗುತ್ತಿತ್ತು. ಸುತ್ತಮುತ್ತಲ ಗ್ರಾಮಗಳ ಜಮೀನುಗಳಿಗೆ ಈ ಕೆರೆ ನೀರೆ ಅವಶ್ಯಕವಾಗಿತ್ತು. ಇದರಿಂದ ಪ್ರಾಣಿ ಪಕ್ಷಿಗಳಿಗೂ ನೀರುಣಿಸುತ್ತಿದ್ದ ಕೆರೆ ಇದೀಗ ನೀರಿಲ್ಲದೆ ಬಂಜರು ಭೂಮಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜೀರ್ಣೋದ್ದಾರಕ್ಕೆ ಒತ್ತಾಯ:
ಅಕ್ಕ ಪಕ್ಕದ ಗ್ರಾಮಗಳ ರಾಸುಗಳಿಗೆ ನೀರು ಕುಡಿಯಲು ಅನುಕೂಲವಾಗುತ್ತದೆ ಜೊತೆಗೆ ಮಳೆ ನೀರು ಬಿದ್ದರೆ ಕೆರೆ ತುಂಬಿ ಕೆರೆಯ ಅಕ್ಕ-ಪಕ್ಕದ ಜಮೀನುಗಳಿಗೆ ನೀರು ನೀಡಿ ಕೃಷಿ ಚಟುವಟಿಕೆ ಮಾಡಬಹುದು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಪರಿಶೀಲನೆ ನಡೆಸಿ ಇಲ್ಲಿ ಕೆರೆ ಇರುವುದು ಖಚಿತವಾಗಿದೆ. ಕೆರೆ ಸುತ್ತಲೂ ಒತ್ತುವರಿಯಾಗಿರುವುದು ಸಹ ಕಂಡು ಬಂದಿದೆ. ಶೀಘ್ರ ಒತ್ತುವರಿ ತೆರವು ಮಾಡಿ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶುಭಾಷ್, ರೈತ ಸಂಘದ ಮಾದೇವಣ್ಣ, ಶಿವಕುಮಾರ್, ಪಾಪಣ್ಣ, ಪ್ರಭುಸ್ವಾಮಿ, ರಾಮುಸ್ವಾಮಿ, ಟಿ.ಎಂ ಹೊಸೂರು ಶರತ್ ಕುಮಾರ್, ಯಜಮಾನ್ ತಿಮ್ಮೆಗೌಡ, ರಮೇಶ್, ಕುಮಾರ್ ಸೇರಿದಂತೆ ಕಾಳೆನಹಳ್ಳಿ ಗ್ರಾಮಸ್ಥರು ಇದ್ದರು.