ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಒಬ್ಬ ವೈಜ್ಞಾನಿಕ ಚಿಂತಕರಾಗಿ ದೂರ ದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನಾಗಿ ನಿರ್ಮಿಸಿದ ಕಾರಣದಿಂದ ಬೆಂಗಳೂರನ್ನು ಸಾಂಸ್ಕೃತಿಕ ನಗರವನ್ನಾಗಿ ಇಂದಿಗೂ ನೋಡುತ್ತಿದ್ದೇವೆ ಎಂದು ತಹಸೀಲ್ದಾರ್ ಗುರುಬಸವರಾಜ್ ಹೇಳಿದರು.ನಗರದ ಮೇರಿಯಾ ಸದನದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ,
ಕೆಂಪೇಗೌಡರು ಬೆಂಗಳೂರನ್ನು ಹೊಸದಾಗಿ ನಿರ್ಮಿಸಿದರ ಪರಿಣಾಮ ದೊಡ್ಡ ನಗರವಾಗಿ ರೂಪಗೊಂಡ ರಾಜಧಾನಿ ಮಹಾನಗರವಾಗಿ ಬೆಳೆಯಿತು. ನೂರಾರು ಕೆರೆ ನಿರ್ಮಾಣ ಮಾಡಿದಂತಹ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ವಿಶ್ವದ ಅನೇಕ ರಾಷ್ಟ್ರಗಳು ಇಂದು ಬೆಂಗಳೂರನತ್ತ ತಿರುಗಿ ನೋಡುತ್ತಿವೆ. ಇದರಲ್ಲಿ ಕೆಂಪೇಗೌಡರ ಪಾತ್ರ ಮಹತ್ವದ್ದು ಎಂದು ಬಣ್ಣಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಹನುಮಂತಪ್ಪ ಮಾತನಾಡಿ, ಒಬ್ಬ ಜನಪರ ಆಡಳಿತಗಾರನಿಗೆ ಇರಬೇಕಾಗಿದ್ದ ದೂರ ದೃಷ್ಟಿ ಜಾಣ್ಮೆ ಹೊಂದಿದ್ದ ಕೆಂಪೇಗೌಡರು ಈ ವಿಷಯದಲ್ಲಿ ಇಂದಿಗೂ ನಮಗೆ ಆದರ್ಶವಾಗಿದ್ದಾರೆ. ಅವರು ಗವಿ ಗಂಗಾಧರೇಶ್ವರ ದೇವಸ್ಥಾನ, ಬಸವೇಶ್ವರ, ದೊಡ್ಡ ಗಣೇಶ, ಹನುಮಂತನ ಗುಡಿ ಮತ್ತು ಚೆನ್ನಿಗರಾಯಸ್ವಾಮಿ ದೇವಸ್ಥಾನ ಕಟ್ಟಿಸಿ, ಬೆಂಗಳೂರಿಗೆ ಸಂಸ್ಕೃತಿ ಮೆರುಗನ್ನೂ ತುಂಬಿದ್ದಾರೆ ಎಂದರು.
ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮದಲ್ಲಿ ಜನಿಸಿದ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತಗಾರರಾಗಿ ನಂತರ ಯಲಹಂಕ ಅರಸರಾಗಿ ೧೫೧೩ ರಿಂದ ೧೫೫೯ರ ವರೆಗೆ ೪೬ ವರ್ಷಗಳ ಕಾಲ ಆಡಳಿತ ನಡೆಸಿದ ಕೆಂಪೇಗೌಡರು ಬೆಂಗಳೂರು ಕೋಟೆ ಮತ್ತು ಬೆಂಗಳೂರು ಪೇಟೆ ನಕ್ಷೆ ಸಿದ್ಧಪಡಿಸಿ ಯಶಸ್ವಿಯಾಗಿ ಕಾರ್ಯಗತಗೊಳಿಸಿದರು.ಹೀಗೆ ನಾಡಿನ ಅನೇಕರು ಮಹನೀಯರ ದಾರ್ಶನಿಕರ ಈ ನಾಡಿಗೆ ಮತ್ತು ದೇಶಕ್ಕೆ ಕೊಡಗೆ ನೀಡಿದ್ದು ಇವರ ಚರಿತ್ರೆ ಪುಸ್ತಕಗಳನ್ನ ಓದುವ ಮೂಲಕ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿಯಿಂದ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಸಭಾ ಕಾರ್ಯಕ್ರಮಕ್ಕೆ ಬರಲಾಯಿತು. ಕೆಂಪೇಗೌಡ ಜಯಂತ್ಯುತ್ಸವ ನಿಮಿತ್ತ ಶಿಕ್ಷಣ ಇಲಾಖೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನವಾಗಿ ಪುಸ್ತಕ ವಿತರಿಸಲಾಯಿತು.ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಇಓ ರಾಮಕೃಷ್ಣಪ್ಪ, ಗಿರಿಯಮ್ಮ ಕಾಲೇಜಿನ ಪ್ರಾಚಾರ್ಯ ಸುಜಾತ, ಬಿಆರ್ಸಿ ಕೃಷ್ಣಪ್ಪ, ಶಿಕ್ಷಣ ಇಲಾಖೆ ಮಂಜುಳಮ್ಮ ಕಂದಾಯ ಇಲಾಖೆ ಸಂತೋಷ್ ಸೇರಿ ಇತರರಿದ್ದರು.