ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರ ವರ್ತನೆ ಖಂಡಿಸಿ ನಗರದಲ್ಲಿ ಗುರುವಾರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಅಲ್ಲದೆ ವಾಲ್ಮೀಕಿ, ಮುಡಾ ಹಗರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಹಾಗೂ ಇದಕ್ಕೆ ಕಾರಣಿಕರ್ತರಾದ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೂ ಒತ್ತಾಯಿಸಿದರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು, ಮುಖಂಡರು ಮನಸಿಗೆ ಬಂದಂತೆ ಅವಹೇಳನಕಾರಿಯಾಗಿ ಹಾಗೂ ಏಕವಚನ ಪ್ರಯೋಗ ಮಾಡುವ ಮೂಲಕ ಸಂವಿಧಾನ ಹುದ್ದೆಯಲ್ಲಿರುವ ಗೌರವಾನ್ವಿತ ರಾಜ್ಯಪಾಲರನ್ನು ನಿಂದಿಸಿರುವುದು ಖಂಡನೀಯ.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎದುರಲ್ಲೇ ಈ ರೀತಿಯ ಹೀನ ವರ್ತನೆ ನಡೆದರೂ, ಅವರ ವಿರುದ್ಧ ಕ್ರಮಗೊಂಡಿಲ್ಲ. ಇದರಿಂದ ತಿಳಿಯುತ್ತದೆ ನಿಜವಾದ ದಲಿತ ವಿರೋಧಿಗಳು, ಸಂವಿಧಾನ ವಿರೋಧಿಗಳು ಯಾರು ಎನ್ನುವುದು. ಕೂಡಲೇ ಅವಮಾನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಎಸ್.ಟಿ ಸಮುದಾಯದ ಜನರಿಗೆ ಕಲ್ಪಿಸಬೇಕಾದ ₹187 ಕೋಟಿ ಹಣವನ್ನು, ಭ್ರಷ್ಟ ಕಾಂಗ್ರೆಸ್ ಸರ್ಕಾರ ಅನೇಕ ನಕಲಿ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ಕೊಳ್ಳೆ ಹೊಡೆದಿದೆ. ಆ ಸಮುದಾಯಕ್ಕೆ ಅನ್ಯಾಯದ ಜೊತೆಗೆ ಅಮಾಯಕ ನೌಕರನ ಸಾವಿಗೂ ಕಾರಣವಾಗಿದೆ. ಅಲ್ಲದೆ, ದಲಿತರು, ಹಿಂದುಳಿದವರ ಪರ ಎಂದು ಭಾಷಣ ಮಾಡಿ ಅಧಿಕಾರಕ್ಕೆ ಬಂದು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಿಗಬೇಕಾದ ಎಸ್ಸಿಪಿ, ಟಿಎಸ್ಪಿ ₹25 ಸಾವಿರ ಕೋಟಿ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಬಳಸಿಕೊಳ್ಳುವ ಮೂಲಕ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ಇನ್ನು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಸಿಲುಕಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಈ ಮೂಲಕ ಸಿದ್ದರಾಮಯ್ಯನವರ ಅಸಲಿ ಮುಖ ಹೊರ ಬಂದಿದೆ. ಹೀಗಾಗಿ ಕೂಡಲೇ ಅವರು ರಾಜೀನಾಮೆ ನೀಡಿ, ತನಿಖೆಗೆ ಸಹಕಾರ ನೀಡಬೇಕು. ರಾಜ್ಯಪಾಲರಿಗೆ ಗೌರವ ನೀಡುವ ಪದ್ಧತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡರಾದ ವಿಜುಗೌಡ ಪಾಟೀಲ, ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ವಾಲ್ಮೀಕಿ, ಮುಡಾ ಹಗರಣಗಳ ಬಗ್ಗೆ ದಾಖಲೆಗಳು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿದ್ದರೂ, ಮುಖಮಂತ್ರಿಗಳು ಸೇರಿ ಇಡೀ ಸರ್ಕಾರ ಏನು ಮಾಡೇ ಇಲ್ಲವೆಂದು ಭಂಡತನ ಪ್ರದರ್ಶಿಸುವುದು ಸರಿಯಲ್ಲ. ಇಡೀ ರಾಜ್ಯಕ್ಕೆ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದರು.ಮುಖಂಡರಾದ ರಮೇಶ ಭೂಸನೂರ, ಅರುಣ ಶಹಾಪುರ, ಈರಣ್ಣ ಪಟ್ಟಣಶೆಟ್ಟಿ, ಪ್ರಭುಗೌಡ ಅಸ್ಕೆ, ಗುರುಲಿಂಗಪ್ಪ ಅಂಗಡಿ, ಉಮೇಶ ಕೊಳಕೂರ, ಕಾಸುಗೌಡ ಬಿರಾದಾರ, ಮಳುಗೌಡ ಬಿರಾದಾರ, ಮಹೇಂದ್ರ ನಾಯಕ, ಶಂಕರ ಹೂಗಾರ, ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟ, ಸ್ವಪ್ನಾ ಕಣಮುಚನಾಳ, ಕುಮಾರ ಗಡಗಿ, ಮಹೇಶ ಒಡೆಯರ, ವಿಜಯ ಜೋಶಿ, ಪಾಂಡು ಸಾಹುಕಾರ ದೊಡಮನಿ, ರಾಹುಲ್ ಜಾಧವ, ಚಂದ್ರು ಚೌಧರಿ, ಸಂಜಯ ಪಾಟೀಲ ಕನಮಡಿ, ಕೃಷ್ಣಾ ಗುನಾಳಕರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.