ಕನ್ಯಾನ ಮಂಡಿಯೂರು: ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನತೆ

| Published : Jun 18 2025, 03:41 AM IST

ಕನ್ಯಾನ ಮಂಡಿಯೂರು: ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಮಂಡಿಯೂರು ಪ್ರದೇಶದಲ್ಲಿಸೋಮವಾರ ಭಾರೀ ಶಬ್ದ ಕೇಳಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಶಬ್ದದ ತೀವ್ರತೆಗೆ ಸಣ್ಣ ಕಂಪನ ಉಂಟಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನಾದ್ಯಂತ ಸೋಮವಾರವೂ ಮಳೆಯ ಅವಾಂತರ ಮುಂದುವರಿದಿದ್ದು ಗುಡ್ಡಕುಸಿತ, ಆವರಣಗೋಡೆ ಕುಸಿದಂತಹ ಘಟನೆಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಕನ್ಯಾನ ಗ್ರಾಮದ ಮಂಡಿಯೂರು ಪ್ರದೇಶದಲ್ಲಿ ಭಾರೀ ಶಬ್ದ ಕೇಳಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಶಬ್ದದ ತೀವ್ರತೆಗೆ ಸಣ್ಣ ಕಂಪನ ಉಂಟಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.ಮನೆಯಲ್ಲಿದ್ದ ಮಹಿಳೆಯರು ಮನೆಯಿಂದ ಹೊರಗೆ ಓಡಿಬಂದಿದ್ದು, ಬಸ್ ನಿಲ್ದಾಣದಲ್ಲಿ‌ ನಿಂತಿದ್ದ ಯುವಕರಿಗೂ ಶಬ್ದ ಕೇಳಿಸಿದೆ ಎನ್ನುತ್ತಾರೆ.

ವಿಷಯ ತಿಳಿದ ಗ್ರಾಮಕರಣಿಕ ಅನಿಲ್ ಹಾಗೂ ಪಂಚಾಯಿತಿ ಸಿಬ್ಬಂದಿ, ಗ್ರಾ.ಪಂ ಸದಸ್ಯರ ಜೊತೆ ಸೇರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶಬ್ದ ಕೇಳಿದ ಮನೆಗಳಲ್ಲಿ ಯಾವುದೇ ಬಿರುಕು ಬಿಟ್ಟ ರೀತಿಯ ಘಟನೆಗಳು ಕಂಡು ಬಂದಿಲ್ಲ. ಶಬ್ದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಕಂದಾಯ ಇಲಾಖಾ ಪ್ರಕಟಣೆ ತಿಳಿಸಿದೆ.ವೀರಕಂಬ ಗ್ರಾಮದ ವ್ಯಾಪ್ತಿಯ ಕಲ್ಲಡ್ಕ-ವಿಟ್ಲ ಮುಖ್ಯ ರಸ್ತೆಯ ಕೆಲಿಂಜ ನಡು ವಳಚ್ಚಿಲ್ ಎಂಬಲ್ಲಿ ರಸ್ತೆ ಬದಿಯಲ್ಲಿ ಮಣ್ಣು ಕುಸಿದಿದ್ದು, ರಸ್ತೆ ಬದಿಯಲ್ಲಿ ಬೃಹತ್ ಗಾತ್ರ ಬಂಡೆ ಕಲ್ಲು ಅಪಾಯಕಾರಿಯಾದ ಸ್ಥಿತಿಯಲ್ಲಿದ್ದ ಹಿನ್ನೆಲೆ ಹತ್ತಿರದ ಮನೆಯಲ್ಲಿ ವಾಸ್ತವ್ಯವಿದ್ದ ಸುಶೀಲ ಎಂಬವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಕರೋಪಾಡಿ ಗ್ರಾಮದ ಕಲ್ಕಾರು ಎಂಬಲ್ಲಿನ ರಹಮತ್ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದೆ. ಅಮ್ಟಾಡಿ ಬಾಂಬಿಲ ರಸ್ತೆಯಲ್ಲಿ ಮಣ್ಣುಕುಸಿತಗೊಂಡ ಹಿನ್ನೆಲೆ ರಸ್ತೆ ಸಂಚಾರ ಬಂದ್ ಆಗಿದ್ದು, ತೆರವು ಕಾರ್ಯಚರಣೆ ನಡೆಸಲಾಯಿತು.ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ಎಂಬಲ್ಲಿ ಪಿ. ಬಿ ಅಬೂಬಕ್ಕರ್ ಮನೆಯ ಶೌಚಾಲಯ ಮತ್ತು ಸ್ನಾನಗೃಹಕ್ಕೆ ಮಳೆಗಾಳಿಯಿಂದ ಹಾನಿಯಾದೆ. ತೆಂಕಕಜೆಕಾರು ಗ್ರಾಮದ ಬಾರ್ದೋಟ್ಟು ಎಂಬಲ್ಲಿನ ಆಯಿಷಾ ಪಿ ಎಸ್ ಎಂಬವರಿಗೆ ಸೇರಿದ ದನದ ಹಟ್ಟಿ ಹಾಗೂ ಕಾಂಪೌಂಡ್ ಕುಸಿದು ಬಿದ್ದಿರುತ್ತದೆ. ಮೇರಮಜಲು ಗ್ರಾಮದ ಅಬ್ಬೆಟ್ಟು ಎಂಬಲ್ಲಿ ನೋಣಯ ಎಂಬವರ ಮನೆ ಗೋಡೆಗೆ ಗುಡ್ಡ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ಸಂಗಬೆಟ್ಟು ಗ್ರಾಮದ ಕಂಡಿಗ ಎಂಬಲ್ಲಿನ ರೋಶನ್ ಸಿಕ್ವೆರಾ ಅವರ ಶೌಚಾಲಯ ಕಟ್ಟಡ ಕುಸಿದಿರುತ್ತದೆ. ಬಿಮೂಡ ಗ್ರಾಮದ ಉಮಾ ಎಸ್ ಭಟ್ ಮನೆಗೆ ಬರೆ ಜರಿದು ಬಿದ್ದು ಆಂಶಿಕ ಹಾನಿಯಾಗಿದೆ. ಪುಣಚ ಗ್ರಾಮದ ವಾರಿಜ ಮನೆಗೆ ಗುಡ್ಡ ಕುಸಿದು ಹಾನಿಯಾಗಿದ್ದು, ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಪಾಣೆಮಂಗಳೂರು ಗ್ರಾಮದ ಬೋರುಗುಡ್ಡೆ ಎಂಬಲ್ಲಿ ಮಹಾಬಲ ಮನೆಗೆ ತೀವ್ರ ಹಾನಿಯಾಗಿರುತ್ತದೆ. ವಿಟ್ಲ ಪಡ್ನೂರು ಗ್ರಾಮದ ಎರ್ಮೆನಿಲೆ ಎಂಬಲ್ಲಿ ಶೀನ ಪರವ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿದಿದ್ದು, ಮನೆಯವರನ್ನು ಸ್ಥಳಾಂತರಗೊಳಿಸಲಾಗಿದೆ. ಕಡೂರು ಕಾಞಂಗಾಡ್ ರಾಜ್ಯ ಹೆದ್ದಾರಿಯ ಪಾತ್ರ ತೋಟ ಎಂಬಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳವನ್ನು ವಿಟ್ಲ ಪೋಲೀಸ್ ಹಾಗೂ ವೀರಕಂಭ ಪಂಚಾಯತ್ ಉಪಾಧ್ಯಕ್ಷರು, ಸಿಬ್ಬಂದಿಯವರೊಂದಿಗೆ ಪರಿಶೀಲನೆ ನಡೆಸಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ವಹಿಸಲಾಗಿದೆ.ತಾಲೂಕಿನ ಪಿಲಿಮೊಗರು ಗ್ರಾಮದ ಸುನ್ನಡಪೊಲಿ ಎಂಬಲ್ಲಿ ಗುಡ್ಡ ಜರಿದು ಬುಡೋಳಿ ಗ್ರಾಮದಲ್ಲಿ ಹಾದು ಹೋಗುತ್ತಿರುವ ತೋಡಿನ ಮೇಲೆ ಬಿದ್ದು ಸಮೀಪದಲ್ಲಿರುವ ತೋಟಗಳಿಗೆ ನೀರು ನುಗ್ಗಿದ್ದು, ಜೆಸಿಬಿ ಯಂತ್ರದಿಂದ ತೋಡು ಬಿಡಿಸಿ ಕೊಡುವ ಕಾರ್ಯ ನಡೆದಿದೆ. ಮೇರಮಜಲು ಗ್ರಾಮದ ಕಂಗಿತೋಟ ಮೀನಾಕ್ಷಿ ರವರ ಮನೆ ಗೋಡೆ ಜರಿದಿದೆ.ಕರಿಯಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕುಕ ಎಂಬಲ್ಲಿ ಗುಡ್ಡೆ ಜರಿದು ರಸ್ತೆ ಸಂಪೂರ್ಣ ಬಂದ್ ಆಗಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಮೂಡು ಪಡುಕೋಡಿ ಗ್ರಾಮ ವ್ಯಾಪ್ತಿಯ ಗುಂಪಕಲ್ಲು ಸೈನಾಜ್ ವಾಸ್ತವ್ಯದ ಕಚ್ಚಾ ಮನೆಯ ಗೋಡೆ ಬಿದ್ದಿರುತ್ತದೆ. ಬಿಳಿಯೂರು ಗ್ರಾಮದ ಕುಕ್ಕನೋಟು ಕರುವೇಲು ಎಂಬಲ್ಲಿ ಅಬ್ದುಲ್ ರಝಕ್ ಮನೆಯ ಬದಿ ಬರೆ ಜರಿದಿರುತ್ತದೆ.ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಮಜಲು ಎಂಬಲ್ಲಿ ಸುಮಾರು 4 ಮನೆಗಳಿಗೆ ಸಂಪರ್ಕಿಸುವ ರಸ್ತೆಗೆ ಮಳೆ ನೀರು ನಿಂತಿರುತ್ತದೆ.