ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೂತನವಾಗಿ ಆರಂಭಗೊಂಡಿರುವ ಪುತ್ತೂರು ಎಕ್ಸ್ಪ್ರೆಸ್ ಬಸ್ಸುಗಳು ಪುತ್ತೂರು ಮತ್ತು ಮಂಗಳೂರು ನಡುವೆ ನಿಲುಗಡೆಯಿಲ್ಲದೆ ಓಡಾಟ ನಡೆಸಲಿವೆ. ಈ ಬಸ್ಸಿನಿಂದಾಗಿ ಖಾಸಗಿ ಹಾಗೂ ಶಟ್ಲ್ ಬಸ್ಸುಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಪುತ್ತೂರು-ಮಂಗಳೂರು ನೇರವಾಗಿ ಪ್ರಯಾಣ ನಡೆಸುವವರು ಮಾತ್ರ ಪುತ್ತೂರು ಎಕ್ಸ್ಪ್ರೆಸ್ನಲ್ಲಿ ಓಡಾಟ ಮಾಡಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಸೋಮವಾರ ಪುತ್ತೂರು ಸರ್ಕಾರಿ ಬಸ್ನಿಲ್ದಾಣದಲ್ಲಿ ಪುತ್ತೂರು-ಮಂಗಳೂರು ಎಕ್ಸ್ಪ್ರೆಸ್ ಬಸ್ ಸಂಚಾರಕ್ಕೆ ಹಸಿರು ಧ್ವಜ ಹಾರಿಸಿ ಚಾಲನೆ ನೀಡಿದ ಬಳಿಕ, ರಾಜ್ಯದಲ್ಲಿ ಶಕ್ತಿ ಯೋಜನೆಯ ಫಲಾನುಭವಿಗಳು ೫೦೦ಕೋಟಿ ತಲುಪಿದ ಹಿನ್ನಲೆಯಲ್ಲಿ ನಡೆದ ಶಕ್ತಿ ಸಂಭ್ರಮ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುತ್ತೂರಿನಿಂದ ಮಂಗಳೂರಿಗೆ ಸಾಮಾನ್ಯ ಬಸ್ಸುಗಳಲ್ಲಿ ಎರಡರಿಂದ ಎರಡೂವರೆ ಗಂಟೆಯ ಪ್ರಯಾಣವಿದೆ. ಹಾಗಾಗಿ ಜನರ ಬೇಡಿಕೆ ಇತ್ತು. ಇದೀಗ ಆರಂಭವಾದ ‘ಪುತ್ತೂರು ಎಕ್ಸ್ಪ್ರೆಸ್’ ಕೇವಲ ಒಂದು ಗಂಟೆಯಲ್ಲಿ ಮಂಗಳೂರು ತಲುಪಲಿದೆ. ಇದರಿಂದ ಜನತೆಯ ಸಮಯ ಮತ್ತು ಆರ್ಥಿಕ ಉಳಿತಾಯ ಆಗಲಿದೆ ಎಂದರು. ದ.ಕ. ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಅಧಿಕಾರ ಪಡೆದ ೬ ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು. ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಅಮಲಿಂಗಯ್ಯ ಬಿ. ಹೊಸಪ್ಪಪೂಜಾರಿ ಮಾತನಾಡಿ, ಪ್ರತೀ ೨ಂ ನಿಮಿಷಕ್ಕೆ ಒಂದರಂತೆ ಪುತ್ತೂರು ಎಕ್ಸ್ಪ್ರೆಸ್ ಬಸ್ ಸಂಚರಿಸಲಿದೆ. ದಿನವೊಂದಕ್ಕೆ ೬೦ ಟ್ರಿಪ್ಗಳ ಬಸ್ಸು ಸೇವೆಗಳು ಜನರಿಗೆ ಲಭ್ಯವಾಗಲಿದೆ ಎಂದರು. ಸುರಕ್ಷಿತ ಚಾಲನೆಗಾಗಿ ಚಾಲಕರಾದ ಉದಯಕುಮಾರ್, ರಾಜು ಗಜಕೋಶ, ಗಿರಿಧರ್, ನವೀನ್ಚಂದ್ರ, ಅಮೋಘಸಿದ್ಧ ಮತ್ತು ಬಾಲಕೃಷ್ಣ ಅವರನ್ನು ಶಾಸಕರು ಗೌರವಿಸಿದರು. ಪುತ್ತೂರು ಎಕ್ಸ್ಪ್ರೆಸ್ ಬಸ್ಸಲ್ಲಿ ಪಯಣ ಆರಂಭಿಸಿದ ಪ್ರಯಾಣಿಕರಿಗೆ ಶಾಸಕರು ಗುಲಾಬಿ ಹೂ ಹಾಗೂ ಸಿಹಿತಿಂಡಿ ನೀಡಿ ಶುಭಕೋರಿದರು.ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ವಿಭಾಗೀಯ ಸಂಚಲನಾ ಅಧಿಕಾರಿ ಜೈಶಾಂತ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ದ.ಕ.ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಜೋಕಿಂ ಡಿಸೋಜ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ಮತ್ತಿತರರು ಇದ್ದರು. ಪುತ್ತೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಸ್ಸಾರ್ಟಿಸಿ ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಸ್ವಾಗತಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು ವಂದಿಸಿದರು. ಕೆಎಸ್ಸಾರ್ಟಿಸಿಯ ಸಿಬ್ಬಂದಿ ಮಾಧವ ಶೆಣೈ ನಿರೂಪಿಸಿದರು.