ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಸಂಕಲ್ಪ ಈಡೇರಿದ ಹಿನ್ನಲೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ಸಂಘಟನೆಯ ಸದಸ್ಯರು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ಶನಿವಾರ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಅನ್ನದಾನಕ್ಕೆ ಅಕ್ಕಿ ಹಾಗೂ ದೀಪದ ಎಣ್ಣೆ ದಾನ ನೀಡಿ ಹರಕೆ ಸಲ್ಲಿಸಿದರು.

ರಾಜ್ಯ ಮುಂಗಡಪತ್ರದಲ್ಲಿ ನೂತನವಾಗಿ ಕೊಡವ ಅಭಿವೃದ್ದಿ ನಿಗಮವು ಘೋಷಣೆಯಾಗಿದ್ದು, ಈ ಪರಿಕಲ್ಪನೆಯನ್ನು ಹುಟ್ಟುಹಾಕಿ, ಇದಕ್ಕಾಗಿ ಕಳೆದ ಒಂದು ದಶಕದಿಂದ ನಿರಂತರ ಪರಿಶ್ರಮಪಟ್ಟಿರುವ ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ಸಂಘಟನೆಯ ಸಂಕಲ್ಪ ಈಡೇರಿದ ಹಿನ್ನಲೆಯಲ್ಲಿ ಸಂಘಟನೆಯ ಸದಸ್ಯರು ಹಾಗೂ ಹಿತೈಷಿಗಳು ಶನಿವಾರ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಕೊಡವ ಅಭಿವೃದ್ಧಿ ನಿಗಮ ಘೋಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮತ್ತು ಈ ಪರಿಕಲ್ಪನೆಯನ್ನು ಯಶಸ್ಸಿನೆಡೆಗೆ ಮುನ್ನಡೆಸಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಸಂಘಟನೆಯ ಸರ್ವ ಸದಸ್ಯರಿಗೆ ಒಳಿತಾಗುವಂತೆ ದೇಶ ತಕ್ಕರಾದ ಪರದಂಡ ವಿಠಲ ಕಾವೇರಪ್ಪ ಬೇಡಿಕೊಂಡರು.

ಈ ಸಂದರ್ಭ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡವ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ನೂತನವಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಪರಿಕಲ್ಪನೆಯನ್ನು ಹುಟ್ಟುಹಾಕಿ ಯುಕೊ ಸಘಟನೆಯು ವ್ಯವಸ್ಥಿತವಾಗಿ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸಿ, ನಿರಂತರ ಹೋರಾಟವನ್ನು ಮಾಡುತ್ತಲೇ ಬಂದಿತ್ತು. ಈ ನಿಟ್ಟಿನಲ್ಲಿ ಹಿಂದಿನ ಸರ್ಕಾರ ಕೊಡವ ಜನಾಂಗದ ಸಮಗ್ರ ಶ್ರೇಯೋಭಿವೃದ್ದಿಗೆಂದು 10 ಕೋಟಿ ನೀಡಿತ್ತು. ಆದರೆ ಇದೀಗ ಶಾಸಕ ಎ. ಎಸ್. ಪೊನ್ನಣ್ಣನವರ ಪ್ರಭಾವದಿಂದ ಕೊಡವ ಅಭಿವೃದ್ಧಿ ನಿಗಮದ ಬೇಡಿಕೆ ಈಡೇರಿದೆ. ಕೊಡಗು ಕರ್ನಾಟಕದೊಂದಿಗೆ ವಿಲೀನದ ನಂತರದಲ್ಲಿ ಕೊಡವರ ಮಹತ್ವದ ಬೇಡಿಕೆಯೊಂದನ್ನು ಸರ್ಕಾರ ಈಡೇರಿಸಿರುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ ಎಂದು ಹೇಳಿದರು.

ಗಣ್ಯರ ಉಪಸ್ಥಿತಿ: ಇದೇ ಸಂದರ್ಭ ದೇಶ ತಕ್ಕರಾದ ಪರದಂಡ ವಿಠಲಕಾವೇರಪ್ಪ ಮಂಜು ಚಿಣ್ಣಪ್ಪಗೆ ಸ್ಮರಣಿಕೆ ನೀಡಿ ಗೌರವಿಸಿದರು. ಯುಕೊ ಸದಸ್ಯರಾದ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಮಚ್ಚಾಮಾಡ ರಮೇಶ್, ಕಾವಡಿಚಂಡ ದೀಪಕ್ ಉತ್ತಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಪಳಂಗಿಯಂಡ ದರ್ಶನ್, ಮುಕ್ಕಾಟಿರ ರಾಬಿನ್, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ಪಾಂಡಂಡ ಸ್ವಾತಿ ಗಣೇಶ್, ಕಾವಡಿಚಂಡ ಪವಿತ್ರ ಉತ್ತಯ್ಯ, ಮಚ್ಚಾಮಾಡ ರೇಶ್ಮಾ ರಮೇಶ್, ಶ್ರಾವ್ಯ ಗಂಗಮ್ಮ ಉಪಸ್ಥಿತರಿದ್ದರು.