ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಸದಾ ಸಮಾಜದ ಸ್ವಾಸ್ಥ್ಯಕ್ಕಾಗಿ ಚಿಂತಿಸುವವರು ಮರಣದ ನಂತರವು ಬದುಕಿರುತ್ತಾರೆ. ಅಂತಹವರ ಸಾಲಿಗೆ ಕೆಂಪೇಗೌಡರು ಸೇರುತ್ತಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಶುಕ್ರವಾರ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿ, ಕುಟುಂಬಕ್ಕೆ ಸೀಮಿತವಾಗದೆ ಸಮಾಜಕ್ಕಾಗಿ ಬದುಕಿದ್ದಾಗ ಜೀವನ ಸಾರ್ಥಕವಾಗುತ್ತದೆ. ಶೋಷಿತರ ಪರವಾಗಿ ಕೆಲಸ ಮಾಡಿದಾಗ ಬದುಕು ಅರ್ಥ ಪಡೆಯಲಿದೆ. ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ಅನಾದಿ ಕಾಲದಲ್ಲೇ ವೃತ್ತಿಗೆ ಅನುಗುಣವಾಗಿ ಬಡಾವಣೆಗಳನ್ನು ನಿರ್ಮಿಸುವಮೂಲಕ ನವಬೆಂಗಳೂರು ನಿರ್ಮಾಣಕ್ಕೆ ಅಡಿಪಾಯ ಹಾಕಿದ ಕೆಂಪೇಗೌಡರನ್ನು ಜನರನ್ನು ಎಂದಿಗೂ ಮರೆಯಲಾರರು ಎಂದರು.ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜೀವನಗಾಥೆಯನ್ನು ಮತ್ತೊಂದು ತಲೆಮಾರಿಗೆ ಕೊಂಡೊಯ್ಯುವ ದೃಷ್ಟಿಯಿಂದ ವರ್ಷಕ್ಕೊಮೆ ಮಹಾತ್ಮರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸಾಧಿಸಿ ಮಹನೀಯರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಆಳವಡಿಕೊಳ್ಳಬೇಕು ಎಂದರು.ಉಪವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ ಮಾತನಾಡಿ, ಇಂದಿನ ಬೃಹತ್ ಬೆಂಗಳೂರು ನಗರ ನಿರ್ಮಾಣಕ್ಕೆ ಅಂದೆ ಅಡಿಪಾಯ ಹಾಕಿದ ಕೆಂಪೇಗೌಡರ ದೂರದೃಷ್ಟಿ ಶ್ಲಾಘನಾರ್ಹ ಎಂದರು.ವೇದಿಕೆಯಲ್ಲಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯಧರ್ಶಿ ಉಮೇಶ್, ಮುಖಂಡ ಬೈರಮುಡಿ ಚಂದ್ರು, ಡಿವೈಎಸ್ಪಿ ಪ್ರಮೋದ್ ಕುಮಾರ್, ತಹಸೀಲ್ದಾರ್ ಅರವಿಂದ್, ನಂದಿ ಕೃಪರಾಜು ಮುಂತಾದವರಿದ್ದರು.