ದೂರಗಾಮಿ ಚಿಂತನೆಯ ನಾಯಕ ಕೆಂಪೇಗೌಡ

| Published : Jun 27 2024, 01:01 AM IST

ಸಾರಾಂಶ

ದೊಡ್ಡಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಕರ್ನಾಟಕದ ಅಗ್ರಗಣ್ಯ ಆಡಳಿತಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು ನಗರದ ನಿರ್ಮಾತೃವಾಗಿರುವ ಕೆಂಪೇಗೌಡರು ದೂರಗಾಮಿ ಚಿಂತನೆಗಳನ್ನು ಹೊಂದಿದ್ದ ನಾಯಕ ಎಂದು ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.

ದೊಡ್ಡಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಕರ್ನಾಟಕದ ಅಗ್ರಗಣ್ಯ ಆಡಳಿತಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು ನಗರದ ನಿರ್ಮಾತೃವಾಗಿರುವ ಕೆಂಪೇಗೌಡರು ದೂರಗಾಮಿ ಚಿಂತನೆಗಳನ್ನು ಹೊಂದಿದ್ದ ನಾಯಕ ಎಂದು ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.

ಇಲ್ಲಿನ ಅಭಿನೇತ್ರಿ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಭಿನೇತ್ರಿ ಸಾಂಸ್ಕೃತಿಕ ಸಂಘ ಹಾಗೂ ಭಜನೆಹಟ್ಟಿ ಲಕ್ಷ್ಮಯ್ಯ ಚಾರಿಟಬಲ್ ಟ್ರಸ್ಟ್‌ಗಳ ಸಹಯೋಗದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಇದ್ದ ಪಾಳ್ಯಗಾರರಲ್ಲಿ ಕೆಂಪೇಗೌಡರು ಪ್ರಮುಖರು. ಬೆಂಗಳೂರು ನಗರಕ್ಕೆ ಕಾಯಕಲ್ಪ ಹಾಕಿದವರು. ಬಹಳ ದೂರಗಾಮಿ ಚಿಂತನೆ ಮತ್ತು ಕಾರ್ಯಾಚರಣೆ ಅವರ ಆಡಳಿತದಿಂದಾಗಿ ಇಂದು ಬೆಂಗಳೂರು ಅಗಾಧವಾಗಿ ಬೆಳೆಯಲು ಸಾಧ್ಯವಾಗಿದೆ. 1510ರಲ್ಲಿ ಜನಿಸಿದ ಕೆಂಪೇಗೌಡ ಸುಕ್ಷಿತರೂ ಹಾಗು ದಕ್ಷ ಆಡಳಿತಕ್ಕೆ ಹೆಸರಾದವರು. ಬೆಂಗಳೂರಿನಲ್ಲಿ ವಿವಿಧ ದಿಕ್ಕಿನಲ್ಲಿ ಮಹಾದ್ವಾರಗಳನ್ನು ನಿರ್ಮಿಸಿದರು. ನಗರದ ಹಲವೆಡೆ ಕೆರೆ ಕಟ್ಟೆಗಳನ್ನು ಕಟ್ಟಿಸಿದರು. ಹಲವು ಪ್ರದೇಶಗಳಲ್ಲಿ ದೇವಸ್ಥಾನಗಳನ್ನು ಕಟ್ಟಿದರು ಎಂದು ವಿಶ್ಲೇಷಿಸಿದರು.

ಕೆರೆ, ದೇಗುಲಗಳ ನಿರ್ಮಾತೃ:

ಬೆಂ.ಗ್ರಾ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ವಿವಿಧ ಸಮುದಾಯಗಳ ಕಸುಬುಗಳ ಬೆಳವಣಿಗೆಗೆ ಪೂರಕವಾದ ವ್ಯವಹಾರದ ವಾತಾವರಣ ನಿರ್ಮಿಸಿದ ಕೆಂಪೇಗೌಡರು, ಅದಕ್ಕಾಗಿ ವಿವಿಧ ಪೇಟೆಗಳು ಮತ್ತು ಬೀದಿಗಳನ್ನು ಹುಟ್ಟುಹಾಕಿದರು. ವಿಶಾಲ ರಸ್ತೆಗಳು ತಯಾರಾದವು. 1569ರವರೆಗೂ ಬದುಕಿದ್ದ ಕೆಂಪೇಗೌಡರು ಬೆಂಗಳೂರಿನಲ್ಲಿ ಸ್ಥಾಪಿಸಿದ ಕೆರೆ ಕಟ್ಟೆಗಳು, ದೇವಸ್ಥಾನಗಳು, ದ್ವಾರಗಳು ಈಗಲೂ ಕಾಣಸಿಗುತ್ತವೆ. 1537ರಲ್ಲಿ ಕೆಂಪೇಗೌಡರು ಬಸವನಗುಡಿ ನಂದಿ ಮಂದಿರವನ್ನು ಕಟ್ಟಿದರು. ಅದೇ ರೀತಿ ಗವಿಗಂಗಾಧರೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಅಲಸೂರು ಸೋಮೇಶ್ವರ ದೇವಸ್ಥಾನದ ಪುನಶ್ಚೇತನ, ಧರ್ಮಾಂಬುಧಿ, ಕೆಂಪಾಂಬುಧಿ, ಸಂಪಂಗಿ ಕೆರೆ, ಸಿದ್ದಿಕಟ್ಟೆ, ಕಾರಂಜಿ ಕಟ್ಟೆ ಇತ್ಯಾದಿ ಕೆರೆ ಕಟ್ಟೆಗಳನ್ನು ಕೆಂಪೇಗೌಡರು ನಗರದ ಹಲವೆಡೆ ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ ಎಂದು ಉಲ್ಲೇಖಿಸಿದರು.

ಕುಶಲ ಕಲೆಗಳ ಪೋಷಕ:

ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಕೆಂಪೇಗೌಡ ನಾಲ್ಕು ಮಹಾದ್ವಾರ ಬೆಂಗಳೂರು ನಗರದ ಗಡಿಭಾಗವನ್ನು ಗುರುತಿಸಲು ವಿವಿಧ ದಿಕ್ಕುಗಳ ಅಂಚಿನಲ್ಲಿ ಕೆಂಪೇಗೌಡರು ನಾಲ್ಕು ಮಹಾದ್ವಾರಗಳನ್ನು ಕಟ್ಟಿದ್ದಾರೆ. ಇವಲ್ಲದೇ ಕೆಂಪೇಗೌಡರು ಇನ್ನೂ ಐದು ಸಣ್ಣ ದ್ವಾರಗಳನ್ನೂ ಕಟ್ಟಿದ್ದರು. ರೈತರ ಅಕ್ಕಿ, ರಾಗಿ, ಹತ್ತಿ, ವಿವಿಧ ದವಸ ಧಾನ್ಯಗಳ ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ರಚಿಸಿದರು. ವಿವಿಧ ಸಮುದಾಯಗಳ ಕಸುಬುಗಳಾದ ಮಡಿಕೆ ತಯಾರಿಕೆ, ಕೈಮಗ್ಗ, ಕೈಕುಸುರಿ ಇತ್ಯಾದಿಗಳಿಗೂ ಪ್ರತ್ಯೇಕ ಪೇಟೆಗಳನ್ನು ಕಟ್ಟಿದರು. ದೇಶದ ವಿವಿಧೆಡೆಯಿಂದ ಕರಕುಶಲರನ್ನು ಮತ್ತು ಕಸುಬುದಾರರನ್ನು ಬೆಂಗಳೂರಿಗೆ ಕರೆತಂದು ಇಲ್ಲಿನ ಮಾರುಕಟ್ಟೆ ವಿಸ್ತರಿಸಿದರು ಎಂದು ವಿವರಿಸಿದರು.

ಅಭಿನೇತ್ರಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಎಚ್.ಎಸ್.ರೇವತಿ ಅನಂತರಾಮ್ ಅಧ್ಯಕ್ಷತೆ ವಹಿಸಿದ್ದರು. ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು, ಭಜನೆಹಟ್ಟಿ ಲಕ್ಷ್ಮಯ್ಯ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಬಿ.ಅನಂತರಾಮ್, ಕಸಾಪ ತಾ.ಕಾರ್ಯದರ್ಶಿ ಎ.ಜಯರಾಮ್, ಕಸಬಾ ಅಧ್ಯಕ್ಷ ದಾದಾಫೀರ್, ಕಾರ್ಯದರ್ಶಿ ಸುರೇಶ್, ಸಫೀರ್, ನಾಡಪ್ರಭು ಕೆಂಪೇಗೌಡ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿ ಲಕ್ಷ್ಮಿ, ಪದಾಧಿಕಾರಿಗಳಾದ ಭಾಗ್ಯ, ಮಂಗಳಾ, ರಶ್ಮಿ, ಸವಿತಾ, ಅಪೂರ್ವ ಅರವಿಂದ್, ಕಲಾವಿದ ಹಾಡೋನಹಳ್ಳಿ ಗೋವಿಂದರಾಜು, ಕನ್ನಡಪರ ಹೋರಾಟಗಾರ ತೂಬಗೆರೆ ಷರೀಫ್, ನಿಯೋಜಿತ ನಾಮನಿರ್ದೇಶಿತ ಸದಸ್ಯೆ ವಾಣಿ ಮತ್ತಿತರರು ಉಪಸ್ಥಿತರಿದ್ದರು.

26ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ಬೆಂ.ಗ್ರಾ. ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಭಿನೇತ್ರಿ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ನಡೆಯಿತು.