ಧಾರವಾಡ:

ಹಿರಿಯ ಕಲಾವಿದ ಎಂ.ಎಸ್. ಕೊಟ್ರೇಶ್ ಅವರಿಗೆ ಜೀವನವೇ ರಂಗಭೂಮಿಯಾಗಿತ್ತು. ಸುಮಾರು 64 ವರ್ಷಕ್ಕೂ ಹೆಚ್ಚುಕಾಲ ರಂಗಭೂಮಿಗೆ ಸೇವೆ ಸಲ್ಲಿಸಿದ್ದು ಸಣ್ಣ ಸಂಗತಿಯಲ್ಲ ಎಂದು ಸಾಹಿತಿ ಡಾ. ಬಾಳಣ್ಣ ಶೀಗೀಹಳ್ಳಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ವೀರಣ್ಣ ರಾಜೂರ ದತ್ತಿ ಅಂಗವಾಗಿ ಆಯೋಜಿಸಿದ್ದ `ರಾಜಮಾರ್ಗ ಪ್ರಶಸ್ತಿ’ ಪ್ರದಾನ, ರಂಗ ಗೌರವ ಮತ್ತು ಗ್ರಂಥ ಬಿಡುಗಡೆಯಲ್ಲಿ ಮಾತನಾಡಿದ ಅವರು, ಎಂ.ಎಸ್. ಕೊಟ್ರೇಶ್ ಓದಿದ್ದು ಕಡಿಮೆಯಾದರೂ ಅಪಾರ ಜೀವನಾನುಭವ ಹೊಂದಿದವರು. ಬಾಲ್ಯದಿಂದಲೇ ರಂಗಕಲೆಯ ಬಗ್ಗೆ ಆಸಕ್ತಿ ಹೊಂದಿದ ಇವರಿಗೆ ಹೆಚ್ಚು ಕೀರ್ತಿ ತಂದ ನಾಟಕಗಳೆಂದರೆ, ಸಂತ ಶಿಶುನಾಳ ಶರೀಫ ಸಾಹೇಬ ಮಹಾತ್ಮೆ, ಹುಬ್ಬಳ್ಳಿ ಸಿದ್ಧಾರೂಢರ ಮಹಾತ್ಮೆ, ಅಜಾತ ನಾಗಲಿಂಗ ಲೇಲೆ. ಈ ಮೂರು ನಾಟಕಗಳು ಸುಮಾರು 25 ಸಾವಿರ ಪ್ರಯೋಗ ಕಂಡಿದ್ದು ದಾಖಲೆ ಎಂದರು.

ಗುಬ್ಬಿ, ಸುಳ್ಳ, ಗುಡಗೇರಿ, ಗೋಕಾಕ ಕಂಪನಿಗಳಲ್ಲಿ ರಂಗಸೇವೆ ಸಲ್ಲಿಸಿದ ಇವರು 1989ರಲ್ಲಿ ಕೊಟ್ಟೂರೇಶ್ವರ ನಾಟಕ ಮಂಡಳಿ ಸ್ಥಾಪಿಸಿ ಕಲಾ ಸೇವೆ ಮುಂದುವರಿಸಿದ್ದಾರೆ. ಇವರ ಸಂಪತ್ತಿಗೆ ಸವಾಲು ಭದ್ರನ ಪಾತ್ರ ವೀಕ್ಷಿಸಿದ ಡಾ. ರಾಜಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರಂತೆ ಪಂ. ಪುಟ್ಟರಾಜ ಗವಾಯಿಗಳಿಂದಲೂ ಪ್ರಶಂಸಿಸಲ್ಪಟ್ಟವರು ಎಂದು ಹೇಳಿದರು.

ರಾಜಮಾರ್ಗ ಪ್ರಶಸ್ತಿ ಸ್ವೀಕರಿಸಿದ ಎಂ.ಎಸ್. ಕೊಟ್ರೇಶ, ಡಾ. ವೀರಣ್ಣ ರಾಜೂರ ಅವರ ಹೆಸರಿನಿಂದ ಅವರ ಶಿಷ್ಯರು ಕವಿವ ಸಂಘದಲ್ಲಿ ದತ್ತಿ ಇರಿಸಿ ನಮ್ಮಂಥ ಕಲಾವಿದರನ್ನು ಗೌರವಿಸುವುದು ಅಭಿನಂದನೀಯ ಎಂದರು.


ರಂಗಗಗೌರವ ಸ್ವೀಕರಿಸಿದ ಕಲಾವಿದ ಪ್ರಭು ಹಂಚಿನಾಳ ಹಾಗೂ ಗೋಕಾಕದ ರೇವಣಸಿದ್ದಪ್ಪ ನೂಲ್ವಿ ಮಾತನಾಡಿದರು. ಡಾ. ವೀರಣ್ಣ ರಾಜೂರ ಮಾತನಾಡಿ, ಎಂ.ಎಸ್. ಕೊಟ್ರೇಶ ರಂಗಭೂಮಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಸಿಗಬೇಕು. ಈ ಪ್ರಶಸ್ತಿ ಅವರಿಗೆ ನೀಡುವ ಮೂಲಕ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಪಾಂಡುರಂಗ ಪಾಟೀಲ ಮಾತನಾಡಿದರು. ಸತೀಶ ತುರಮರಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ಬಸವರಾಜ ಬೆಂಗೇರಿ, ಡಾ. ರಾಮು ಮೂಲಗಿ, ಪ್ರೊ. ಮಲ್ಲಿಕಾರ್ಜುನ ಕುಂಬಾರ, ಡಾ. ಕಲ್ಮೇಶ ಹಾವೇರಿಪೇಟ, ಡಾ. ಚಂದ್ರಶೇಖರ ರೊಟ್ಟಿಗವಾಡ. ಡಾ. ವೈ.ಎಂ. ಯಾಕೊಳ್ಳಿ ಇದ್ದರು.