ಆಹಾರ ಸಚಿವ ಕೆ.ಎಚ್‌.ಮನಿಯಪ್ಪ ಅವರ ಮನೆಗೆ ಅಭ್ಯರ್ಥಿ ಗೌತಮ್‌ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದರು. ಇದಕ್ಕೆ ಮುನಿಯಪ್ಪ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಪ್ರಚಾರಕ್ಕೆ ಬರುವುದಾಗಿ ಒಪ್ಪಿಗೆ ನೀಡಿದ್ದಾರೆ.

ಬೆಂಗಳೂರು :  ಕೋಲಾರ ಲೋಕಸಭಾ ಕ್ಷೇತ್ರದ ಪ್ರಚಾರದಿಂದ ದೂರ ಉಳಿದಿದ್ದ ಆಹಾರ ಸಚಿವ ಕೆ.ಎಚ್‌.ಮನಿಯಪ್ಪ ಅವರ ಮನೆಗೆ ಅಭ್ಯರ್ಥಿ ಗೌತಮ್‌ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದರು. ಇದಕ್ಕೆ ಮುನಿಯಪ್ಪ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಪ್ರಚಾರಕ್ಕೆ ಬರುವುದಾಗಿ ಒಪ್ಪಿಗೆ ನೀಡಿದ್ದಾರೆ.

ಸುಮಾರು 2 ಗಂಟೆ ಕಾದು ತಮ್ಮನ್ನು ಭೇಟಿ ಮಾಡಿದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ಅವರಿಗೆ ಪ್ರಚಾರಕ್ಕೆ ಬರುವುದಾಗಿ ಮುನಿಯಪ್ಪ ಭರವಸೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, 13 ಬಾರಿ ಗೆದ್ದ ಇತಿಹಾಸ ಕೋಲಾರ ಲೋಕಸಭಾ ಕ್ಷೇತ್ರಕ್ಕಿದೆ. ಖಂಡಿತವಾಗಿ ಕೋಲಾರದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಗೆಲ್ಲಲಿದೆ. ಗೌತಮ್‌ ನನ್ನ ಸಂಬಂಧಿ. ಹೈಕಮಾಂಡ್‌ ಯಾರಿಗೆ ಟಿಕೆಟ್‌ ಕೊಟ್ಟರೂ ಕೆಲಸ ಮಾಡುವೆ ಎಂದಿದ್ದೆ. ಈಗಲೂ ನನ್ನ ಮಾತಿಗೆ ಬದ್ಧವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕೋಲಾರದಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ಚೆನ್ನಾಗಿದೆ. ನಾನು ನಾಮಪತ್ರ ಸಲ್ಲಿಕೆಗೆ ಹೋಗಿದ್ದೆ. ಸ್ವಾತಂತ್ರ್ಯ ಬಂದಾಗಿನಿಂದ ಸತತವಾಗಿ ಗೆದ್ದಿದೆ. ಗೌತಮ್‌ ಜೊತೆಗೂಡಿ ಕೆಲಸ ಮಾಡುತ್ತೇನೆ. ಗೌತಮ್‌ ನನಗೆ ಹತ್ತಿರದ ಪರಿಚಯ, ಅವರ ತಂದೆ ಜೊತೆಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.