ಕಿಕ್ಕೇರಿ:
ಪಟ್ಟಣದಲ್ಲಿ ಜರುಗಿದ ಕಿಕ್ಕೇರಮ್ಮನವರ ಜಾತ್ರೆಯ ವಿಶೇಷತೆಯಲ್ಲಿ ಒಂದಾದ ವಸಕೊಂತನ ಹಬ್ಬ, ವಸಂತನ, ಬೈಗುಳ ಹಬ್ಬ ವೀಕ್ಷಣೆಗೆ ವಿವಿಧೆಡೆಯಿಂದ ಜನತೆ ಅಧಿಕವಾಗಿ ಪಾಲ್ಗೊಂಡಿದ್ದರು.ಮಡಿಕೇರಿಯ ಬುಂಡೆ ಹಬ್ಬದ ಸಾಮೀಪ್ಯತೆ ಹಬ್ಬವಾದ ಈ ವಸಕೊಂತನಕುಣಿತ ವೀಕ್ಷಣೆ ಮಾಡಿ ನಮಿಸಿದರೆ ಸಂತಾನ ಪ್ರಾಪ್ತಿ ಲಭಿಸಲಿದೆ ಎಂಬ ನಂಬುಗೆಯಿಂದ ಜನಸಾಗರ ಹೆಚ್ಚಾಗಿತ್ತು.
ಕಿಕ್ಕೇರಿ-ಲಕ್ಷ್ಮೀಪುರಗ್ರಾಮ ಹೃದಯ ಭಾಗದ ಕಿಕ್ಕೇರಮ್ಮನ ಗುಡಿಯಲ್ಲಿ ದೇವಿಗೆ ವಿಶೇಷ ಆರತಿ ಎತ್ತಿ, ದೇವರಗುಡಿಯಲ್ಲಿ ಭದ್ರ ಲಕೋಟೆಯಲ್ಲಿ ಜೋಪಾನವಾಗಿಟ್ಟಿದ್ದ ಕೊಂತಪ್ಪ ದೇವರ ಹೊರತೆಗೆದು ಪೂಜಿಸಲಾಯಿತು.ನಂತರ ದೇವರ ಒಕ್ಕಲಿನ ರಂಗೇನಹಳ್ಳಿಯ ದೇವರಗುಡ್ಡಪ್ಪನಿಗೆ ರೇಷ್ಮೆರು ಮಾಲು ಪೇಟ, ಹಣೆಗೆದೊಡ್ಡ ಕೆಂಪು, ಹಳದಿ ನಾಮ ಹಾಕಿ ಸೊಂಟಕ್ಕೆ ಮರದ ಗುಪ್ತಾಂಗವನ್ನು ಕಟ್ಟಲಾಯಿತು. ಮೇಲು ಹೊದಿಕೆಯಾಗಿ ಹಸಿರು ಜರತಾರಿ ಶಾಲು ಹೊದಿಸಲಾಯಿತು. ಸಹ ಗುಡ್ಡಪ್ಪ, ಮೇಳಧಾರಿಗಳು ಗುಡ್ಡಪ್ಪನಿಗೆ ಸಾಥ್ ನೀಡಿದರು.
ಮೇಳಧಾರಿ ಗುಡ್ಡಪ್ಪರು ಪ್ರಾಸಬದ್ಧವಾಗಿ ಚಕ್ರವಾದ್ಯದ ನಾದದೊಂದಿಗೆದೇವಿ ಹಾಡು ಹೇಳುವಾಗ ಗುಡ್ಡಪ್ಪನು ಮರೆ ಮಾಚಿದ್ದ ಮರದ ಗುಪ್ತಾಂಗವನ್ನು ತೋರಿಸುತ್ತ ಉಯ್ ಎಂದು ಕುಣಿಯಲು ಆರಂಭಿಸಿದನು. ಊರಿನ ಹೊಸಬೀದಿ, ರಥಬೀದಿ, ಕೋಟೆಗಣಪತಿ ಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿ, ಜನಾರ್ಧನ ಬೀದಿಗಳಲ್ಲಿ ಸಾಗಿದಾಗ ಭಕ್ತರು ದೇವಿಗೆ ಹಣ್ಣು ಕಾಯಿ ಅರ್ಪಿಸಿ ಕೊಂತಪ್ಪದೇವರಿಗೆ ಭಕ್ತಿಯಿಂದ ನಮಿಸಿದರು.
ಲಕ್ಷ್ಮೀದೇವಿ (ಕಿಕ್ಕೇರಮ್ಮ)ಯನ್ನು ರಮಿಸಲು ಹಬ್ಬದ ವಾಡಿಕೆಯಂತೆ ಗ್ರಾಮದ ಹಿರಿಯಕೆ.ಎನ್. ನಾಗೇಗೌಡರೊಂದಿಗೆ ಸಂಗಡಿಗರು ಅಶ್ಲೀಲಕರವಾಗಿ ದೇವರನ್ನು ಮೂದಲಿಸಿ, ರಮಿಸುವಂತೆ ಪ್ರಾಸಕಟ್ಟಿ ಹಾಡಿದರು. ಈ ವಿನೋದದ ಹಾಡು ಕೇಳಿ ಮಹಿಳೆಯರು ಮುಸಿ ಮುಸಿ ನಕ್ಕರು.
ಜನಾರ್ಧನ ಬೀದಿಯಲ್ಲಿರುವ ಲಕ್ಷ್ಮೀದೇವಿ ಗುಡಿ ಬಳಿ ಸಾಗಿದಾದ ಜ್ಯೋತಿಪಣ ಸಮಾಜದವರು ಆರತಿ ಎತ್ತಿದೇವಿಗೆ ನಮಸಿ ಪ್ರಸಾದ ವಿತರಿಸಿದರು. ಅಮಾನಿಕೆರೆಯ ಗಂಗೆ ಕಡಕ್ಕೆ ತೆರಳಿ ಸೊಳ್ಳೇಪುರ ಗ್ರಾಮಸ್ಥರಿಂದ ಪೂಜೆ ಸ್ವೀಕರಿಸಲಾಯಿತು. ಅಂತಿಮವಾಗಿ ಬೆಳಗ್ಗಿನಿಂದ ಉಪವಾಸ ವ್ರತಾಚರಣೆಯಲ್ಲಿದ್ದ ಲಕ್ಷ್ಮೀಪುರಗ್ರಾಮಕ್ಕೆದೇವಿ ಮೆರವಣಿಗೆ ಸಾಗಿ ಪ್ರತಿ ಮನೆಗಳಲ್ಲಿನ ಪೂಜೆಯನ್ನು ದೇವಿಗೆ ಅರ್ಪಿಸಲಾಯಿತು.ಲಕ್ಕಮ್ಮನ ಒಕ್ಕಲಿನ ಬೂನಾಸಿ, ಕೆಂಚಮ್ಮ, ದೊಡ್ಡಹಟ್ಟಿ, ಮಾರಮ್ಮನ ವಠಾರದ ಮುಖಂಡರು, ಮತ್ತಿತರರು ಹಾಜರಿದ್ದರು.