ಸಾರಾಂಶ
ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾದ ಡಾ.ಅಶೋಕಕುಮಾರ ಜಾಧವ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಕ್ರೀಡಾಕ್ಷೇತ್ರದಲ್ಲಿ ಮಾರ್ಗದರ್ಶನ ನೀಡುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಮಿಂಚುವಂತೆ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಭಾಗದ ಸರ್ಕಾರಿ ಕಾಲೇಜುಗಳ ಅಧ್ಯಕ್ಷರ ಸಂಘದ ಅಧ್ಯಕ್ಷರು ಹಾಗೂ ಬಸವನಬಾಗೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಬಿ.ಹೊಸಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾದ ಡಾ.ಅಶೋಕಕುಮಾರ ಜಾಧವ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಕ್ರೀಡಾಕ್ಷೇತ್ರದಲ್ಲಿ ಮಾರ್ಗದರ್ಶನ ನೀಡುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಮಿಂಚುವಂತೆ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಭಾಗದ ಸರ್ಕಾರಿ ಕಾಲೇಜುಗಳ ಅಧ್ಯಕ್ಷರ ಸಂಘದ ಅಧ್ಯಕ್ಷರು ಹಾಗೂ ಬಸವನಬಾಗೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಬಿ.ಹೊಸಮನಿ ಹೇಳಿದರು.ಸುವರ್ಣ ನ್ಯೂಸ್-ಕನ್ನಡಪ್ರಭ ದಿನಪತ್ರಿಕೆ ನೇತೃತ್ವದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸುವರ್ಣ ಕನ್ನಡಿಗ ಪ್ರಶಸ್ತಿಗೆ ಭಾಜನರಾದ ಡಾ.ಅಶೋಕಕುಮಾರ ಜಾಧವ ಅವರನ್ನು ಸನ್ಮಾನಿಸಿ ಅಭಿನಂದಿಸಿದ ಬಳಿಕ ಮಾತನಾಡಿದ ಅವರು, ಕ್ರೀಡಾಕ್ಷೇತ್ರದಲ್ಲಿ ಈ ಭಾಗದಲ್ಲಿ ಅವರು ಕೈಗೊಂಡ ಕಾರ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ ಶ್ಲಾಘನೀಯವಾಗಿದೆ. ಅತ್ಯಂತ ಸರಳ, ಸಜ್ಜನ ಸ್ವಭಾವದವರಾಗಿ ಸಂಘ, ಸಂಸ್ಥೆಗಳೊಂದಿಗೆ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿದ್ದ ಜಾಧವ್ ಅವರು ಕೆಲವೇ ತಿಂಗಳಲ್ಲಿ ತಮ್ಮ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದು, ಇಂತಹ ಸಂದರ್ಭದಲ್ಲಿ ಸಂಸ್ಥೆಯವರು ಗುರುತಿಸಿ ಪ್ರಶಸ್ತಿ ನೀಡಿದ್ದು ಒಳ್ಳೆಯ ಕಾರ್ಯವಾಗಿದೆ. ಇನ್ನು ಹೆಚ್ಚಿನ ಮಾರ್ಗದರ್ಶನ ಈ ಭಾಗದ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.
ಸಂದರ್ಭದಲ್ಲಿ ಡಾ.ಅಶೋಕಕುಮಾರ ಜಾಧವ ಅವರ ಧರ್ಮಪತ್ನಿ ಭುವನೇಶ್ವರಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗೊಳಸಂಗಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಸ್.ರಾಜಮಾನ್ಯ, ಮಮದಾಪೂರ ಕಾಲೇಜಿನ ಪ್ರಾಚಾರ್ಯ ಡಾ.ಅಮೀತ ಮಿರ್ಜಿ, ಡಾ.ಎಚ್.ಎಮ್.ನಾಟೀಕಾರ, ದೈಹಿಕ ನಿರ್ದೇಶಕರಾದ ರೇಣುಕಾ ಅಂಬಲಿ ಸೇರಿದಂತೆ ಹಲವಾರು ಜನ ಉಪನ್ಯಾಸಕರು ಉಪಸ್ಥಿತರಿದ್ದರು.