ಸಾರಾಂಶ
ಬೆಂಗಳೂರು ಗುರುರಾಜ್ ಲೇಔಟ್ ನಿವಾಸಿ ಕೃಷ್ಣಮೂರ್ತಿ ಎಂದು ಗುರುತಿಸಲಾಗಿದ್ದು, ಮಗ ಅಶ್ವತ್ ನಾರಾಯಣ ಅವರನ್ನು ಸುಬ್ರಹ್ಮಣ್ಯ ಠಾಣೆಗೆ ಕರೆಯಿಸಿ ಅವರೊಂದಿಗೆ ಕಳುಹಿಸಿಕೊಡಲಾಗಿದೆ.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಿದ ಘಟನೆ ಶುಕ್ರವಾರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಬಳಿ ನಡೆದಿದೆ.ಬೆಂಗಳೂರಿನಿಂದ ಒಂಟಿಯಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ವೃದ್ಧರೊಬ್ಬರು ಸ್ನಾನಘಟ್ಟದ ಬಳಿ ನೀರಿಗೆ ಇಳಿದಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದವರು ದೇವಳದ ಸಿಬ್ಬಂದಿ ಲೋಕಾನಾಥ್ ಎಂಬವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲ್ಲಿಗೆ ಆಗಮಿಸಿದ ಲೋಕನಾಥ್ ಸ್ಥಳೀಯರ ಸಹಕಾರದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧರನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಮನೆಯವರ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ವೃದ್ಧರು, ಯಾಕೆ ನನ್ನ ರಕ್ಷಣೆ ಮಾಡಿದಿರೆ ಮನಸ್ಸಿಗೆ ಬೇಜಾರಾಗಿ ನಾನು ಸಾಯಲೆಂದು ಮನೆಬಿಟ್ಟು ಬಂದಿರುವುದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ. ಬಳಿಕ ಅವರನ್ನು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಲಾಯಿತು. ವಿಚಾರಣೆ ನಡೆಸಿದ ಪೊಲೀಸರು ಮಾಹಿತಿ ಸಂಗ್ರಹಿಸಿ ಸಂಬಂಧಿಕರಿಗೆ ಒಪ್ಪಿಸಿದ್ದಾರೆ.ಬೆಂಗಳೂರು ಗುರುರಾಜ್ ಲೇಔಟ್ ನಿವಾಸಿ ಕೃಷ್ಣಮೂರ್ತಿ ಎಂದು ಗುರುತಿಸಲಾಗಿದ್ದು, ಮಗ ಅಶ್ವತ್ ನಾರಾಯಣ ಅವರನ್ನು ಸುಬ್ರಹ್ಮಣ್ಯ ಠಾಣೆಗೆ ಕರೆಯಿಸಿ ಅವರೊಂದಿಗೆ ಕಳುಹಿಸಿಕೊಡಲಾಗಿದೆ.
ವೃದ್ದ ಕೃಷ್ಣಮೂರ್ತಿ ನಾಪತ್ತೆ ಆಗಿರುವ ಬಗ್ಗೆ ೪ ದಿನಗಳ ಹಿಂದೆ ಬೆಂಗಳೂರಿನ ಎಚ್ಎಎಲ್ ಠಾಣೆಯಲ್ಲಿ ಪುತ್ರ ಅಶ್ವತ್ ನಾರಾಯಣ ದೂರು ದಾಖಲಿಸಿದ್ದರೆಂದು ತಿಳಿದುಬಂದಿದೆ.