ಸಾರಾಂಶ
ಹಿರಿಯ ಯಕ್ಷಗಾನ ಪ್ರಸಾದನ ಕಲಾವಿದ ಶರತ್ ಕುಮಾರ್ ಅವರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಯಕ್ಷಗಾನ ತಾಳಮದ್ದಲೆಯಂತಹ ಕಲಾ ಪ್ರಾಕಾರಗಳು ಯುವ ಪೀಳಿಗೆಯಲ್ಲಿ ಸಂಸ್ಕೃತಿ, ಸಂಸ್ಕಾರದ ಜೊತೆಗೆ ಭಾಷಾ ಫ್ರೌಡಿಮೆಯನ್ನು ಬೆಳೆಸುತ್ತದೆ ಎಂದು ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು ಹೇಳಿದರು.ಕಿನ್ನಿಗೋಳಿಯ ಯುಗಪುರುಷದ ಸಭಾ ಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಕಿನ್ನಿಗೋಳಿ ಯುಗಪುರುಷ ಆಶ್ರಯದಲ್ಲಿ ಕರ್ನಾಟಕ ಬ್ಯಾಂಕ್ ಹಾಗೂ ನಮ್ಮ ಕುಡ್ಲ ಸಹಕಾರದಲ್ಲಿ ನಡೆಯುತ್ತಿರುವ ಯಕ್ಷಲಹರಿ ತಾಳಮದ್ದಲೆ ಸಪ್ತಾಹ-೨೦೨೪ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಉದ್ಯಮಿ, ಮೂಲ್ಕಿ ಬಂಟರ ಸಂಘದ ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಧಾರಿ ವಿನಯ ಆಚಾರ್ಯ ಹೊಸಬೆಟ್ಟು, ಹಿರಿಯ ಕಲಾವಿದ, ಪ್ರಸಂಗಕರ್ತ ದಿ. ಸುಬ್ರಹ್ಮಣ್ಯ ಭಟ್ ಚಿತ್ರಾಪುರ ಅವರ ಸಂಸ್ಮರಣಾ ಭಾಷಣಗೈದರು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಪ್ರಸಾದನ ಕಲಾವಿದ ಶರತ್ ಕುಮಾರ್ ಅವರನ್ನು ಗೌರವಿಸಲಾಯಿತು.ಯುಗಪುರುಷದ ಭುವನಾಭಿರಾಮ ಉಡುಪ, ಪುನರೂರು ಬ್ರಹ್ಮ ಮುಗೇರ ದೈವಸ್ಥಾನದ ಮುಖ್ಯಸ್ಥ ರಘುರಾಮ ಪುನರೂರು, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ತಿಕ್ ಭಟ್ ಚಿತ್ರಾಪುರ, ಉಮೇಶ್ ನೀಲಾವರ, ಅಶ್ವಥ ರಾವ್, ಆಕಾಶ್ ರಾವ್, ವೇದವ್ಯಾಸ ರಾವ್, ರಾಮ ಹೊಳ್ಳ, ಶಶಿಧರ ರಾವ್ ಚಿತ್ರಾಪು ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಲಹರಿಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ಸ್ವಾಗತಿಸಿದರು. ಸುಧಾಕರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ವಸಂತ ದೇವಾಡಿಗ ವಂದಿಸಿದರು.