ಜೂನ್‌ನಲ್ಲಿ ಕೆಆರ್‌ಎಸ್ ಜಲಾಶಯ ಭರ್ತಿ : ಇತಿಹಾಸದಲ್ಲೇ ಪ್ರಥಮ..!

| N/A | Published : Jun 28 2025, 12:18 AM IST / Updated: Jun 28 2025, 10:35 AM IST

ಜೂನ್‌ನಲ್ಲಿ ಕೆಆರ್‌ಎಸ್ ಜಲಾಶಯ ಭರ್ತಿ : ಇತಿಹಾಸದಲ್ಲೇ ಪ್ರಥಮ..!
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದ ಕೃಷ್ಣರಾಜಸಾಗರ ಅಣೆಕಟ್ಟು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಜಲಾಶಯ ಭರ್ತಿಯಾಗುತ್ತಿದ್ದು, ತುಂಬಿದ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.೩೦ರಂದು ಬಾಗಿನ ಸಮರ್ಪಿಸಲಿದ್ದಾರೆ.

ಮಂಡ್ಯ ಮಂಜುನಾಥ

 ಮಂಡ್ಯ :  ಕಾವೇರಿ ಕಣಿ ವೆ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದ ಕೃಷ್ಣರಾಜಸಾಗರ ಅಣೆಕಟ್ಟು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಜಲಾಶಯ ಭರ್ತಿಯಾಗುತ್ತಿದ್ದು, ತುಂಬಿದ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.30ರಂದು ಬಾಗಿನ ಸಮರ್ಪಿಸಲಿದ್ದಾರೆ.

ಪ್ರಸ್ತುತ ಜಲಾಶಯದಲ್ಲಿ 121 ಅಡಿಯಷ್ಟು ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ 52829  ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಅಣೆಕಟ್ಟೆಯಿಂದ 51110 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಈಗ 35 .943 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.

ಜೂನ್ ತಿಂಗಳಲ್ಲಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವುದು ಇತಿಹಾಸದಲ್ಲಿ ಮೊಟ್ಟ ಮೊದಲ ದಾಖಲೆಯಾಗಿರುವಂತೆಯೇ ಜೂನ್ ತಿಂಗಳಲ್ಲಿ ಜಲಾಶಯಕ್ಕೆ ಬಾಗಿನ ಸಲ್ಲಿಸುತ್ತಿರುವ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ. ಇದುವರೆಗೆ ಯಾವೊಬ್ಬ ಮುಖ್ಯಮಂತ್ರಿಯೂ ಜೂನ್ ತಿಂಗಳಿನಲ್ಲಿ ತುಂಬಿದ ಜಲಾಶಯಕ್ಕೆ ಬಾಗಿನ ಸಲ್ಲಿಸಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರನೇ ಬಾರಿಗೆ ಕೆಆರ್‌ಎಸ್‌ಗೆ ಬಾಗಿನ ಸಮರ್ಪಿಸುತ್ತಿದ್ದಾರೆ. ೨೦೧೪ರ ಆ.೭ರಂದು ಕೃಷ್ಣರಾಜಸಾಗರ ಜಲಾಶಯ (೧೨೪.೮೦ ಅಡಿ) ಭರ್ತಿಯಾಗಿತ್ತು. ಆದರೆ, ಅದಕ್ಕೂ ಒಂದು ದಿನ ಮೊದಲೇ ಆ.೬ರಂದೇ ಜಲಾಶಯದ ನೀರಿನ ಮಟ್ಟ ೧೨೪ ಅಡಿ ಇದ್ದಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಾಗಿನ ಸಮರ್ಪಿಸಿದ್ದರು.

2024 ರ ಜುಲೈ 29 ರಂದು ಸಿಎಂ ಸಿದ್ದರಾಮಯ್ಯನವರು ಕೆಆರ್‌ಎಸ್‌ಗೆ ಬಾಗಿನ ಸಲ್ಲಿಸಿದ್ದರೆ, ಈ ವರ್ಷ ಒಂದು ತಿಂಗಳು ಮುಂಚಿತವಾಗಿಯೇ ಬಾಗಿನ ಅರ್ಪಿಸುವ ಸೌಭಾಗ್ಯ ಸಿದ್ದರಾಮಯ್ಯನವರಿಗೆ ಒಲಿದುಬಂದಿದೆ. 2015  ರಿಂದ 2017 ರವರೆಗೆ ಮುಖ್ಯಮಂತ್ರಿಯಾಗಿದ್ದರೂ ಮಳೆಯ ಕೊರತೆಯಿಂದ ಜಲಾಶಯ ಭರ್ತಿಯಾಗಲಿಲ್ಲ. ಸಿದ್ದರಾಮಯ್ಯನವರಿಗೆ ಬಾಗಿನ ಅರ್ಪಿಸುವ ಅವಕಾಶವೂ ಸಿಗಲಿಲ್ಲ.

ಕೆಆರ್‌ಎಸ್ ಅಣೆಕಟ್ಟು 21 ಜೂನ್ 1941 ರಲ್ಲಿ 121.45  ಅಡಿ ತಲುಪಿದ್ದು ಈವರೆಗಿನ ದಾಖಲೆಯಾಗಿತ್ತು. ಅಂದು ಜಲಾಶಯಕ್ಕೆ 3389  ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ 7093  ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಜಲಾಶಯದಲ್ಲಿ 44 .812 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಆನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಜಲಾಶಯ ತುಂಬುತ್ತಿರುವುದು ಇದೇ ಮೊದಲಾಗಿದೆ.

ಇನ್ನು ಜೂನ್ ತಿಂಗಳಲ್ಲಿ ಅಣೆಕಟ್ಟೆಯ ಇತಿಹಾಸದಲ್ಲಿ 16 ಬಾರಿ ಜಲಾಶಯದ ನೀರಿನ ಮಟ್ಟ 100  ಅಡಿಗಿಂತ ಹೆಚ್ಚಾಗಿರುವುದು ದಾಖಲಾಗಿದೆ. 1954 ರಲ್ಲಿ 103.83 ಅಡಿ, 1957 ರಲ್ಲಿ 103 .99 ಅಡಿ, 1961ರಲ್ಲಿ 100.85 ಅಡಿ, 1962 ರಲ್ಲಿ101.05 ಅಡಿ, 1962 ರಲ್ಲಿ 101.51 ಅಡಿ, 1973 ರಲ್ಲಿ110.25 ಅಡಿ, 1976 ರಲ್ಲಿ104.56 ಅಡಿ, 1978ರಲ್ಲಿ 107.57 ಅಡಿ, 1980 ರಲ್ಲಿ 106 .80 ಅಡಿ, 1984 ರಲ್ಲಿ 109.10 ಅಡಿ, 2004 ರಲ್ಲಿ 102.10 ಅಡಿ,  2008ರಲ್ಲಿ 102.48 ಅಡಿ,  2018 ರಲ್ಲಿ 103 .85 ಅಡಿ, 2022 ರಲ್ಲಿ 106 .30 ಅಡಿ, 2025ರ ಜೂ.21ರಂದು 118 60 ಅಡಿ ನೀರು ದಾಖಲಾಗಿರುವುದು ಕಂಡುಬಂದಿದೆ. 

ಜೂ.30 ರಂದು ಕೆಆರ್‌ಎಸ್‌ಗೆ ಸಿಎಂ ಬಾಗಿನ: ಚಲುವರಾಯಸ್ವಾಮಿ

 ಮಂಡ್ಯ :  ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣರಾಜ ಜಲಾಶಯ ಭರ್ತಿಯ ಹಂತ ತಲುಪಿದೆ. ಜೂ.೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಬಿದ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಮುಖ್ಯಮಂತ್ರಿಗಳು ಜೂ.೩೦ ರಂದು ಬೆಳಗ್ಗೆ ೧೦.೩೦ ಗಂಟೆಗೆ ಕೆಆರ್‌ಎಸ್‌ಗೆ ಆಗಮಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸುವರು. ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರಲ್ಲದೇ, ವೇದಿಕೆ, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ, ಕೃಷ್ಣರಾಜಸಾಗರ ಅಧೀಕ್ಷಕ ಅಭಿಯಂತರ ರಘುರಾಮ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Read more Articles on