ಸಾರಾಂಶ
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಗುರುವಾರ ವೇದಗಂಗಾ ಮತ್ತು ದೂದಗಂಗಾ ಒಂದು ಅಡಿ ಮತ್ತು ಕೃಷ್ಣಾ ನದಿಯ ನೀರಿನಮಟ್ಟ ಎರಡು ಅಡಿ ಏರಿಕೆಯಾಗಿದೆ.
ಚಿಕ್ಕೋಡಿ : ಕೊಯ್ನಾ ಪರಿಸರ ಸೇರಿದಂತೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಗುರುವಾರ ವೇದಗಂಗಾ ಮತ್ತು ದೂದಗಂಗಾ ಒಂದು ಅಡಿ ಮತ್ತು ಕೃಷ್ಣಾ ನದಿಯ ನೀರಿನಮಟ್ಟ ಎರಡು ಅಡಿ ಏರಿಕೆಯಾಗಿದೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿನ ಪಂಚ ನದಿಗಳಿಗೆ ಇಂದು 1,26,317 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಇದರಲ್ಲಿ ಸುಳಕುಡ ಬ್ಯಾರೇಜ್ನಿಂದ ದೂದಗಂಗಾ ನದಿಗೆ 26,400 ಕ್ಯುಸೆಕ್ ಮತ್ತು ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ 99,917 ಕ್ಯುಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ.
ವೇದಗಂಗಾ ನದಿಯ ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಸಿ, ದೂದಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಹಾಗೂ ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್ಗಳು ಜಲಾವೃತಗೊಂಡಿದ್ದು, ಯಕ್ಸಂಬಾ-ದಾನವಾಡ, ಸದಲಗಾ-ಬೋರಗಾಂವ ಸೇತುವೆಗಳು ಮುಳುಗಡೆಯ ಹಂತ ತಲುಪಿವೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಮಳೆ ಗುರುವಾರದಂದು ವಿಶ್ರಾಂತಿ ಪಡೆದಿದೆ.
ಮಹಾ ಜಲಾಶಯಗಳಿಂದ ನೀರು ಬಿಡುಗಡೆ
ಕೊಯ್ನಾ-33,050 ಕ್ಯುಸೆಕ್
ಧೂಮ-4,610 ಕ್ಯುಸೆಕ್
ಕನ್ಹೇರ-3,885 ಕ್ಯುಸೆಕ್
ವಾರಣಾ-3,885 ಕ್ಯುಸೆಕ್
ಕಳಮ್ಮಾವಾಡಿ-5,000 ಕ್ಯುಸೆಕ್
ರಾಧಾನಗರಿ-2,928 ಕ್ಯುಸೆಕ್
ಮಹಾದಲ್ಲಿ ಮಳೆಯ ಪ್ರಮಾಣ(ಮಿಮೀ)
ಕೊಯ್ನಾ- 86
ವಾರಣಾ-31
ಕಾಳಮ್ಮಾವಾಡಿ-34
ಮಹಾಬಳೇಶ್ವರ-87
ನವಜಾ-94
ರಾಧಾನಗರಿ-34
ಕೊಲ್ಲಾಪುರ-7
ಸಾಂಗಲಿ-3
ಕೃಷ್ಣೆಗೆ ಹರಿದು ಬರುತ್ತಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಆಲಮಟ್ಟಿಯಿಂದ ಹೊರಬಿಡುತ್ತಿರುವುದರಿಂದ ಯಾವುದೇ ರೀತಿಯ ಪ್ರವಾಹದ ಆತಂಕವಿಲ್ಲ.
-ಚಿದಂಬರ ಕುಲಕರ್ಣಿ, ತಹಸೀಲ್ದಾರ್.