ಕೇರಳ ಮೂಲದ ವಿದ್ಯಾರ್ಥಿಗಳ ಕೋಣೆಗೆ ನುಗ್ಗಿ ಹಲ್ಲೆ ಮಾಡಿ ದರೋಡೆ ಮಾಡಿದ್ದ ವಿದ್ಯಾರ್ಥಿ ಹಾಗೂ ಐವರು ಸಹಚರರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇರಳ ಮೂಲದ ವಿದ್ಯಾರ್ಥಿಗಳ ಕೋಣೆಗೆ ನುಗ್ಗಿ ಹಲ್ಲೆ ಮಾಡಿ ದರೋಡೆ ಮಾಡಿದ್ದ ವಿದ್ಯಾರ್ಥಿ ಹಾಗೂ ಐವರು ಸಹಚರರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಅಭಿನೇಷ್(22) ಡಿಪ್ಲೋಮಾ ವಿದ್ಯಾರ್ಥಿ. ಈತನ ಸಹಚರರಾದ ನವೀನ್ ಕುಮಾರ್(23), ಕುಮಾರ್(23), ವಿಮಲ್ ರಾಜ್(24), ಕೈಲವಂದನಂ (23) ಮತ್ತು ಪ್ರೇಮ್ ಕುಮಾರ್(24) ಬಂಧಿತರು.ಆರೋಪಿಗಳು ಕೋಣನಕುಂಟೆ ಠಾಣೆ ವ್ಯಾಪ್ತಿಯ ಪವಮಾನ ನಗರ ಕೆಂಬತ್ತಹಳ್ಳಿ ರಸ್ತೆಯಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ವಾಸವಾಗಿದ್ದ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಆರೋಪಿಗಳಿಂದ 3 ಲಕ್ಷ ರು. ಮೌಲ್ಯದ 2 ಬೈಕ್ಗಳು, 4 ಮೊಬೈಲ್ಗಳು, 2 ಲ್ಯಾಪ್ಟಾಪ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಅಭಿನೇಷ್ ತಮಿಳುನಾಡು ಮೂಲದವನಾಗಿದ್ದು, ನಗರದಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ಕೇರಳ ವಿದ್ಯಾರ್ಥಿಗಳ ಜತೆ ಜಗಳ ಮಾಡಿಕೊಂಡಿದ್ದ. ಅದರಿಂದ ಕೋಪಗೊಂಡಿದ್ದ ಆತ ತಮಿಳುನಾಡಿನಿಂದ ತನ್ನ ಐವರು ಸಹಚರರನ್ನು ಕರೆಸಿ, ಏ.17ರಂದು ಕೇರಳ ವಿದ್ಯಾರ್ಥಿಗಳ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೊಬೈಲ್, 10 ಸಾವಿರ ರು. ನಗದು, 2 ಲ್ಯಾಪ್ಟಾಪ್, ಮೊಬೈಲ್, ಬೈಕ್ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕೇರಳದ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ.
