ಶ್ರೀನಿವಾಸಪುರ: ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡದೆ ಮಾವು ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮಾವು ಬೆಳೆಗಾರರು, ರೈತ ಮುಖಂಡರು ಹಾಗು ಕಾರ್ಮಿಕ ಸಂಘಟನೆಗಳು ಸೋಮವಾರ ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲೆ ಬಂದ್ ಗೆ ಕರೆ ಕೊಟ್ಟಿದ್ದಾರೆ.

ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ಮಾವಿನ ಸೀಸನ್ ಮುಗಿಯುವ ಹಂತಕ್ಕೆ ಬಂದಿದೆ. ಬಹುತೇಕ ಬೆಳೆಗಾರರು ಮಾವು ಕೊಯ್ಲು ಮಾಡುತ್ತಿದ್ದಾರೆ. ಶ್ರೀನಿವಾಸಪುರ ಕೇಂದ್ರಿಕೃತವಾಗಿ ಸಾವಿರ ಸಾವಿರ ಕುಟುಂಬಗಳು ಮಾವನ್ನು ಜೀವನಾಡಿ ಬೆಳೆಯಾಗಿ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾವು ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿ ಸರ್ಕಾರ ಬೆಳೆಗಾರನ ಕೈಹಿಡಿಯುವ ಅನಿವಾರ್ಯತೆ ಇದೆ. ಇದಕ್ಕಾಗಿ ಪ್ರತಿ ಟನ್ ಮಾವಿನಕಾಯಿಗೆ ಕನಿಷ್ಠ ಹತ್ತು ಸಾವಿರ ಬೆಂಬಲ ಬೆಲೆ ನೀಡುವಂತೆ ಅಧಿಕಾರಿಗಳಾದಿಯಾಗಿ ಎಲ್ಲರನ್ನು ಮನವಿ ಮಾಡಿಕೊಂಡಿದ್ದೇವೆ. ಯಾವುದೇ ಪ್ರಯೋಜನ ಆಗಿಲ್ಲ. ಈಗ ಕೊನೆಯ ಹಂತವಾಗಿ ಸರ್ಕಾರದ ಗಮನ ಸೆಳೆಯಲು ಕೋಲಾರ ಜಿಲ್ಲೆ ಬಂದ್ ಮಾಡಲು ಮುಂದಾಗಿರುವುದಾಗಿ ಹೇಳಿದರು.ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸೂರ್ಯನಾರಾಯಣ್ ಮಾತನಾಡಿ ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣ ಸಣ್ಣ-ಪುಟ್ಟ ಮಾವು ಬೆಳೆಗಾರರು ಕೊಯ್ಲು ಮಾಡಲು ಸಾಧ್ಯವಾಗದೆ ಮರದಲ್ಲೆ ಮಾವನ್ನು ಬಿಡುತ್ತಿದ್ದಾರೆ. ಈ ಎಲ್ಲಾ ವಿದ್ಯಮಾನಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಆದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬೆಂಬಲ ಬೆಲೆ ನೀಡದಿದ್ದರೆ ಬೆಳೆಗಾರ ಬದುಕುವುದಿಲ್ಲ ಎಂದರು. ರೈತ ವಿರೋಧಿ ಸರ್ಕಾರದ ವಿರುದ್ದ ಬಂದ್ ಮಾಡುವಂತೆ ಇದಕ್ಕೆ ವ್ಯಾಪಾರಸ್ಥರು ವಾಣಿಜ್ಯ ಸಂಸ್ಥೆಗಳು, ಹೋಟೆಲ್ ಮಾಲಿಕರು, ಶಾಲಾ ಕಾಲೇಜು ಮುಖ್ಯಸ್ಥರು ಬ್ಯಾಂಕಿಂಗ್ ಮುಖ್ಯಸ್ಥರು ತಮ್ಮ ವಹಿವಾಟು ಸ್ಥಗಿತಗೊಳಿಸುವುದರ ಮೂಲಕ ಬಂದ್ ಬೆಂಬಲಿಸುವಂತೆ ವಿನಂತಿಸಿದರು.