ಕಿಕ್ಕೇರಿ:

ರೈತಾಪಿ ವರ್ಗದ ಬಲುದೊಡ್ಡ ಆರಾಧನೆಯ ಕನ್ನಂಬಾಡಮ್ಮನವರ ಹಬ್ಬವನ್ನು ಹೋಬಳಿಯ ಗೂಡೇಹೊಸಹಳ್ಳಿ ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದರು.

ಹಬ್ಬಕ್ಕೂ ಮುನ್ನ ಊರಿನ ಪ್ರಮುಖರು ಹಬ್ಬದ ರೂಪುರೇಷೆ ಕುರಿತು ಚರ್ಚಿಸಿದ ನಂತರ ಗ್ರಾಮದಲ್ಲಿ ದೇವಿ ಪೂಜೆ, ಹಬ್ಬಆಚರಣೆಗಾಗಿ ಕಾಣಿಕೆ ರೀತಿಯ ಮುಡಿಪಿನ ಹಣ ಸಂಗ್ರಹಿಸಿದರು. ಮುಡಿಪು ಎತ್ತಿದ ಹಣದಲ್ಲಿ ಮುಖಂಡರು ಕನ್ನಾಂಬಾಡಿ ಗ್ರಾಮಕ್ಕೆ ತೆರಳಿದರು. ದೇವಿಗೆ ಬಾಗಿನ, ಹಣ್ಣು, ಕಾಯಿ, ಬಳೆ, ಅಕ್ಕಿಯ ಮಡಿಲಕ್ಕಿ ಸಮರ್ಪಿಸಿದರು. ದೇಗುಲದಲ್ಲಿ ಅರ್ಚಕರು ನೀಡಿದ ಪ್ರಸಾದವನ್ನು ಶ್ರದ್ಧಾಭಕ್ತಿಯಿಂದ ಗ್ರಾಮಕ್ಕೆ ತಂದರು.

ಗ್ರಾಮದಲ್ಲಿ ಹಸಿರು ಚಪ್ಪರ ನಿರ್ಮಿಸಿ ದೇವಿಯ ಗದ್ದುಗೆ ನಿರ್ಮಿಸಿದರು. ಗದ್ದುಗೆಗೆ ಅರಿಷಿಣ, ಕುಂಕುಮ, ಪರಿಮಳ ಪುಷ್ಪಗಳಿಂದ ಅಲಂಕರಿಸಿದರು. ದೇವಿಗೆ ಮಡಿಯಿಂದ ಮೊಸರನ್ನ ತಳಿಗೆ ತಯಾರಿಸಿ ನೈವೇದ್ಯವಾಗಿ ಇಡಲಾಯಿತು. ಹಲವರು ತಂಬಿಟ್ಟಿನಆರತಿ ಸೇವೆ ಅರ್ಪಿಸಿದರು.

ಕುರಿಮಾಂಸದ ಅಡುಗೆ ತಯಾರಿಸಿ ದೇವಿಗೆ ನೈವೇದ್ಯ ಇಡಲಾಯಿತು. ಬಂದ ಭಕ್ತರಿಗೆ ಸಮನಾಗಿ ಹಣ್ಣುತುಪ್ಪ, ತೀರ್ಥ ಪ್ರಸಾದ ನೀಡಲಾಯಿತು. ದೇವಿಗೆ ಅರ್ಪಿಸಿದ ಕುರಿಮಾಂಸ ದೂಟದ ಪ್ರಸಾದವಾಗಿ ಸಾಮೂಹಿಕ ಭೋಜನ ನೀಡಲಾಯಿತು.


ಮುಖಂಡರಾದ ಬಾವಿಮನೆ ಕುಮಾರ್, ಅರ್ಚಕ ಲಕ್ಕೇಗೌಡ, ಶೇಖರ್, ಕೃಷ್ಣೇಗೌಡ, ಗಣೇಶ್, ಮಂಜಯ್ಯ, ತಿಮ್ಮೇಗೌಡ, ದೇವರಾಜು, ಪುಟ್ಟರಾಜು, ಪುಟ್ಟಮ್ಮ ಮತ್ತಿತರರು ಇದ್ದರು.

ವಸತಿ ನಿಲಯ, ಸರ್ಕಾರಿ ಶಾಲೆಗೆ ದಾಖಲಾಗಲು ವಿದ್ಯಾರ್ಥಿಗಳಿಗೆ ಆಹ್ವಾನ

ಮೇಲುಕೋಟೆ:ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಮತ್ತು ಶತಮಾನದ ಸರ್ಕಾರಿ ಬಾಲಕರ ಶಾಲೆಗೆ ದಾಖಲಾಗಲು ಪ.ಜಾತಿ, ಪಂಗಡ ಹಾಗೂ ಇತರ ಜಾತಿ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸುತ್ತಿರುವ ಬಾಲಕರ ಹಾಸ್ಟೆಲ್‌ನಲ್ಲಿ 50 ವಿದ್ಯಾರ್ಥಿಗಳು ದಾಖಲಾಗಲು ಅವಕಾಶವಿದ್ದು ಇದರಲ್ಲಿ 45 ಮಂದಿ ಪಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ 15 ಮಂದಿ ಇತರ ಜಾತಿಯ ಮಕ್ಕಳಿಗೂ ಅವಕಾಶವಿದೆ. ವಿದ್ಯಾರ್ಥಿ ನಿಲಯದಲ್ಲಿ ಬಿಸಿನೀರು, ಮಲಗಲು ಮಂಚ, ವಿಶಾಲವಾದ ಕೋಠಡಿಗಳು, ಶುಚಿತ್ವದಿಂದ ಕೂಡಿದ ಶೌಚಾಲಯ ಸ್ನಾನಗೃಹ, ಊಟದ ಹಾಲ್, ಮಕ್ಕಳ ಲಗೇಜ್ ಮತ್ತು ಪುಸ್ತಗಳನ್ನಿಡಲು ಪ್ರತ್ಯೇಕ ವ್ಯವಸ್ಥೆ, ರೀಡಿಂಗ್ ರೂಂ,ಶುದ್ಧ ಕುಡಿಯುವ ನೀರು ಅಚ್ಚುಕಟ್ಟಾದ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಕರ್ಯವನ್ನೂ ನೀಡಲಾಗುತ್ತದೆ.5 ರಿಂದ 8ನೇ ತರಗತಿ ಮಕ್ಕಳಿಗೆ ದಾಖಲಾಗಲು ಅವಕಾಶವಿದೆ. ವಸತಿನಿಲಯದ ಮುಂಭಾಗವಿರುವ 150 ವರ್ಷ ಪೂರೈಸಿರುವ ಶತಮಾನದ ಸರ್ಕಾರಿ ಶಾಲೆಗೆ ದಾಖಲು ಮಾಡಲಾಗುತ್ತದೆ. ದ್ವಿಭಾಷ ಮಾಧ್ಯವಿರುವ ಶತಮಾನದ ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಶಾಲೆಯಲ್ಲೂ ಉಚಿತ ಬ್ಯಾಗ್, ನೋಟ್‌ಬುಕ್ ಲೇಖನ ಸಾಮಗ್ರಿಗಳು ಉಚಿತ ಕಂಪ್ಯೂಟರ್ ತರಬೇತಿ ಮುಂತಾದ ಎಲ್ಲಾ ಸೌಲಭ್ಯಗಳನ್ನೂ ನೀಡಲಾಗುತ್ತಿದೆ.

ಶತಮಾನದ ಸರ್ಕಾರಿ ಶಾಲಾಬಲವರ್ಧನೆಗೆ ಹಮ್ಮಿಕೊಂಡಿರುವ ದಾಖಲಾತಿ ಆಂದೋಲನದಲ್ಲಿ ಹಾಸ್ಟೆಲ್ ಹಾಗೂ ಶಾಲೆಗೆ ದಾಖಲಾಗುವ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯಗಳ ಜೊತೆಗೆ ವಿಶೇಷ ಸೌಲಭ್ಯಗಳನ್ನು ಶಾಲಾ ವತಿಯಿಂದ ನೀಡುವುದರ ಜೊತೆಗೆ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ನೀಡಲಾಗುತ್ತದೆ.ಸರ್ಕಾರದ ಹಾಸ್ಟೆಲ್‌ ಮತ್ತು ಶಾಲೆಗೆ ದಾಖಲಾಗಲು ಇಚ್ಚಿಸುವ ಮಕ್ಕಳಿಗೆ ಮೇಲುಕೋಟೆ ಹಾಸ್ಟೆಲ್‌ನಲ್ಲೇ ಅರ್ಜಿ ಹಾಕಲು ಸಹಾಯ ಮಾಡಲಾಗುತ್ತದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ಈ ಸಂಬಂಧ ನಿಲಯಪಾಲಕ ಪ್ರಸನ್ನಕುಮಾರ್ ಮೊ-9972016370, ಶಾಲೆ ಮುಖ್ಯಶಿಕ್ಷಕ ಎಸ್.ಎನ್. ಸಂತಾನರಾಮನ್ ಮೊ-9482113598, ಶಿಕ್ಷಕಿ ಬಿ.ಜಯಂತಿ ಮೊ-99459161194 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.