ಜಾನಪದ ಕಲಾವಿದೆ ಲಲಿತಮ್ಮ ಬಸವರಾಜ ಹಿರೇಮಠ ಕುಷ್ಟಗಿ ಪಟ್ಟಣದ ಮಾರುತಿ ನಗರದ ನಿವಾಸಿ
ಕುಷ್ಟಗಿ: ಪಟ್ಟಣದ ಜಾನಪದ ಕಲಾವಿದೆ ಲಲಿತಮ್ಮ ಹಿರೇಮಠ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡುವ 2025-26ನೇ ಸಾಲಿನ ರಾಜ್ಯ ಮಟ್ಟದ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸರ್ಕಾರ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಪಟ್ಟಣದ ಜಾನಪದ ಕಲಾವಿದೆ ಲಲಿತಮ್ಮ ಹಿರೇಮಠ ಆಯ್ಕೆಯಾಗಿರುವದು ಕುಷ್ಟಗಿ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ.ಮಂಗಳವಾರ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಿದ್ದಾರೆ.
ಜಾನಪದ ಕಲಾ ಸೇವೆ ಹಾಗೂ ಸಮಾಜ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.ಜಾನಪದ ಕಲಾವಿದೆ ಲಲಿತಮ್ಮ ಬಸವರಾಜ ಹಿರೇಮಠ ಕುಷ್ಟಗಿ ಪಟ್ಟಣದ ಮಾರುತಿ ನಗರದ ನಿವಾಸಿಯಾಗಿದ್ದು ಇವರು ಬಾಲ್ಯದಿಂದಲೆ ಜಾನಪದ ಕಲೆ ಮೈಗೂಡಿಸಿಕೊಂಡು ಶಾಲಾ ಹಂತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಗಳಿಸಿರುವ ಇವರು ನಂತರ 2013-14ನೇಯ ಸಾಲಿನಲ್ಲಿ ಹತ್ತಾರು ಯುವತಿಯರ ಗುಂಪು ಕಟ್ಟಿಕೊಂಡು ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘ ಕಟ್ಟಿಕೊಂಡು ತಾಲೂಕು, ಜಿಲ್ಲಾ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ ನಡೆಯುವ ಲಾವಣಿ ಪದ, ಜಾನಪದ, ರಂಗಗೀತೆ, ವೈಯಕ್ತಿಕ ಗೀತೆ ಹಾಗೂ ಗುಂಪು ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಮೆಚ್ಚಿದ ಯುವ ಸಬಲೀಕರಣ ಇಲಾಖೆಯು 2015-16ನೇ ಸಾಲಿನಲ್ಲಿ ಜಿಲ್ಲಾ ಯುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇವರ ಸಾಧನೆ ಗುರುತಿಸಿದ ಅನೇಕ ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕಳೆದ 6 ವರ್ಷಗಳಿಂದ ಪುರಾಣ ಪ್ರವಚನ ಕಾರ್ಯಕ್ರಮಗಳಲ್ಲಿ ಗಾಯಕರಾಗಿ ಸೇವೆ ಸಲ್ಲಿಸುವ ಕಾರ್ಯ ಮಾಡುತ್ತಿರುವ ಇವರು ಸರ್ಕಾರದಿಂದ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ತಮ್ಮ ಸಂಘಟನೆಯ ಮೂಲಕ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು ಈ ಕಾರ್ಯಗಳಿಗೆ ಲಲಿತಮ್ಮ ಪತಿ ಬಸವರಾಜ ಹಿರೇಮಠ ಸಹಕಾರ ನೀಡುತ್ತಿದ್ದು ಈ ಸಾಧನೆಗೆ ಮೂಲ ಕಾರಣವಾಗಿದೆ.ನಾನು ಬಾಲ್ಯದಿಂದಲೆ ಜಾನಪದ ಗಾಯಕಳಾಗಿದ್ದು, ಸಾವಿರಾರು ಕಾರ್ಯಕ್ರಮ ನಡೆಸುವ ಮೂಲಕ ಜಾನಪದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಗುರುತಿಸಿ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರಶಸ್ತಿ ಪುರಸ್ಕೃತೆ ಲಲಿತಮ್ಮ ಹಿರೇಮಠ ತಿಳಿಸಿದ್ದಾರೆ.