ಶಾಸಕರು ಕ್ಷೇತ್ರದಲ್ಲಿ ಭ್ರಷ್ಟಾಚಾರ ಇಲ್ಲ. ಭ್ರಷ್ಟಾಚಾರವಾದರೆ ನಾನು ಸಹಿಸಲ್ಲ.
ಕೂಡ್ಲಿಗಿ: ಪಡಿತರ ಅಕ್ಕಿ ಕಾಳಸಂತೆಯಲ್ಲಿ ನಿರಂತರ ಮಾರಾಟವಾಗುತ್ತಿದ್ದರೂ ಇದನ್ನು ಕರ್ನಾಟಕ ರಕ್ಷಣಾ ವೇದಿಕೆಯವರೇ ಹಿಡಿದು ಆ ಸಮಯದಲ್ಲಿ ಈ ಬಗ್ಗೆ ತಹಶೀಲ್ದಾರಗೆ ಫೋನ್ ಮಾಡಿ ತಿಳಿಸಿದರೂ 112 ನಂಬರ್ಗೆ ಫೋನ್ ಮಾಡಿ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಕೂಡ್ಲಿಗಿ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕರವೇ ಅಧ್ಯಕ್ಷ ಕಾಟೇರ್ ಹಾಲೇಶ್ ಆರೋಪಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವಂತೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.ಶಾಸಕರು ಕ್ಷೇತ್ರದಲ್ಲಿ ಭ್ರಷ್ಟಾಚಾರ ಇಲ್ಲ. ಭ್ರಷ್ಟಾಚಾರವಾದರೆ ನಾನು ಸಹಿಸಲ್ಲ. ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಾರೆ. ಆದರೆ ತಾಲೂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಶಿರಸ್ತೇದಾರಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿರುತ್ತದೆ. ರಾಜಾರೋಷವಾಗಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ವಿಡಿಯೋ ಸಾಕ್ಷಿಗಳು ನಮ್ಮಲ್ಲಿವೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಕ್ಷೇತ್ರದಲ್ಲಿ ತುಂಬಿ ತುಳುಕುತ್ತಿದೆ. ಅದನ್ನು ನಿಲ್ಲಿಸಬೇಕು ಎಂದರು.
ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡಿದರೆ ನಾವು ಅಲ್ಲಿ ಇದ್ದೇವೆ; ಇಲ್ಲಿ ಇದ್ದೇವೆ ಅಂತಾರೆ. ಹಾಗಾದರೆ ಕಾಳಸಂತೆಕೋರರನ್ನು ಯಾರು ಮಟ್ಟ ಹಾಕಬೇಕು ಎಂದು ಸ್ಥಳೀಯ ಆಡಳಿತವನ್ನು ಕಾಟೇರ್ ಹಾಲೇಶ್ ಪ್ರಶ್ನಿಸಿದರು.ಭ್ರಷ್ಟಾಚಾರದಲ್ಲಿ ತೊಡಗಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇವೆ ಎಂದು ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಘಂಟಾಘೋಷವಾಗಿ ಹೇಳುತ್ತಾರೆ. ಇದು ನ್ಯಾಯವಲ್ಲ. ಅಂತಹ ಕರ್ತವ್ಯ ಮರೆತ ಅಧಿಕಾರಿಗಳನ್ನು ಸಸ್ಪಂಡ್ ಮಾಡಬೇಕು ಎಂದು ಒತ್ತಾಯಿಸಿದರು.
ಕರವೇ ಗೌರವಾಧ್ಯಕ್ಷ ಸೂರ್ಯಪಾಪಣ್ಣ ಮಾತನಾಡಿ, ರಾಜ್ಯ ಸರ್ಕಾರ ಪಡಿತರ ತಿದ್ದುಪಡಿ ಮಾಡಲು ಅವಕಾಶ ನೀಡಿದ್ದನ್ನು ಕೂಡ್ಲಿಗಿ ತಾಲೂಕಿನಲ್ಲಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ಒಬ್ಬ ಫಲಾನುಭವಿಯಿಂದ ಎರಡರಿಂದ ಐದು ಸಾವಿರದವರೆಗೆ ಪಡೆದು ಅವರಿಗೆ ತಕ್ಕಂತೆ ತಿದ್ದುಪಡಿ ಮಾಡಿಕೊಡುತ್ತಾರೆ. ಇಂತಹ ಅಧಿಕಾರಿಗಳ ಮೇಲೆ ಮೇಲಧಿಕಾರಿಗಳು ಕ್ರಮ ಕೈಗೊಂಡು ಸಸ್ಪೆಂಡ್ ಮಾಡಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದರು.ತಹಶೀಲ್ದಾರ್ ವಿ.ಕೆ. ನೇತ್ರಾವತಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಓಬಳೇಶ, ಎನ್.ನಾಗಜ್ಜ, ಲಕ್ಷ್ಮೀದೇವಿ, ಮಹೇಶ, ಶ್ರೀಧರ, ಅಜ್ಜನಗೌಡ, ಮರಬ ನಾಗರಾಜ್, ಓಬಣ್ಣ, ಭೀಮಸಮುದ್ರ ತಿಪ್ಪೇಸ್ವಾಮಿ, ಕೆ.ಶೇಷಪ್ಪ, ಅರ್ಜುನ, ಶಿವಕುಮಾರ್, ರೇವಣ್ಣ, ಚಿಕ್ಕಪ್ಪ, ನಿಂಗಪ್ಪ, ನಂದಿ ದೊಡ್ಡಪ್ಪ ಇದ್ದರು.