ಸಾರಾಂಶ
ಕನಕದಾಸರನ್ನು ದೈವತ್ವಕ್ಕೆ ಹೋಲಿಸಿ ಜನರಿಂದ ದೂರ ಇಡಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಬಾರದು. ಸಣ್ಣ ಕೀರ್ತನೆಗಳ ಮೂಲಕ ಇಡೀ ಭಾರತದ ಸಂಪ್ರದಾಯವನ್ನು ಕನಕದಾಸರು ಕಟ್ಟಿಕೊಟ್ಟಿದ್ದಾರೆ. ಪುರುಷ ಪ್ರಧಾನ ಸಮಾಜವನ್ನು ಅವರು ಟೀಕಿಸಿದ್ದಾರೆ.
ಧಾರವಾಡ:
16ನೇ ಶತಮಾನದಲ್ಲಿಯೇ ಸಮಾನತೆಯ ಮಂತ್ರ ಸಾರಿದವರು ಕನಕದಾಸರು. ಧರ್ಮ-ಜಾತಿಗಳ ಮಧ್ಯೆ ಸ್ಪರ್ಧೆ ಏರ್ಪಡದೇ ಸಾಮರಸ್ಯದಿಂದ ಬಾಳಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.ಕವಿವಿ ಕನಕ ಅಧ್ಯಯನ ಪೀಠದಲ್ಲಿ ಕನಕ ಜಯಂತಿ ಅಂಗವಾಗಿ ಶನಿವಾರ ನಡೆದ ‘ಕನಕದಾಸರ ತಾತ್ವಿಕತೆ: ಆಧುನಿಕ ಸಮಾಜದ ಪರಿಕಲ್ಪನೆ’ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಅವರು, ಯುವಪೀಳಿಗೆ ಕನಕದಾಸರ ಕೀರ್ತನೆ ಓದಿ ತಿಳಿದುಕೊಳ್ಳಬೇಕು. ಬಸವ, ಬುದ್ಧ, ಅಂಬೇಡ್ಕರ್ ವಿಚಾರಗಳನ್ನು ತಮ್ಮ ಸಾಹಿತ್ಯದಲ್ಲಿ ಮನುಕುಲದ ಉದ್ಧಾರಕ್ಕೆ ಕನಕದಾಸರು ತಿಳಿಸಿ ಹೇಳಿದ್ದಾರೆ ಎಂದರು.
ಆಶಯ ಭಾಷಣ ಮಾಡಿದ ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ, ಕನಕದಾಸರನ್ನು ದೈವತ್ವಕ್ಕೆ ಹೋಲಿಸಿ ಜನರಿಂದ ದೂರ ಇಡಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಬಾರದು. ಸಣ್ಣ ಕೀರ್ತನೆಗಳ ಮೂಲಕ ಇಡೀ ಭಾರತದ ಸಂಪ್ರದಾಯವನ್ನು ಕನಕದಾಸರು ಕಟ್ಟಿಕೊಟ್ಟಿದ್ದಾರೆ. ಪುರುಷ ಪ್ರಧಾನ ಸಮಾಜವನ್ನು ಅವರು ಟೀಕಿಸಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ. ಬಿ.ಎಂ. ಪಾಟೀಲ ಮಾತನಾಡಿದರು. ಇದೇ ವೇಳೆ ಡಾ. ಶಶಿಧರ ಜಿ. ವೈದ್ಯ ಅವರ ಕನಕದಾಸ: ಎ ವಿಜನರಿ ಆಫ್ ಹಾರ್ಮನಿ’ ಇಂಗ್ಲಿಷ್ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಮಾಜಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ರವಿ ಮಾಳಿಗೇರ, ಡಿ.ಡಿ. ಮಾಳಗಿ, ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಸಂಯೋಜಕ ಡಾ. ಹನಮಗೌಡ ಸಿ., ಪ್ರೊ. ವೇದಮೂರ್ತಿ ಎ.ಬಿ., ಡಾ. ಅನಿತಾ ಹಾಲಮತ, ಪ್ರೊ. ಮೃತ್ಯುಂಜಯ ಅಗಡಿ ಸೇರಿದಂತೆ ಇತರರು ಇದ್ದರು.